ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ದರ್ಶನ್ ಪ್ರಚಾರ: ಜಾಣ ಹೆಜ್ಜೆಯಿಟ್ಟ ಕಾಂಗ್ರೆಸ್
ಸೆಲೆಬ್ರಿಟಿಗಳು ಬಂದು ಪ್ರಚಾರ ಮಾಡಿದರೆ, ಅದು ಯಾವ ಮಟ್ಟಿಗೆ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತೆ ಎನ್ನುವುದು ಊಹಿಸುವುದು ಕಷ್ಟ. ಆದರೂ, ಕಲಾವಿದರಿಂದ ಪ್ರಚಾರ ನಡೆಸುವುದು ಒಂದು ರೀತಿಯಲ್ಲಿ ಸಂಪ್ರದಾಯದ ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ.
ಅದಕ್ಕೆ ಕೊಡಬಹುದಾದ ಲೇಟೆಸ್ಟ್ ಉದಾಹರಣೆಯೆಂದರೆ ರಾಜರಾಜೇಶ್ವರಿ ನಗರದ ಚುನಾವಣೆಯ ಪ್ರಚಾರದ ಆಖಾಡ. ಕರ್ನಾಟಕದ ಸಿನಿರಸಿಕರ ಪಾಲಿನ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕರೂ ಆಗಿರುವ ಬಿಜೆಪಿ ಅಭ್ಯರ್ಥಿಮುನಿರತ್ನ ಪರ ಪ್ರಚಾರ ನಡೆಸಿದ್ದರು.
ಚುನಾವಣಾ ಪ್ರಚಾರದಲ್ಲಿ ಮೂಲ ಬಿಜೆಪಿಗರಿಂದ ಮುನಿರತ್ನಗೆ ಭಯ ಕಾಡಿತೇ?
ಮುನಿರತ್ನ ಅವರ ಈ ತಂತ್ರಗಾರಿಕೆ ಯಾವ ಮಟ್ಟಿಗೆ ಫಲ ನೀಡುತ್ತೆ ಎನ್ನುವುದು ಈಗಾಗಲೇ ಹೇಳಿದಂತೆ, ಚುನಾವಣಾ ಫಲಿತಾಂಶದ ವರೆಗೆ ಕಾಯಬೇಕಾಗುತ್ತದೆ. ಆದರೆ, ಬಿಜೆಪಿಯ ರಣತಂತ್ರ ಮೇಲ್ನೋಟಕ್ಕೆ ಭರ್ಜರಿಯಾಗಿ ವರ್ಕೌಟ್ ಆಗಿತ್ತು.
ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಹೊಸ ಸವಾಲು ಹಾಕಿದ ಸಂಸದ ಡಿ.ಕೆ. ಸುರೇಶ್!
ಅದು ಯಾಕೆಂದರೆ, ದರ್ಶನ್ ಪ್ರಚಾರದ ವೇಳೆ ಅವರಿಗೆ ಸಿಕ್ಕ ಅಭೂತಪೂರ್ವ ಸ್ವಾಗತ. ಒಂದು ರೀತಿಯಲ್ಲಿ ಹೇಳಬಹುದಾದರೆ, ಬಹುಷಃ ಬಿಜೆಪಿ ಅಥವಾ ಮುನಿರತ್ನ, ಅದಕ್ಕಿಂತಲೂ ಹೆಚ್ಚಾಗಿ ನಟ ದರ್ಶನ್, ಈ ರೀತಿಯಲ್ಲಿ ಜನರು ಕಿಕ್ಕಿರಿದು ಕಾಯುತ್ತಾರೆ ಎಂದು ನಿರೀಕ್ಷಿರಲಿಕ್ಕಿಲ್ಲ. ಇದರಿಂದ ವಿಚಲಿತರಾದರೂ, ಕಾಂಗ್ರೆಸ್ ಅಭ್ಯರ್ಥಿ ಜಾಣ ಹೇಳಿಕೆಯನ್ನು ನೀಡಿದ್ದಾರೆ.
ನಟಿ ಅಮೂಲ್ಯ ಮತ್ತು ದರ್ಶನ್ ರೋಡ್ ಶೋ
ಮುನಿರತ್ನ ಚಿತ್ರ ನಿರ್ಮಾಪಕರೂ ಆಗಿರುವುದರಿಂದ ಸೆಲೆಬ್ರಿಟಿಗಳ ದಂಡೇ ಆರ್.ಆರ್.ನಗರದ ಚುನಾವಣಾ ಪ್ರಚಾರದ ವೇಳೆ ಹರಿದು ಬರಬಹುದು ಎನ್ನುವುದು ಬಹುತೇಕ ಸುಳ್ಳಾಗಿದೆ. ಬಿಜೆಪಿ ಅಭ್ಯರ್ಥಿಯ ಪರವಾಗಿ, ಪ್ರಮುಖವಾಗಿ ಹೇಳುವುದಾದರೆ, ನಟಿ ಅಮೂಲ್ಯ ಮತ್ತು ದರ್ಶನ್ ಬಂದಿದ್ದರು. ಆದರೆ, ದರ್ಶನ್ ರೋಡ್ ಶೋ, ಕ್ಷೇತ್ರದ ಚುನಾವಣಾ ಪ್ರಚಾರದ ಚಿತ್ರಣವನ್ನೇ ಇನ್ನೊಂದು ಮಜಲಿಗೆ ತೆಗೆದುಕೊಂಡು ಹೋಗಿತ್ತು.
