ಬೆಂಗಳೂರಿನ ನಡುರಸ್ತೆಯಲ್ಲಿ ಸಿಕ್ಕ ಮೀನು: ತಾಜಾ ಮೀನು ಸಿಗುತ್ತದೆ ಬನ್ನಿ ಎಂದ ನೆಟ್ಟಿಗರು
ಭಾರಿ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಕೆರೆಗಳಂತಾಗಿವೆ. ಮಳೆಯಿಂದ ಮುಳುಗಡೆಯಾದ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ರಕ್ಷಕರು ದೋಣಿಗಳನ್ನು ಬಳಕೆ ಮಾಡಿದ್ದಾರೆ. ಸಮಸ್ಯೆಗಳ ಮಧ್ಯೆಯೇ ಫೋಟೊವೊಂದು ಭಾರಿ ವೈರಲ್ ಆಗಿದ್ದು, ಜನ ಸಾಮಾಜಿಕ ಜಾಲತಾಣಗಳಲ್ಲಿ ತರೇವಾರಿ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ಬೆಳ್ಳಂದೂರಿನ ಇಕೋಸ್ಪೇಸ್ ಬಳಿ ರಸ್ತೆಗಳಿಗೆ ಭಾರಿ ನೀರುನುಗ್ಗಿ ವಾಹನ ಸಂಚಾರರು ಪರದಾಡಿದ್ದರು. ಟ್ರಾಫಿಕ್ ಪೊಲೀಸರು, ನಾಗರಿಕ ಸ್ವಯಂ ಸೇವಕರು, ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಸಾಕಷ್ಟು ಶ್ರಮ ವಹಿಸಿದರು. ಈ ಸಂದರ್ಭದಲ್ಲೇ ರಸ್ತೆಯಲ್ಲಿ ನಿಂತ ನೀರಿನಲ್ಲಿ ಮೀನು ಸಿಕ್ಕಿದ್ದು, ಅದರ ಫೋಟೋ ಈಗ ವೈರಲ್ ಆಗಿದೆ.
ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಯನ್ನು ಕಡಿಮೆ ಮಾಡಲು ಸ್ವಯಂಸೇವಕರನ್ನು ಸೇವೆಗೆ ಬಳಸಿಕೊಳ್ಳಲಾಯಿತು. ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಲಾವೃತವಾಗಿದ್ದ ರಸ್ತೆಯಲ್ಲಿ ವಾಹನಗಳು ನಿಂತಿದ್ದು, ಪಾದಚಾರಿಗಳು ನಡೆದಾಡಲು ಪರದಾಡಿದರು.

ನೀರಿನಿಂದ ತುಂಬಿರುವ ನಗರದ ರಸ್ತೆಯ ಮಧ್ಯದಲ್ಲಿ ನಾಗರಿಕ ಸ್ವಯಂ ಸೇವಕನು ಮೀನೊಂದನ್ನು ಹಿಡಿದಿರುವ ಚಿತ್ರವನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ಬನ್ನಿ, ಬೆಂಗಳೂರಿನ ರಸ್ತೆಗಳಲ್ಲಿ ತಾಜಾ ಮೀನುಗಳು ಸಿಗುತ್ತವೆ ಎಂದು ಟ್ವೀಟ್ ಮಾಡಿದ್ದಾರೆ. ಕ್ಯಾಟ್ಫಿಶ್ ಹೋಲುವ ಮೀನನ್ನು ಹಿಡಿದಿರುವ ನಾಗರಿಕ ಸ್ವಯಂ ಸೇವಕನು ಇದ್ದು, ಸಹೋದ್ಯೋಗಿಗಳು ಮೀನಿನ ಫೋಟೊವನ್ನು ತೆಗೆಯುತ್ತಿದ್ದಾರೆ.
ನಾವಿನ್ನು ಮೀನಿಗಾಗಿ ಸಮುದ್ರಕ್ಕೆ ಹೋಗುವ ಅಗತ್ಯವಿಲ್ಲ ಬೆಂಗಳೂರಿಗೆ ಬನ್ನಿ ಇಲ್ಲಿನ ರಸ್ತೆಗಳಲ್ಲೇ ನಿಮಗೆ ತಾಜಾ ಮೀನು ಸಿಗುತ್ತದೆ ಎಂದು ಟ್ವಿಟರ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ರಸ್ತೆಗಳಲ್ಲಿ ದೋಣಿ ಚಲಾಯಿಸಬಹುದು ಎಂದ ಕಾಂಗ್ರೆಸ್
ಕರ್ನಾಟಕ ಕಾಂಗ್ರೆಸ್ನ ಟ್ವಿಟರ್ ಅಧಿಕೃತ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದು, ರಾಜ್ಯ ಸರ್ಕಾರದ ಭ್ರಷ್ಟಾಚಾರದ ಆಡಳಿತದಿಂದ ಈ ಪರಿಸ್ಥಿತಿ ಬಂದಿದೆ ಎಂದು ಹೇಳಿದೆ.

