Get Updates
Get notified of breaking news, exclusive insights, and must-see stories!

ಕರ್ನಾಟಕದ ಮೊಟ್ಟ ಮೊದಲ ಚುನಾವಣಾ ಗೀತೆಯ ವೈಶಿಷ್ಟ್ಯ

ಬೆಂಗಳೂರು, ಏಪ್ರಿಲ್ 14: ಕರ್ನಾಟಕದ ಮೊಟ್ಟ ಮೊದಲ ಚುನಾವಣಾ ಗೀತೆಯನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಏ.13 ರಂದು ಬಿಡುಗಡೆ ಮಾಡಿದರು.

ಜನ ಸಾಮಾನ್ಯರಲ್ಲಿ ಮತದಾನದ ಅರಿವು ಮೂಡಿಸಲಿರುವ ಈ ಗೀತೆಯನ್ನು ಬಿಡುಗಡೆ ಮಾಡಿದ ಸಂಜೀವ್ ಕುಮಾರ್, 'ಚುನಾವಣಾ ಗೀತೆ ನೈತಿಕ ಮತದಾನ ಹಾಗೂ ಹೆಚ್ಚು ಜನರು ಮತದಾನ ಮಾಡುವಂತೆ ಉತ್ತೇಜಿಸಲಿದೆ' ಎಂದರು.

ಸದರಿ ಚುನಾವಣಾ ಗೀತೆಯನ್ನು ಖ್ಯಾತ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ರಚಿಸಿ, ನಿರ್ದೇಶಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ಗಾಯಕ ವಿಜಯ್ ಪ್ರಕಾಶ್ ಮತ್ತು ಅವರ ತಂಡ ಹಾಡಿದೆ.
ಖ್ಯಾತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಈ ಗೀತೆಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಗೀತೆ ರಾಜ್ಯದ ಎಲ್ಲೆಡೆ ಚಿತ್ರೀಕರಣಗೊಂಡಿದ್ದು ರಾಜ್ಯದ ವಿಭಿನ್ನತೆಯನ್ನು ಬಿಂಬಿಸಲಿದೆ. ವಿಧಾನಸೌಧದಲ್ಲೂ ಈ ಗೀತೆಗಾಗಿ ಚಿತ್ರೀಕರಣ ನಡೆಸಲಾಗಿದೆ. 150ಕ್ಕೂ ಹೆಚ್ಚು ಮಂದಿ ಕಲಾವಿದರು ಈ ಗೀತೆಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಮತದಾನಕ್ಕೆ ಪ್ರೋತ್ಸಾಹ

ಮತದಾನಕ್ಕೆ ಪ್ರೋತ್ಸಾಹ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಗರಾಜ್ ಭಟ್, 'ನಮ್ಮ ತಂಡ ಮೀಡಿಯಾ ಕನೆಕ್ಟ್ ಸಹಯೋಗದಲ್ಲಿ ಕರ್ನಾಟಕದ ನೈಜ ಸ್ಫೂರ್ತಿಯನ್ನು ಈ ಗೀತೆಯಲ್ಲಿ ತಂದಿದ್ದೇವೆ. ಇದರಲ್ಲಿ ಸಂದೇಶ ಸ್ಪಷ್ಟವಾಗಿದ್ದು ಪ್ರತಿಯೊಬ್ಬರೂ ಹೊರಬಂದು ಮತದಾನ ಏಕೆ ಮಾಡಬೇಕೆಂದು ಹೇಳುತ್ತದೆ. ಈ ಗೀತೆ ಈ ಬಾರಿ ಮತದಾನ ಹೆಚ್ಚಿಸಲು ಉತ್ತೇಜಿಸಲಿದೆ. ಈ ಸಂದರ್ಭದಲ್ಲಿ ಚುನಾವಣೆಗೆ ಗೀತೆ ರೂಪಿಸಲು ಉತ್ತೇಜಿಸಿದ ಮುಖ್ಯ ಚುನಾವಣಾಧಿಕಾರಿಗೆ ನಾನು ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ನಾವು ವಿಶೇಷ ಚೇತನರು, ಆದಿವಾಸಿಗಳು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಯುವ ಮತದಾರರನ್ನು ಈ ಗೀತೆಯ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೇವೆ' ಎಂದರು.

ಮಾಧ್ಯಮಗಳಲ್ಲಿ ನಿರಂತರ ಪ್ರಸಾರ

ಮಾಧ್ಯಮಗಳಲ್ಲಿ ನಿರಂತರ ಪ್ರಸಾರ

"ಈ ಚುನಾವಣಾ ಗೀತೆ ಆಯೋಗದ ವಸ್ತು- ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆಗಳನ್ನು ಪ್ರತಿಪಾದಿಸುತ್ತದೆ. ಇದು ನೈತಿಕ ಮತದಾನ ಉತ್ತೇಜಿಸಲು ಬಹುಮುಖ್ಯ ಪಾತ್ರ ವಹಿಸಲಿದೆ ಮತ್ತು ಇದರಿಂದ ಮತದಾರರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಮತದಾನದ ಪ್ರಮಾಣ ಹೆಚ್ಚಿಸಲಿದ್ದಾರೆ. ರೇಡಿಯೊ, ಟೀವಿ, ಚಲನಚಿತ್ರಗಳು ಮತ್ತು ಇತರೆ ಮಾಧ್ಯಮಗಳಲ್ಲಿ ಈ ಗೀತೆ ಪ್ರಸಾರವಾಗಲಿದೆ."

