BWSSB ವೆಬ್ಸೈಟ್ನಲ್ಲಿರುವ 'ಜಲಧಾರೆ ದತ್ತಾಂಶ'ದ ಮೂಲಕ ಕಾವೇರಿ ನೀರಿನ ಹೊಸ ಸಂಪರ್ಕ ಪಡೆಯಿರಿ
ಬೆಂಗಳೂರು ನವೆಂಬರ್ 23: ಹೊಸದಾಗಿ ಮನೆ ನಿರ್ಮಿಸುವವರು, ವಾಣಿಜ್ಯ ಸಂಕೀರ್ಣ, ವಸತಿ ಸಮುಚ್ಚಯಗಳಿಗೆ ಇಲ್ಲವೇ ಮೊದಲ ಬಾರಿಗೆ ಕುಡಿಯುವ ಕಾವೇರಿ ನೀರು ಪಡೆಯುವವರು ಕೆಲವೇ ಕೆಲವು ನಿಯಮ ಅನುಸರಿಸಬೇಕು. ಬಳಿಕ ಆನ್ಲೈನ್ ಮೂಲಕವೇ ಮಾಸಿಕ ನೀರಿನ ಬಿಲ್ ಅನ್ನು ಕುಳಿತಲ್ಲಿಯೇ ಪಾವತಿ ಮಾಡಬಹುದಾಗಿದೆ.
ನೀವು ಬೆಂಗಳೂರು ಜಲಮಂಡಳಿಯ ಕಚೇರಿಗೆ ಅಲೆದಾಡಬೇಕಾಗಿಲ್ಲ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 'ಜಲಧಾರೆ ದತ್ತಾಂಶ'ದ ಮೂಲಕ ಹೊಸದಾಗಿ ನೀರಿನ ಸಂಪರ್ಕ ಪಡೆಯಲು ಅವಕಾಶ ಇದೆ. ಈ 'ಜಲಧಾರೆ ದತ್ತಾಂಶ'ದ ಮೂಲಕ ನಿಗದಿತ ಅಗತ್ಯ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕು.
ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಹೊಸ ಸಂಚಾರ ವ್ಯವಸ್ಥೆ
ಕುಡಿಯುವ ಕಾವೇರಿ ನೀರಿನ ಸಂಪರ್ಕಕ್ಕೆ ಅರ್ಜಿ ಸಲ್ಲಸಿದ ಅರ್ಜಿದಾರರು ನಿಗದಿತ ಶುಲ್ಕವನ್ನು ಜಲಮಂಡಳಿ ಸೂಚಿಸುವ ಆನ್ಲೈನ್ ವೆಬ್ಸೈಟ್, ಮೊಬೈಲ್ ಆಪ್ ಮೂಲಕವೇ ಸಲ್ಲಿಸಬೇಕು. ಬದಲಾವೇ ಯಾವುದೇ ಜಲಮಂಡಳಿ ಸಿಬ್ಬಂದಿಗಾಗಲಿ, ಪ್ಲಂಬರ್ ಗಳಿಂದಾಗಲಿ ಪಾವತಿಸಲು ಹಣ ನೀಡಬಾರದು. ಈ ಕೆಳಗೆ ಸೂಚಿಸಲಾಗಿರುವ ಆನ್ಲೈನ್ ಆಯ್ಕೆಗಳಿಂದಲೇ ಸಂಪರ್ಕದ ಶುಲ್ಕ ಪಾವತಿಸಬೇಕು.
ಜಲಮಂಡಳಿಯ 'ಜಲಧಾರೆ ದತ್ತಾಂಶ'
ಹೊಸ ಸಂಪರ್ಕಕ್ಕಾಗಿ ಮೊದಲು ನೀವು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಯ ಅಧಿಕೃತ ಜಾಲತಾಣ https://bwssb.karnataka.gov.in/ ಕ್ಕೆ ಭೇಟಿ ಕೊಡಿ. ಅಲ್ಲಿ ಪರದೆ ಮೇಲೆ ಕಾಣುವ ಸೇವೆಗಳು (Sevices) ಮೇಲೆ ಕ್ಲಿಕ್ ಮಾಡಿದರೆ 'ಜಲಧಾರೆ ದತ್ತಾಂಶ' ಪರದೆ ತೆರೆಯುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂಸಿದರೆ ಓಟಿಪಿ ಬರುತ್ತದೆ. ಅದನ್ನು ನಿಗದಿತ ಸ್ಥಳದಲ್ಲಿ ಹಾಕಿ ಸಬ್ಮಿಟ್ ಕೊಡಬೇಕು.
