ಉಪನಗರ ರೈಲು ಯೋಜನೆಗೆ ಕ್ಷಿಪ್ರಗತಿ: ಸಂಪುಟ ತೀರ್ಮಾನ
ಬೆಂಗಳೂರು, ಫೆಬ್ರವರಿ 01 : ಮುಂಬೈ ಮಾದರಿಯಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಗೆ ಕ್ಷಿಪ್ರಗತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ನಿಟ್ಟಿನಲ್ಲಿ 2018-19 ನೇ ಆರ್ಥಿಕ ವರ್ಷದಲ್ಲಿ ತನ್ನ ಪಾಲಿನ 349 ಕೋಟಿ ರೂ.ಒದಗಿಸಲು ಸಂಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಉಪನಗರ ರೈಲು ಯೋಜನೆ ಹಂತ-1 ಎ ಗೆ ಸಂಬಂಧಿಸಿ ಈ ಹಣ ತೆಗೆದಿರಿಸಲಾಗುತ್ತದೆ. ಒಟ್ಟಾರೆ ಈ ಹಂತದ ಕಾಮಗಾರಿಗೆ 1,457 ಕೋಟಿ ರೂ. ಅಗತ್ಯವಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮಾನವಾಗಿ ಈ ವೆಚ್ಚ ಭರಿಸಬೇಕು ಎನ್ನುವ ಪ್ರಸ್ತಾವ ಮುಂದಿಡಲಾಗಿದೆ. ಆದರೆ, ರೈಲ್ವೆ ಇಲಾಖೆ ಶೇ.20 ರಷ್ಟು ನೆರವು ನೀಡಲು ಸಮ್ಮತಿಸಿದೆ. ಉಳಿದಿದ್ದನ್ನು ವಿಶೇಷ ಯೋಜನಾ ವಾಹಕ ವ್ಯವಸ್ಥೆ ಮತ್ತು ಸಾಲ ಸೌಲಭ್ಯದಮೂಲಕ ಹೊಂದಿಸಿಕೊಳ್ಳಲು ಯೋಚಿಸಲಾಗುತ್ತಿದೆ. 3 ವರ್ಷದೊಳಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

ಬೆಂಗಳೂರಿನಿಂದ ಮಂಡ್ಯ, ತುಮಕೂರು, ಯಲಹಂಕ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಸಂಪರ್ಕಿಸುವ ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ವಿಶೇಷ ಉದ್ದೇಶಿತ ಘಟಕ (ಎಸ್ಪಿವಿ) ಸ್ಥಾಪಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.
ಬೆಂಗಳೂರಿನ ಸುತ್ತಮುತ್ತಲ ಕಲ್ಪಿಸಲು 440 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಿಸಲಾಗುತ್ತದೆ. 58 ರೈಲುಗಳು ಕಾರ್ಯಾಚರಣೆ ನಡೆಸಲಿದ್ದು 116 ಸಂಚಾರ ಸೇವೆಗಳು ಇರಲಿವೆ. ಪ್ರತಿ ರೈಲಿನಲ್ಲಿ 1,800 ರಿಂದ 2 ಸಾವಿರ ಮಂದಿ ಪ್ರಯಾಣಿಸಬಹುದು.
ಉಪನಗರ ರೈಲು ಯೋಜನೆಗೆ ಒಟ್ಟಾರೆ 10,949. ಕೋಟಿ ರೂ. ವೆಚ್ಚವಾಗಲಿದ್ದು ಶೇ.50 ರಷ್ಟು ಅನುದಾನ ನೀಡಲು ಕೇಂದ್ರ ಹಿಂದೇಟು ಹಾಕಿದ್ದರಿಂದ ದೀರ್ಘಾವಧಿ ಸಾಲ ಪಡೆಯುವ ಬಗ್ಗೆಯೂ ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ.
ಬೆಂಗಳೂರು-ಮಂಡ್ಯ-92, ಬೆಂಗಳೂರು-ಯಶವಂತಪುರ-5, ಯಶವಂತಪುರ-ತುಮಕೂರು-64, ಯಶವಂತಪುರ-ಯಲಹಂಕ-12, ಯಲಹಂಕ-ಬೈಯಪ್ಪನಹಳ್ಳಿ 19, ಯಶವಂತಪುರ-ಬೈಯಪ್ಪನಹಳ್ಳಿ 16, ಯಲಹಂಕ-ದೊಡ್ಡಬಳ್ಳಾಪುರ 20, ಯಲಹಂಕ-ಚಿಕ್ಕಬಳ್ಳಾಪುರ 46, ಬೈಯಪ್ಪನಹಳ್ಳಿ-ಹೊಸೂರು 48, ಬೆಂಗಳೂರು-ಬಂಗಾರಪೇಟೆ 73, ಸೋಲದೇವನಹಳ್ಳಿ-ಕುಣಿಗಲ್ 45 ರೈಲುಗಳು ಸಂಚರಿಸಲಿವೆ.












Click it and Unblock the Notifications