ಗೀತಾ ವಿಷ್ಣು ಕಾರು ಅಪಘಾತದ ಕೇಸ್ ಸಿಸಿಬಿ ತನಿಖೆಗೆ
ಬೆಂಗಳೂರು, ಅಕ್ಟೋಬರ್ 03 : ಗೀತಾವಿಷ್ಣು ಕಾರು ಅಪಘಾತ ಪ್ರಕರಣದ ತನಿಖೆಯನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದೆ. ಪೊಲೀಸರ ವಶದಲ್ಲಿದ್ದ ಗೀತಾವಿಷ್ಣು ಮಲ್ಯ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಇನ್ನೂ ಹುಡುಕಾಟ ಮುಂದುವರೆದಿದೆ.
2017ರ ಸೆ.28ರಂದು ಗೀತಾವಿಷ್ಣು ಕಾರು ಸೌತ್ ಎಂಡ್ ಸರ್ಕಲ್ ಬಳಿ ಮಾರುತಿ ಓಮಿನಿ ಕಾರಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ಕಾರು ನಾಮಫಲಕಕ್ಕೆ ಗುದ್ದಿತ್ತು. ಅಪಘಾತದ ನಂತರ ಪರಾರಿಯಾಗಲು ಯತ್ನಿಸಿದ್ದ ಆತನನ್ನು ಸ್ಥಳೀಯರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು.

ಜಯನಗರ ಸಂಚಾರಿ ಠಾಣೆ ಪೊಲೀಸರು ಕಾರನ್ನು ವಶಕ್ಕೆ ಪಡೆದಾಗ ಅದರಲ್ಲಿ ಗಾಂಜಾ ಪತ್ತೆಯಾಗಿತ್ತು. ಆದ್ದರಿಂದ, ಪ್ರಕರಣದ ತನಿಖೆಯನ್ನು ಜಯನಗರ ಪೊಲೀಸರು ಸಿಸಿಬಿಗೆ ಹಸ್ತಾಂತರ ಮಾಡಿದ್ದಾರೆ.
'ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರ ಮಾಡಲಾಗಿದೆ. ಸೋಮವಾರ ರಾತ್ರಿಯಿಂದಲೇ ತನಿಖೆ ಆರಂಭಿಸಲಾಗಿದೆ' ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹುಡುಕಾಟ ತೀವ್ರ : ಅಪಘಾತದ ಬಳಿಕ ಗಾಯಗೊಂಡಿದ್ದ ಗೀತಾ ವಿಷ್ಣುವನ್ನು ಪೊಲೀಸರು ಮಲ್ಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಶುಕ್ರವಾರ ಮುಂಜಾನೆ 6.15ಕ್ಕೆ ಆತ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಹೈದರಾಬಾದ್ ಅಥವ ತಮಿಳುನಾಡಿನಲ್ಲಿ ಗೀತಾವಿಷ್ಣು ತಲೆಮರೆಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳಲು ಗೀತಾವಿಷ್ಣು ಇಂದು ನ್ಯಾಯಾಲಯದ ಮುಂದೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
'ವಿಷ್ಣು ಡ್ರಗ್ಸ್ ವ್ಯಸನಿ ಅಲ್ಲ, ಆತನ ಕಾರಿನಲ್ಲಿ ಡ್ರಗ್ಸ್ ಸಿಕ್ಕಿರುವ ಸಾಧ್ಯತೆ ಕಡಿಮೆ. ಅಪಘಾತವಾದಾಗ ಯಾರೋ ಡ್ರಗ್ಸ್ ತಂದು ಇಟ್ಟಿರಬಹುದು' ಎಂದು ಗೀತಾವಿಷ್ಣು ತಂದೆ ಶ್ರೀನಿವಾಸಮೂರ್ತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
'ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನೋಡಿ ಗೀತಾವಿಷ್ಣು ಆಸ್ಪತ್ರೆಯಿಂದ ಹೊರ ಹೋಗಿರಬಹುದು. ಆತ ಎಲ್ಲಿಗೆ ಹೋಗಿದ್ದಾನೆ? ಎಂಬುದು ಗೊತ್ತಿಲ್ಲ. ಘಟನೆಯಿಂದ ನಮ್ಮ ಕುಟುಂಬದ ಗೌರವಕ್ಕೆ ಕುಂದು ಉಂಟಾಗದಂತೆ ಕಾಪಾಡಬೇಕು' ಎಂದು ಶ್ರೀನಿವಾಸಮೂರ್ತಿ ಮನವಿ ಮಾಡಿದ್ದಾರೆ.












Click it and Unblock the Notifications