ಚರ್ಚ್ಸ್ಟ್ರೀಟ್ನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಕುರಿತಂತೆ ಕಲಾಕೃತಿ ಪ್ರದರ್ಶನ
ಬೆಂಗಳೂರು, ನ.13: ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ವಾಹನಗಳ ಬಳಕೆಯನ್ನು ಉತ್ತೇಜಿಸಲು ನಗರದ ಚರ್ಚ್ಸ್ಟ್ರೀಟ್ನಲ್ಲಿ ಚಿತ್ತಾಕರ್ಷಕ ಕಲಾಕೃತಿಯೊಂದನ್ನು ರೂಪಿಸಲಾಗಿದೆ. ಗುಜರಿ ಸಾಮಗ್ರಿಗಳಿಗೆ ಹೊಳಪು ನೀಡಿ ಎಲೆಕ್ಟ್ರಿಕ್ ವಾಹನದ ಪ್ರತಿಕೃತಿಯೊಂದನ್ನು ನಿರ್ಮಿಸಲಾಗಿದೆ.
ಈ ಪ್ರತಿಕೃತಿ ಸೌರಶಕ್ತಿಯ ನೆರವಿನಿಂದ ಕಾರ್ಯನಿರ್ವಹಿಸುತ್ತದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ದೇಶ ದಾಪುಗಾಲಿಡುತ್ತಿರುವ ಕುರುಹಾಗಿ ಈ ಪ್ರತಿಕೃತಿಯೂ ಇಂಟರ್ ಆಕ್ಟಿವ್ ಆಗಿದೆ.
ಬೆಂಗಳೂರು ಮೂವಿಂಗ್ ಹೆಸರಿನ ಸಂಸ್ಥೆಯೊಂದು ''ಇವಿಮೈಡೆಲಿವರಿ'' ಅಭಿಯಾನವನ್ನು ನಡೆಸುತ್ತಿದ್ದು, ಇದರ ಭಾಗವಾಗಿರುವ ಈ ಇಂಟರ್ಯಾಕ್ಟಿವ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನದ ಮಾದರಿಯು ಕಲೆ ಮತ್ತು ವಿಜ್ಞಾನದ ಸಂಗಮದಂತಿದೆ. ಸರಕು ಸಾಗಾಣಿಕೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಅಗತ್ಯತೆಯನ್ನು ಇದು ಪ್ರತಿಬಿಂಬಿಸುತ್ತದೆ. ಈ ಕಲಾಕೃತಿಯ ವೀಕ್ಷಕರು ಇದನ್ನು ಸ್ಪರ್ಶಿಸಿ ಎಲೆಕ್ಟ್ರಿಕ್ ವಾಹನದ ರಿಯಲ್ ಟೈಮ್ ಅನುಭವ ಪಡೆಯಬಹುದು.

ಚರ್ಚ್ಸ್ಟ್ರೀಟ್ನಲ್ಲೊಂದು ವಿಭಿನ್ನ ಕಲಾಕೃತಿ
ಚರ್ಚ್ಸ್ಟ್ರೀಟ್ ಮೆಟ್ರೋ ರೈಲು ನಿಲ್ದಾಣದ ಪ್ರವೇಶದ್ವಾರದಲ್ಲಿರುವ ಈ ಪ್ರತಿಕೃತಿಯನ್ನು ಶನಿವಾರ ಮತ್ತು ಭಾನುವಾರ (ನವೆಂಬರ್ 12 ಮತ್ತು 13) ಕಣ್ತುಂಬಿಕೊಳ್ಳಬಹುದು. ನಗರ ಭೂಸಾರಿಗೆ ನಿರ್ದೇಶನಾಲಯ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮದ ಸಂಯುಕ್ತ ಸಹಯೋಗದಲ್ಲಿ ಈ ಎಲೆಕ್ಟ್ರಿಕ್ ವಾಹನದ ಪ್ರತಿಕೃತಿಯನ್ನು ಸ್ಥಾಪಿಸಲಾಗಿದೆ.

ಸರಕು ಸಾಗಾಣಿಕೆಯಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಅಗತ್ಯ
ಪ್ರತಿಕೃತಿಯನ್ನು ಅನಾವರಣ ಮಾಡಿ ಮಾತನಾಡಿದ ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತಿ ವಿ. ಮಂಜುಳಾ ''ಇವಿಮೈಡೆಲಿವರಿ ಅಭಿಯಾನ ಮತ್ತು ಇಲ್ಲಿ ಪ್ರದರ್ಶಿಸಲಾಗಿರು ಪ್ರತಿಕೃತಿ, ಇ ಕಾಮರ್ಸ್ ಸಂಸ್ಥೆಗಳ ಸರಕು ಸಾಗಾಣಿಕೆಯಲ್ಲಿ ಆಗುವ ಮಾಲಿನ್ಯದ ಬಗ್ಗೆ ಅರಿವು ಮೂಡಿಸುತ್ತಿದೆ. ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಸರಕು ಪೂರೈಕೆಯಲ್ಲಿ ಬಳಸಿದರೆ ಬಹುದೊಡ್ಡ ಪ್ರಮಾಣದಲ್ಲಿ ಇಂಗಾಲದ ಮಾಲಿನ್ಯವನ್ನು ತಡೆಗಟ್ಟಬಹುದು. ಕರ್ನಾಟಕದಲ್ಲಿ ಸುಸ್ಥಿರ ಸಾರಿಗೆಗೆ ನಗರ ಭೂಸಾರಿಗೆ ನಿರ್ದೇಶನಾಲಯ ಒತ್ತು ನೀಡುತ್ತಿದೆ. ಬೆಂಗಳೂರು ಮೂವಿಂಗ್ ಅಭಿಯಾನವನ್ನು ಸರ್ಕಾರ ಬೆಂಬಲಿಸುತ್ತದೆ'' ಎಂದಿದ್ದಾರೆ.