ಸುಮಾರು ಹತ್ತು ಗಂಟೆ ಮುನಿರತ್ನ ಪರವಾಗಿ ಪ್ರಚಾರ ನಡೆಸಿದ್ದ ದರ್ಶನ್
ಸತತವಾಗಿ ಸುಮಾರು ಹತ್ತು ಗಂಟೆ ಮುನಿರತ್ನ ಪರವಾಗಿ ಪ್ರಚಾರ ನಡೆಸಿದ್ದ ದರ್ಶನ್ ಗೆ, ಅಭಿಮಾನಿಗಳು ತೋರಿದ ಪ್ರೀತಿ, ವಿಶ್ವಾಸ, ನಿಜವಾಗಿಯೂ ಅವರನ್ನು ಡಿಬಾಸ್ ಆಗಿಸಿತು ಎಂದರೆ ತಪ್ಪಾಗುವುದಿಲ್ಲ. ಆದರೆ, ಅತ್ಯಂತ ಜಾಣವಾಗಿ ಪ್ರಚಾರ ನಡೆಸಿದ ದರ್ಶನ್, ಅಭ್ಯರ್ಥಿಯ ಪರವಾಗಿ ಬಂದಿದ್ದೇನೋ ಹೊರತು, ಪಕ್ಷದ ಪರವಾಗಿ ಅಲ್ಲ ಎಂದು ಹೇಳಿದ್ದರು. ಒಂದು ಹಂತದಲ್ಲಿ, ಬಿಜೆಪಿಯ ಕೇಸರಿ ಶಾಲನ್ನು ಹಾಕಿಸಲು ಬಂದವರನ್ನೂ ತಡೆದರು.
ನಿರೀಕ್ಷೆಗಿಂತ ಮೀರಿದ ದರ್ಶನ್ ರೋಡ್ ಶೋಗೆ ಜನಬೆಂಬಲ
ನಿರೀಕ್ಷೆಗಿಂತ ಮೀರಿದ ದರ್ಶನ್ ರೋಡ್ ಶೋಗೆ ಜನಬೆಂಬಲ ವ್ಯಕ್ತವಾಗಿದ್ದರಿಂದ, ಕಾಂಗ್ರೆಸ್ ವಿಚಲಿತರಾಗಿದ್ದಂತೂ ಹೌದು. ಆದರೆ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತೂಕವಾದ ಹೇಳಿಕೆಯನ್ನು ನೀಡುವ ಮೂಲಕ ಜಾಣ ಹೆಜ್ಜೆಯನ್ನು ಇಟ್ಟರೆಂದೇ ಹೇಳಬಹುದಾಗಿದೆ.
ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ದರ್ಶನ್ ಪ್ರಚಾರ: ಜಾಣ ಹೆಜ್ಜೆಯಿಟ್ಟ ಕಾಂಗ್ರೆಸ್
"ನಾನು ಕೂಡಾ ದರ್ಶನ್ ಅಭಿಮಾನಿ. ನನ್ನ ವಿರುದ್ದದ ಅಭ್ಯರ್ಥಿಯ ಪರ ಅವರು ಚುನಾವಣಾ ಪ್ರಚಾರ ನಡೆಸಿದರೆಂದು ನನಗೇನೂ ಅವರ ಮೇಲಿನ ಅಭಿಮಾನ ಕಮ್ಮಿಯಾಗಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ, ಇಲ್ಲಿ ಎಲ್ಲರೂ ಸ್ವತಂತ್ರರು"ಎನ್ನುವ ಹೇಳಿಕೆಯನ್ನು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನೀಡಿದ್ದರು. ಇದು, ದರ್ಶನ್ ಪ್ರಚಾರದ ನಂತರ, ಕಾಂಗ್ರೆಸ್ ಈ ನಟನ ವಿರುದ್ದ ಹರಿಹಾಯಬಹುದು, ಅದರ ಮೈಲೇಜ್ ಪಡೆದುಕೊಳ್ಳಬಹುದು ಎನ್ನುವ ಬಿಜೆಪಿಯ ಲೆಕ್ಕಾಚಾರವನ್ನು ಉಲ್ಟಾ ಹೊಡೆಯುತ್ತಾ?