ಚುನಾವಣಾ ಗೀತೆಯ ಮಹತ್ವ

ಚುನಾವಣಾ ಗೀತೆಯ ಮಹತ್ವ

• ಮೊಟ್ಟಮೊದಲ ಬಾರಿಗೆ ಕರ್ನಾಟಕದ ಚುನಾವಣೆಗಳಿಗೆಂದೇ ಒಂದು ವಿಶೇಷ ಚುನಾವಣಾ ಗೀತೆ ರೂಪಿಸಲಾಗಿದೆ.
• ಕರ್ನಾಟಕ ಚುನಾವಣಾ ಗೀತೆಯನ್ನು 30 ಸೆಕೆಂಡುಗಳು, 60 ಸೆಕೆಂಡುಗಳು, 2 ನಿಮಿಷಗಳು ಮತ್ತು 4.5 ನಿಮಿಷಗಳಲ್ಲಿ ಬಿಡುಗಡೆ ಮಾಡಲಾಗಿದೆ.
• 150ಕ್ಕೂ ಹೆಚ್ಚು ಕಲಾವಿದರು ಈ ಚುನಾವಣಾ ಗೀತೆಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
• ಚುನಾವಣಾ ಗೀತೆಯಲ್ಲಿ ಆದಿವಾಸಿಗಳು, ಲಿಂಗತ್ವ ಅಲ್ಪಸಂಖ್ಯಾತರು, ಮಿಲೆನಿಯಂ ಮತದಾರರು ಮತ್ತು ಬಹಳಷ್ಟು ಸಾಂಸ್ಕೃತಿಕ ತಂಡಗಳು ಭಾಗವಹಿಸಿವೆ.

ಚುನಾವಣಾ ಗೀತೆಯ ಪೂರ್ಣಪಾಠ

ಚುನಾವಣಾ ಗೀತೆಯ ಪೂರ್ಣಪಾಠ

ನಿನ್ನ ಬೆರಳಲಿ ನಾಡಿನ ಭವಿಷ್ಯ ಅಡಗಿಹುದೂ ಮಹನೀಯ....
ಶಾಹಿ ಚುಕ್ಕಿಯ ಧರಿಸು ಈ ದಿನ ತಪ್ಪದಲೇ ಮಹರಾಯ....
ಕರುನಾಡ ನಾಗರಿಕರೆಂದು, ಮತ ನೀಡುವಿಕೆಯಲ್ಲಿ ಮುಂದು
ಹೆಮ್ಮೆಯಿಂದ ತೋರಿ ನಿಮ್ಮ ತೋರು ಬೆರಳನ್ನಾ....
ಮಾಡಿ ಮಾಡಿ ಮಾಡಿ ಮತದಾನ
ಇರಲಿ ದೇಶದ ಮೇಲೆ ಅಭಿಮಾನ!


ವೋಟು ನಿನ್ನ ಅಧಿಕಾರ, ನೀನೇ ಆರಿಸು ಸರಕಾರ
ವೋಟು ನೀಡದೆ ನೀನು ಕುಂತರೆ
ನಿನಗೆ ನೀನೇ ಮಾಡಿಕೊಳ್ಳುವೆ ಅಪಚಾರ....
ಅರಸ ಯಾರೇ ಆಗಿರಲಿ, ಅವನು ನಮ್ಮ ಸೇವಕನು
ಇದನು ಅರಿತರೆ ಜನ್ಮ ಸಾರ್ಥಕ
ದಾಸನು ಅಲ್ಲ ಇಲ್ಲಿ ಯಾವುದೇ ಮತದಾರ...
ಹದಿನೆಂಟು ಆದವರೆ ಬನ್ನಿ
ಯುವಶಕ್ತಿ ತೋರ್ಬೆರಳ ತನ್ನಿ
ಐದು ಕೋಟಿ ವೋಟು ನೀಡಿ
ದಾಖಲೆ ಬರೆಯೋಣ....
ಮಾಡಿ ಮಾಡಿ ಮಾಡಿ ಮತದಾನ
ಇರಲಿ ದೇಶದ ಮೇಲೆ ಅಭಿಮಾನ
ಬನ್ನಿ ಹೊರಗೆ ಬೇಡ ಬಿಗುಮಾನ
ನಾಡು ದೊಡ್ಡದು ಸ್ವಾಮಿ ನಮಗಿನ್ನ


ಭ್ರಷ್ಟ ನಾಯಕರ ಹುಟ್ಟಿಗೆ ಕಾರಣ
ಮತ ನೀಡದ ಪ್ರಜೆಯು...
ಉತ್ತಮ ರಾಷ್ಟ್ರಕೆ ಕೆಚ್ಚಿನ ಪ್ರಜೆಯೇ
ಎಂದೆಂದಿಗು ಪ್ರಭುವು.....
ಬನ್ನಿ ಮನಸು ಮಾಡೋಣ
ಹೊಸದೇ ಕನಸು ಕಾಣೋಣ
ಇದು ಕರ್ತವ್ಯ ಇದು ಕರ್ತವ್ಯ
ರಾಷ್ಟ್ರ ರಚಿಸೋಣ.....
ಮಾಡಿ ಮಾಡಿ ಮಾಡಿ ಮತದಾನ
ಇರಲಿ ದೇಶದ ಮೇಲೆ ಅಭಿಮಾನ
ನಮ್ಮ ವೋಟು ನಮಗೇ ಬಹುಮಾನ
ತಿರುಗಿ ನೋಡಲಿ ನಮ್ಮನು ಶತಮಾನ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+