ಬೆಂಗಳೂರಿಗೆ ಮಳೆ ಹಾವಳಿ ಜತೆಗೆ ಕುಡಿಯುವ ನೀರಿನ ಸಮಸ್ಯೆ
ಬೆಂಗಳೂರು, ಅಕ್ಟೋಬರ್ 08: ಸತತ ಮಳೆಯ ಹಾವಳಿಗೆ ಸಿಲುಕಿ ನಲುಕಿರುವ ಬೆಂಗಳೂರು ಮಹಾನಗರ ಹಲವೆಡೆ ಇನ್ನೆರಡು ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ನಗರದ ಉತ್ತರ ಹಾಗೂ ಪೂರ್ವ ಭಾಗಕ್ಕೆ ಕಾವೇರಿ ನೀರು ಪೂರೈಸುವ ಪೈಪ್ ಲೈನ್ ನಲ್ಲಿ ಸೋರಿಕೆಯಿಂದಾಗಿ ಭಾರಿ ಸಮಸ್ಯೆ ಉಂಟಾಗಿತ್ತು. ಈಗ ಕಾವೇರಿ ಮೊದಲ ಹಂತದ ನೀರು ಪೂರೈಕೆ ಘಟಕಕ್ಕೆ ವಿದ್ಯುತ್ ಸರಬರಾಜು ವ್ಯತ್ಯಯವಾಗಿದೆ.

ಇದರಿಂದಾಗಿ ಅನಿವಾರ್ಯವಾಗಿ ಜಯನಗರ 3 ಹಾಗೂ 4ನೇ ಹಂತ, 7 ಮತ್ತು 8ನೇ ಬ್ಲಾಕ್, ಚಾಮರಾಜಪೇಟೆ, ಕೋರಮಂಗಲ, ದೊಮ್ಮಲೂರು, ಜಾನ್ಸನ್ ಮಾರ್ಕೆಟ್, ಕುಮಾರಸ್ವಾಮಿ ಲೇಔಟ್, ಸಿಎಲ್ಆರ್ ಪ್ರದೇಶ, ಹಲಸೂರು, ಕತ್ರಿಗುಪ್ಪೆ ಮುಂತಾದ ಪ್ರದೇಶಗಳಲ್ಲಿ ನೀರಿನ ಪೂರೈಕೆಯನ್ನು ದಿನಾಂಕ 10/08/2017ರಂದು ಸ್ಥಗಿತಗೊಳಿಸಲಾಗುತ್ತದೆ ದಯವಿಟ್ಟು ಸಹಕರಿಸಬೇಕು ಎಂದು ಜಲಮಂಡಳಿ ಮನವಿ ಮಾಡಿಕೊಂಡಿದೆ.
ಬೆಳಗ್ಗೆ 9 ರಿಂದ ರಾತ್ರಿ 9ರ ತನಕ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತದೆ, ಕಾವೇರಿ ಮೊದಲ ಹಂತಕ್ಕೆ ವಿದ್ಯುತ್ ಪೂರೈಸುವ 66 ಕೆವಿ ಸಾಮರ್ಥ್ಯದ ಪೂರೈಕೆಯ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ.
ಮಳೆಯಿಂದಾಗಿ ಹಲವೆಡೆ ನೀರು ಪೂರೈಕೆ ಪೈಪ್ ಗಳಲ್ಲಿ ಕೆಸರು, ಕಸ, ಮಣ್ಣು ಸೇರಿಕೊಂಡಿವೆ. ಕೆಲವೆಡೆ ಕೊಳಚೆ ನೀರು ಹಾಗೂ ಶುದ್ಧ ನೀರು ಮಿಶ್ರಣವನ್ನು ಸಾರ್ವಜನಿಕರು ಪಡೆಯುತ್ತಿದ್ದಾರೆ. ಈ ಬಗ್ಗೆ ಕಾರ್ಯಾಚರಣೆ ಜಾರಿಯಲ್ಲಿದ್ದು, ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ನೀರು ಪೂರೈಕೆಯಾಗಲಿದೆ ಎಂದು ಜಲಮಂಡಳಿ (ಉತ್ತರ) ಮುಖ್ಯ ಇಂಜಿನಿಯರ್ ರವೀಂದ್ರ ಅವರು ಹೇಳಿದ್ದಾರೆ.












Click it and Unblock the Notifications