ಮಹಿಳೆಯನ್ನು ಬಲಿ ತೆಗೆದುಕೊಂಡ ಬೆಂಗಳೂರು ಬ್ಲಾಸ್ಟ್
ಬೆಂಗಳೂರು, ಡಿ. 29 : ನಗರದ ಮಹಾತ್ಮಾ ಗಾಂಧಿ ರಸ್ತೆಗೆ ಸಮಾನಾಂತರವಾಗಿರುವ ಚರ್ಚ್ ಸ್ಟ್ರೀಟ್ ನಲ್ಲಿ ಡಿ.28ರ ಸಂಜೆ 8.30ಕ್ಕೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತಮಿಳುನಾಡು ಮೂಲದ ಭವಾನಿ (38) ಅವರು ಚಿಕಿತ್ಸೆ ಫಲಕಾರಿಯಾಗದೆ ಮಲ್ಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಭವಾನಿ ಅವರು ತಮ್ಮ ಕುಟುಂಬದವರೊಡನೆ ಚರ್ಚ್ ಸ್ಟ್ರೀಟ್ ನಲ್ಲಿ ಬರುತ್ತಿದ್ದಾಗ ಕೋಕೋನಟ್ ಗ್ರೋವ್ ಹೋಟೆಲ್ ಮುಂಭಾಗದಲ್ಲಿ, ಹೂಕುಂಡದಲ್ಲಿ ಇಡಲಾಗಿದ್ದ ಕಡಿಮೆ ಪ್ರಮಾಣದ ಬಾಂಬ್ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ ಭವಾನಿ ಅವರ ಕುಟುಂಬದ ಸದಸ್ಯ ಕಾರ್ತಿಕ್ ಅವರು ಕೂಡ ಗಾಯಗೊಂಡಿದ್ದರು. ಜೊತೆಗೆ ಸಾಫ್ಟ್ ವೇರ್ ಇಂಜಿನಿಯರ್ ಸಂದೀಪ್ ಅವರ ಕಾಲಿಗೆ ಗಾಯವಾಗಿತ್ತು. ಇವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಾಂಬ್ ಸ್ಪೋಟವಾಗುತ್ತಿದ್ದಂತೆ ಭವಾನಿ ಅವರ ತಲೆಗೆ ತೀವ್ರವಾಗಿ ಗಾಯವಾಗಿತ್ತು. ತಲೆ ಸೀಳಿ ತೀವ್ರ ರಕ್ತಸ್ರಾವವಾಗಿತ್ತು. ಅವರನ್ನು ಕೂಡಲೆ ಆಟೋದಲ್ಲಿ ಕರೆದುಕೊಂಡು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ತಲೆಬುರುಡೆಗೆ ತೂತಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ. [ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟ]
ಬಾಲನ್ ಕುಮಾರ್ ಎಂಬುವವರ ಪತ್ನಿಯಾಗಿರುವ ಭವಾನಿ ಅವರಿಗೆ 15 ವರ್ಷದ ಮಗಳು ಮತ್ತು 11 ವರ್ಷದ ಮಗನಿದ್ದಾನೆ. ಸಂಬಂಧಿಯೊಬ್ಬರ ಹುಟ್ಟುಹಬ್ಬದ ಆಚರಣೆಗೆಂದು ಅವರು ಮಕ್ಕಳೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. ಮಕ್ಕಳಿಗೆ ಆಟವಾಡಿಸಲೆಂದು ಅಮೀಬಾಗೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಆದರೆ, ಹುಟ್ಟುಹಬ್ಬದ ಆಚರಣೆ ಶೋಕಾರಣೆಯಲ್ಲಿ ಪರ್ಯವಸಾನವಾಗಿರುವುದು ನಿಜಕ್ಕೂ ದುರಂತ. ರಾಜ್ಯ ಸರಕಾರ ಮೃತರ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ಘೋಷಿಸಿದೆ.
ಯಾರ ಕೈವಾಡ? : ಬಾಂಬ್ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಬಳಸಲಾಗಿತ್ತು. ಲುಂಗಿಯಲ್ಲಿ ಸುತ್ತಿಡಲಾಗಿದ್ದ ಸ್ಫೋಟಕವನ್ನು ಟೈಮರ್ ಬಳಸಿ ಸ್ಫೋಟಿಸಲಾಗಿದೆ. ಈ ಸ್ಫೋಟದ ಹಿಂದೆ ತಮಿಳುನಾಡು ಮೂಲದ ಅಲ್ ಉಮ್ಮಾಹ್ ಉಗ್ರ ಸಂಘಟನೆಯ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ. 1998ರ ಕೋಯಮತ್ತೂರು ಸ್ಫೋಟದಲ್ಲಿಯೂ ಇದೇ ರೀತಿಯ ಸ್ಫೋಟಗಳನ್ನು ಬಳಸಲಾಗಿತ್ತು. ಇದೇ ಸಂಘಟನೆ 2008ರ ಬೆಂಗಳೂರು ಸ್ಫೋಟದಲ್ಲಿಯೂ ಭಾಗಿಯಾಗಿತ್ತು. ಸ್ಫೋಟಕಕ್ಕೆ ಬಳಸಲಾದ ವಸ್ತುಗಳನ್ನು ಘಟನಾ ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿದ್ದು ತನಿಖೆ ಜಾರಿಯಲ್ಲಿದೆ.
ಪೊಲೀಸ್ ಅಧಿಕಾರಿಗಳ ಉನ್ನತ ಸಭೆ : ಚರ್ಚ್ ಸ್ಟ್ರೀಟ್ ದುರ್ಘಟನೆ ಸಂಭವಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದಾರೆ. ಈ ನಡುವೆ, ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಎಲ್ಲ ಜನನಿಬಿಡ ಸ್ಥಳಗಳಲ್ಲಿ ಬಂದೋಬಸ್ತನ್ನು ಬಿಗಿಗೊಳಿಸಲಾಗಿದೆ. ರಾಜ್ಯದ ಇತರೆಡೆಗಳಲ್ಲಿಯೂ ಕಟ್ಟೆಚ್ಚರದಿಂದಿರುವಂತೆ ಸೂಚಿಸಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೂಡ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದು, ಹೆಚ್ಚುವರಿ ಭದ್ರತೆ ಒದಗಿಸುವುದಾಗಿ ಹೇಳಿದ್ದಾರೆ.