ಆನ್ಲೈನ್ನಲ್ಲಿ ನಿಗದಿತ ಶುಲ್ಕ ಪಾವತಿಸಿ
ಜನವಸತಿ ಸಂಪರ್ಕಕ್ಕೆ ಹಾಗೂ ವಾಣಿಜ್ಯ ಸಂಪರ್ಕ/ ವಸತಿ ಸಮುಚ್ಚಯಗಳ (ಹೈ ರೈಸ್ ಕನೆಕ್ಷನ್)ಗಳಿಗೆ ನಿಯಮಗಳು ಭಿನ್ನವಾಗಿವೆ. ನೀವು ಈವೆರಡದಲ್ಲಿ ಯಾವುದರ ವ್ಯಾಪ್ತಿಗೆ ಬರುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಗದಿತ ಶುಲ್ಕ ಹಾಗೂ ಮಾಸಿಕ ನೀರಿನ ಶುಲ್ಕವನ್ನು ಜಲಮಂಡಳಿ ಸಂಯೋಜಿತ ಆನ್ಲೈನ್ ಪೇಮೆಂಟ್ಗಳಾದ ಪೇಯು, ಸಿಸಿ ಅವೆನ್ಯೂ ಆಂಡ್ ಬಿಲ್ ಡೆಸ್ಕ್ ಪೇಮೆಂಟ್ ಗೆಟ್ ವೇ ಅಗ್ರಿಗೇಟರ್ಗಳ ಅಡಿ ನೆಟ್ ಬ್ಯಾಂಕಿಂಗ್, ಇಲ್ಲವೇ ಕ್ರೆಡಿಟ್/ಡೆಬಿಟ್ ಕಾರ್ಡ್, ಯುಪಿಐ ಮೂಲಕ ಪಾವತಿಸಬಹುದು.
ನೀರಿನ್ ಬಿಲ್ ಸಿಕ್ಕ 10 ದಿನದಲ್ಲಿ ಬಿಲ್ ಪಾವತಿಸಿ
ಒಂದು ವೇಳೆ ನೀವು ನೇರವಾಗಿ ಬಿಲ್ ಪಾವತಿಸಲು ಪೇಯು, ಸಿಸಿ ಅವೆನ್ಯೂ ಆಂಡ್ ಬಿಲ್ ಡೆಸ್ಕ್ ಪೇಮೆಂಟ್ ಗೆಟ್ ವೇ ಅಗ್ರಿಗೇಟರ್ಗಳ ಅಡಿ ನಿಗದಿತ ದಿನಾಂಕದೊಳಗೆ ಚಲನ್ ಮೂಲಕ ಬ್ಯಾಂಕ್ನಲ್ಲಿ ಪಾವತಿಸಬಹುದಾಗಿದೆ. ಮಾಸಿಕ ನೀರಿನ ಬಿಲ್ ಕೈಗೆ ಸಿಕ್ಕ ಹತ್ತು ದಿನಗಳೊಳಗಾಗಿ ನೀವು ನೀರಿನ ಬಿಲ್ ಪಾವತಿಸಬೇಕು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.
ನೀರಿನ ಅದಾಲತ್: ಈ ಸಂಖ್ಯೆಗೆ ಸಂಪರ್ಕಿಸಿ
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08022945109 ಹಾಗೂ ಸಹಾಯವಾಣಿ ಸಂಖ್ಯೆ 1916 ಇಲ್ಲವೇ ವಾಟ್ಸಪ್ ಸಂಖ್ಯೆ 87622 28888ಗೆ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಇನ್ನು ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿನ ಗ್ರಾಹಕರ ಕುಂದು ಕೊರತೆ ಆಲಿಸಲು 'ನೀರಿನ ಅದಾಲತ್' ಪ್ರತಿ ಗುರುವಾರ ಬೆಳಗ್ಗೆ 9.30ರಿಂದ 11ಗಂಟೆವರೆಗೆ ನಡೆಯಲಿದೆ. ಈ ವೇಳೆ ನಿಮ್ಮ ಹತ್ತಿರ ಪ್ರಾದೇಶಿಕ ಕಚೇರಿ ನಿಗದಿಪಡಿಸಿದ ಅಭಿಯಂತರರು ನಿಮ್ಮ ಸಮಸ್ಯೆ ಬಗೆಹರಿಸುತ್ತಾರೆ. ನೀವು ಅದಾಲತ್ ವೇಳೆ ಸಹಾಯವಾಣಿ ಸಂಖ್ಯೆ 1916 ಇಲ್ಲವೇ ವಾಟ್ಸಪ್ ಸಂಖ್ಯೆ 87622 28888ಗೆ ಕರೆ ಮಾಡಬಹುದು.
ಇಷ್ಟೇ ಅಲ್ಲದೇ ತಿಂಗಳ ನಾಲ್ಕನೇ ಶನಿವಾರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರ ಸಮ್ಮುಖದಲ್ಲೇ 'ನೇರ ಫೋನ್ ಇನ್' ಕಾರ್ಯಕ್ರಮ ಸಹ ನಡೆಯಲಿದೆ. ಈ ವೇಳೆ ಅಧ್ಯಕ್ಷರು ನಿಮ್ಮ ಕುಂದು ಕೊರತೆ ಆಲಿಸಲಿದ್ದು, ಅವರ ಬಳಿ ಕಾವೇರಿ ನೀರು ಕುರಿತು ನಿಮ್ಮ ಸಮಸ್ಯೆ ಹೇಳಿಕೊಳ್ಳಬಹುದು.