ಬಿಬಿಎಂಪಿಯಲ್ಲಿ ಕಮಿಷನ್ ದರ ಶೇಕಡ 40 ರಿಂದ ಶೇಕಡ 50 ಏರಿಕೆಯಾಗಿರುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಕಾಂಗ್ರೆಸ್ ಹೇಳಿದೆ. "ಬೆಂಗಳೂರಿನಲ್ಲಿ ಮೀನುಗಾರಿಕೆ ನಡೆಸಬಹುದು!, ಬೆಂಗಳೂರಿನ ರಸ್ತೆಗಳಲ್ಲಿ ದೋಣಿಗಳನ್ನು ಚಲಾಯಿಸಬಹುದು!, ಹೌಸ್ಬೋಟ್ ಮೂಲಕ ಪ್ರವಾಸೋದ್ಯವನ್ನು ಉತ್ತೇಜಿಸಬಹುದು!, ಖರ್ಚಿಲ್ಲದೆ ರಸ್ತೆಗುಂಡಿಗಳನ್ನು ಮಳೆ ನೀರಿನ ಮೂಲಕ ಮುಚ್ಚಬಹುದು!" ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
1,012.5 ಕೋಟಿ ರುಪಾಯಿ ಬಿಡುಗಡೆ ಮಾಡಲು ಕೇಂದ್ರಕ್ಕೆ ಮನವಿ
ಜೂನ್ 1 ರಿಂದ ಆಗಸ್ಟ್ 31ರವರೆಗೆ, ಕರ್ನಾಟಕದಲ್ಲಿ 820 ಮಿಲಿ ಮೀಟರ್ ಮಳೆಯಾಗಿದೆ. ರಾಜ್ಯದ 27 ಜಿಲ್ಲೆಗಳು ಮತ್ತು 187 ಹಳ್ಳಿಗಳ ಮೇಲೆ ಭಾರಿ ಮಳೆ ಪರಿಣಾಮ ಬೀರಿದೆ. 29,967 ಮಂದಿ ಮಳೆಯಿಂದ ಸಂತ್ರಸ್ತರಾಗಿದ್ದಾರೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್ಡಿಆರ್ಎಫ್) ಮಾನದಂಡಗಳ ಪ್ರಕಾರ 1,012.5 ಕೋಟಿ ರುಪಾಯಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ಅಂತರ ಸಚಿವಾಲಯದ ತಂಡವನ್ನು ನಿಯೋಜಿಸಲು ಸರ್ಕಾರವು ಕೇಂದ್ರವನ್ನು ಕೇಳಲಿದೆ ಎಂದು ಕರ್ನಾಟಕದ ಕಂದಾಯ ಸಚಿವ ಆರ್ ಅಶೋಕ ತಿಳಿಸಿದ್ದಾರೆ.












Click it and Unblock the Notifications