ಐಎಂಎ ತನಿಖೆ ಕೈಗೆತ್ತಿಕೊಂಡ ಸಿಬಿಐ: 30 ಜನರ ವಿರುದ್ಧ ಎಫ್ಐಆರ್
ಬೆಂಗಳೂರು, ಸೆಪ್ಟೆಂಬರ್ 02: ಐಎಂಎ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಬಿಐಗೆ ವಹಿಸಿದ್ದು, ಸಿಬಿಐಯು ಈಗಾಗಲೇ ಪ್ರಕರಣದ ತನಿಖೆ ಪ್ರಾರಂಭಿಸಿದೆ.
ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐಯು 30 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದೆ. ಇದರಲ್ಲಿ ಕೆಲವು ಸಂಸ್ಥೆಗಳೂ ಸೇರಿವೆ. ಮನ್ಸೂರ್ ಖಾನ್ನನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ.
ಮನ್ಸೂರ್ ಖಾನ್ ಆಪ್ತ ನಿಜಾಮುದ್ದೀನ್, ನವೀದ್ ಅಹ್ಮದ್, ಐಎಂಎ ನಿರ್ದೇಶಕ ವಾಸಿಂ, ಅರ್ಷಾದ್ ಖಾನ್, ಅಫ್ಸರ್ ಪಾಷಾ, ಅಸಾದುಲ್ಲಾ, ಶಾದಬ್ ಅಹ್ಮದ್ ಖಾನ್, ಇಸ್ರಾರ್ ಅಹ್ಮದ್ ಖಾನ್, ಪುಸೇಲ್ ಅಹ್ಮದ್, ಮೊಹಮ್ಮದ್ ಇದ್ರೀಶ್, ಉಸ್ಮಾನ್ ಅಬ್ರೇಸ್, ಸೈಯದ್ ಮುಜಾಹಿದ್, ಬೆಂಗಳೂರು ಜಿಲ್ಲಾಧಿಕಾರಿ ಆಗಿದ್ದ ವಿಜಯ್ಶಂಕರ್, ಎಸಿ ಆಗಿದ್ದ ಎಲ್ಸಿ ನಾಗರಾಜು, ಬಿಡಿಎ ಅಧಿಕಾರಿ ಪಿಡಿ ಕುಮಾರ್, ಗ್ರಾಮಲೆಕ್ಕಿಗ ಮಂಜುನಾಥ ಇನ್ನೂ ಹಲವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.

ಶಿವಾಜಿನರ ಐಎಂಎ ಹೆಲ್ತ್ ಕೇರ್, ಶಿವಾಜಿನಗರ ಐಎಂಎ ಜ್ಯುವೆಲ್ಸ್, ಶಿವಾಜಿನಗರ ಐಎಂಎ ಬಿಲಿಯನ್ ಟ್ರೇಡಿಂಗ್, ಶಿವಾಜಿನಗರ ಐಎಂಎ ಕೋಆಪರೇಟಿವ್ ಈ ಸಂಸ್ಥೆಗಳ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಐಎಂಎ ಹಗರಣದ ತನಿಖೆಯನ್ನು ರವಿಕಾಂತೇಗೌಡ ನೇತೃತ್ವದ ಎಸ್ಐಟಿ ನಡೆಸುತ್ತಿತ್ತು, ಎಸ್ಐಟಿಯು ಆಸ್ತಿ ವಶದ ಜೊತೆಗೆ ಹಲವು ಮಹತ್ವದ ಸಾಕ್ಷ್ಯಗಳನ್ನು ಮನ್ಸೂರ್ ಖಾನ್ನಿಂದ ಕಲೆ ಹಾಕಿತ್ತು. ಇದರಲ್ಲಿ ಮುನ್ನೂರು ಕೆಜಿ ನಕಲಿ ಚಿನ್ನದ ಬಿಸ್ಕತ್ತುಗಳು ಸೇರಿವೆ.
ಎಸ್ಐಟಿ ತಂಡದೊಂದಿಗೆ ಸಿಬಿಐ ಸುದೀರ್ಘ ಚರ್ಚೆ ನಡೆಸಿದ್ದು, ಈಗಾಗಲೇ ಮಹತ್ವದ ಮಾಹಿತಿಯನ್ನು ಸಿಬಿಐ ಪಡೆದುಕೊಂಡಿದೆ. ಸಿಬಿಐ ತನಿಖೆ ಪ್ರಾರಂಭಿಸಿದೆ. ಈ ಪ್ರಕರಣದಲ್ಲಿ ಎಸ್ಐಟಿಯು ಮಾಜಿ ಶಾಸಕ, ಸಚಿವ ರೋಷನ್ ಬೇಗ್ ಹಾಗೂ ಜಮೀರ್ ಅಹ್ಮದ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.












Click it and Unblock the Notifications