ಸುಸ್ಥಿರತೆ ಕಾಪಾಡುವ ಉದ್ದೇಶದಿಮದ ಪ್ರದರ್ಶನ
ಸ್ಟಾಂಡ್.ಅರ್ಥ್ ಅಧ್ಯಯನ ಸಂಸ್ಥೆಯ ವರದಿಯೊಂದರ ಪ್ರಕಾರ ಭಾರತದಲ್ಲಿ ಪ್ಯಾಕೇಜ್ ಡೆಲಿವರಿಯಿಂದಲೇ 285gCO2 ಇಂಗಾಲದ ಮಾಲಿನ್ಯ ಉಂಟಾಗುತ್ತಿದ್ದು, ಇದು ಜಾಗತಿಕ ಸರಾಸರಿ 204gCO2 ಗಿಂತಲೂ ಹೆಚ್ಚಿದೆ.
ದೆಹಲಿ, ಮುಂಬೈ ಕೋಲ್ಕತಾ, ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ ಉಂಟಾಗುವ ಇಂಗಾಲದ ಮಾಲಿನ್ಯ ಇತರೆ ಇಡೀ ದೇಶದ ಮಾಲಿನ್ಯ ಪ್ರಮಾಣಕ್ಕಿಂತ ಹೆಚ್ಚು. 2030ರ ಹೊತ್ತಿಗೆ ಆನ್ಲೈನ್ ಶಾಪ್ಪಿಂಗ್ನಲ್ಲಿ ಅಂದಾಜು 500 ಮಿಲಿಯ ಗ್ರಾಹಕರಿರಲಿದ್ದಾರೆ ಎಂದು ವರದಿ ತಿಳಿಸಿದೆ.
"ಈ ಪ್ರತಿಕೃತಿಯ ಮೂಲಕ ಬೆಂಗಳೂರು ಮೂವಿಂಗ್ ಸಂಸ್ಥೆ ಗ್ರಾಹಕರಲ್ಲಿ ಬ್ರಾಂಡ್ ಮತ್ತು ಕಂಪನಿಗಳ ಬಗ್ಗೆ ಇರುವ ಅತೀವ ಆಸಕ್ತಿಯನ್ನು ಶೂನ್ಯಕ್ಕಿಳಿಸಿ ಸುಸ್ಥಿರತೆಯನ್ನು ಕಾಪಾಡುವ ಉದ್ದೇಶ ಹೊಂದಲಾಗಿದೆ" ಎಂದು ಬೆಂಗಳೂರು ಮೂವಿಂಗ್ನ ಕ್ಯಾಂಪೇನರ್ ನಾವ್ಧಾ ಮಲ್ಹೋತ್ರ ತಿಳಿಸಿದ್ದಾರೆ.

ಸಾಮಾಜಿಕ ಅರಿವು ಮೂಡಿಸಲು ಕಲೆಯ ಬಳಕೆ
ಸಾಮಾಜಿಕ ಅರಿವು ಮೂಡಿಸಲು ಕಲೆಯನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಈ ಪ್ರತಿಕೃತಿ ಪ್ರದರ್ಶನ ಉತ್ತಮ ಉದಾಹರಣೆಯಾಗಿದೆ. ಮುಂಬೈ ಮೂಲದ ವರ್ಕ್ಶಾಪ್ ಕ್ಯೂ ಕಲಾವಿದರಾದ ರಾಧಿಕಾ ಮತ್ತು ಮಾಧವಿ, ಬೆಂಗಳೂರಿನ ರಾಹುಲ್ ಕೆಪಿ ಒಟ್ಟಾಗಿ ಇದನ್ನು ನಿರ್ಮಿಸಿದ್ದಾರೆ.
''ಜನರಿಗೆ ಪ್ರೇರಣೆ ನೀಡಲು ಕಲೆಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಪರ್ಯಾಯ ಜಗತ್ತಿನ ಸಾಧ್ಯತೆಗಳನ್ನು ಇದು ತೆರೆದಿಡುತ್ತದೆ. ಈ ಮಾದರಿ ಇವಿ ಪ್ರತಿಕೃತಿಯ ಮೂಲಕ ನಾವು ಅನೇಕ ಪರ್ಯಾಯ ಅವಕಾಶಗಳನ್ನು ಪ್ರತಿಪಾದಿಸುತ್ತಿದ್ದೇವೆ'' ಎಂದು ರಾಧಿಕಾ ಮತ್ತು ಮಾಧವಿ ಹೇಳಿದ್ದಾರೆ.
ಆಟೋಗುರು ಮತ್ತು ಬೆಂಗಳೂರು ಡಿಸೈನ್ ವೀಕ್ ಸಂಸ್ಥೆಗಳೂ ಅಭಿಯಾನಕ್ಕೆ ಕೈಜೋಡಿಸಿವೆ. ಸರಕು ಸಾಗಾಣಿಕೆ ಕ್ಷೇತ್ರದ ಪಾಲುದಾರರಾದ ಆಟೋಮೊಬೈಲ್, ಇ ಕಾಮರ್ಸ್, ನವೋದ್ಯಮ ಮತ್ತು ಡಿಸೈನ್ ಸ್ಟುಡಿಯೋಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಇಲ್ಲಿ ಮಾಡಲಾಗಿದೆ.












Click it and Unblock the Notifications