ಸರ್ಕಾರದ ಮೂರು ಕಚೇರಿ ಬೆಳಗಾವಿಗೆ ಶಿಫ್ಟ್: ಎಚ್ಡಿಕೆ ಘೋಷಣೆ
ಬೆಂಗಳೂರು, ಜುಲೈ 31: ಉತ್ತರ ಕರ್ನಾಟಕದ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರತಿ ಜಿಲ್ಲೆಗೆ ಎರಡು ದಿನಗಳು ಭೇಟಿ ನೀಡುವುದಾಗಿ ಘೋಷಿಸಿರುವ ಎಚ್ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ಪ್ರಮುಖ ಮೂರು ಕಚೇರಿಗಳನ್ನು ಕೂಡಲೇ ಸ್ಥಳಾಂತರಿಸುವುದಾಗಿ ಪ್ರಕಟಿಸಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಉತ್ತರ ಕರ್ನಾಟಕ ಹೋರಾಟ ಸಮಿತಿ ನಿಯೋಗದ ಜತೆಗೆ ಚರ್ಚಿಸಿದ ಅವರು ಯಾವ ಕಾರಣಕ್ಕೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಅವಕಾಶ ಕೊಡುವುದಿಲ್ಲ, ಈಗಾಗಲೇ ಆಗಿರುವ ಅನ್ಯಾಯ ಸರಿಪಡಿಸಲು, ರಾಜ್ಯ ಸರ್ಕಾರ ಬದ್ಧವಿದ್ದು, ಶೀಘ್ರದಲ್ಲೇ ಬೆಳಗಾವಿಯಲ್ಲಿ ಸಭೆ ನಡೆಸುವ ಚಿಂತನೆ ಇದೆ ಎಂದರು.
ಉಸಿರಿರುವ ತನಕ ರಾಜ್ಯ ವಿಭಜನೆಗೆ ಅವಕಾಶ ಕೊಡಲಾರೆ: ಯಡಿಯೂರಪ್ಪ
ಉತ್ತರ ಕರ್ನಾಟಕ ಹೋರಾಟ ಸಮಿತಿಯ ಸದಸ್ಯರ ಜತೆಗೆ ಚರ್ಚೆ ನಡೆಸಿದ ಅವರು, ಕೃಷ್ಣ ಭಾಗ್ಯ ಜಲನಿಗಮ, ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರ ಕಚೇರಿ ಹಾಗೂ ಉಪಲೋಕಾಯುಕ್ತರ ಕಚೇರಿಯನ್ನು ಸ್ಥಳಾಂತರಿಸಲಾಗುತ್ತದೆ. ಪ್ರತ್ಯೇಕತೆಯ ಧ್ವನಿಗೆ ಯಾವುದೇ ಹೋರಾಟ ಸಮಿತಿ ಅವಕಾಶ ನೀಡಬಾರದು ಕಾಲಕಾಲಕ್ಕೆ ಜನಪ್ರತಿನಿಧಿಗಳು ಹಾಗೂ ಮುಖಂಡರ ಜತೆಗೆ ಚರ್ಚಿಸಿ ಪರಿಹಾರ ಕಲ್ಪಿಸಲು ಸರ್ಕಾರ ಬದ್ಧವಾಗಿದೆ.
ಅಷ್ಟೇ ಅಲ್ಲ ಮುಂದಿನ ವಾರದಿಂದಲೇ ಪ್ರತಿ ಜಿಲ್ಲೆಗೆ ಎರೆಡೆರೆಡು ದಿನಗಳ ಕಾಲ ಭೇಟಿ ನೀಡಿ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ನೀಡಲಾಗುವುದು, ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಬಜೆಟ್ನಲ್ಲಿ ಒಂದೂವರ ಸಾವಿರ ಕೋಟಿ ಮೀಸಲಿಟ್ಟಿದ್ದ ಮೊದಲ ಮುಖ್ಯಮಂತ್ರಿ ಎನಿಸಿಕೊಂಡಿದ್ದೆ ಈಗಲೂ ಕಕೂಡ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಎಲ್ಲಾ ರೀತಿಯ ಬೇಡಿಕೆಗಳನ್ನು ಸ್ಪಂದಿಸಲು ಬದ್ಧನಿದ್ದೇನೆ ಆದರೆ ಸ್ವಲ್ಪ ಕಾಲಾವಕಾಶ ಬೇಕು ಹಾಗೂ ವ್ಯವಧಾನದಿಂದ ಯಾವತ್ತೂ ಪ್ರತ್ಯೇಕತೆಯ ಹೋರಾಟಕ್ಕೆ ಧುಮುಕಬಾರದು ಎಂದು ಮನವಿ ಮಾಡಿದರು.
ಕಳೆದ ಬಾರಿ ನಾನು ಸಿಎಂ ಆಗಿದ್ದಾಗ ಹೆಚ್ಚು ಗ್ರಾಮ ವಾಸ್ತವ್ಯ ಮಾಡಿದ್ದೆ. ಮತ ನೀಡುವುದು ಬಿಡುವುದು ಜನರಿಗೆ ಸೇರಿದ್ದು. ಬೆಳಗಾವಿ ವಿಚಾರದಲ್ಲಿ ಮಹರಾಷ್ಟ್ರ ಕ್ಯಾತೆ ತೆಗೆಯುತ್ತಿತ್ತು. ಹಾಗಾಗಿ ಸುವರ್ಣಸೌಧ ನಿರ್ಮಾಣ ಮಾಡಿ ಅಲ್ಲಿಯೇ ಅಧಿವೇಶನ ಆರಂಭಿಸಿದ್ದೆ.
ಉತ್ತರ ಕರ್ನಾಟಕದ ಜನ ನಮ್ಮ ಭಾಗದ ಜನರಿಗಿಂತ ಹೆಚ್ಚು ಪ್ರೀತಿ ತೋರಿದ್ದೀರಿ. ಚುನಾವಣೆಯಲ್ಲಿ ನಾನು ಬಂದಾಗಲೂ ಹೆಚ್ಚು ಸಂಖ್ಯೆಯಲ್ಲಿ ಜನ ಸೇರಿದ್ದೀರಿ. ನಮ್ಮ ಪಕ್ಷದ ನಾಯಕರು ಅಲ್ಲಿ ನಿಮ್ಮಿಂದ ಮತ ಪಡೆಯುವಷ್ಟು ಶಕ್ತರಾಗಿಲ್ಲ. ನಾನು ಉತ್ತರ ಕರ್ನಾಟಕ ವಿರೋಧಿ ಅಂತಾ ಬಿಜೆಪಿಯವರು ಬಿಂಬಿಸುತ್ತಿದ್ದಾರೆ ಅದು ಸುಳ್ಳು ಎಂದರು.