ಬೆಂಗಳೂರು : ಉದ್ಯಮಿ ಹಂತಕರ ಬಂಧನ, ಕೊಂದಿದ್ದು ಪುತ್ರಿ!
ಬೆಂಗಳೂರು, ಆಗಸ್ಟ್ 19 : ಬೆಂಗಳೂರಿನ ರಾಜಾಜಿನಗರದ ನಿವಾಸಿ, ಉದ್ಯಮಿ ಜೈಕುಮಾರ್ ಜೈನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪುತ್ರಿ ಮತ್ತು ಆಕೆಯ ಪ್ರಿಯಕರ ಸೇರಿಕೊಂಡು ಹತ್ಯೆ ಮಾಡಿದ್ದರು.
40 ವರ್ಷದ ಜೈಕುಮಾರ್ ಜೈನ್ ಶವ ಭಾನುವಾರ ಮನೆಯ ಶೌಚಾಲಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡ ಪೊಲೀಸರು 9ನೇ ತರಗತಿಯಲ್ಲಿ ಓದುತ್ತಿದ್ದ ಪುತ್ರಿಯನ್ನು ಬಂಧಿಸಿದ್ದಾರೆ.
ಜೈಕುಮಾರ್ ಶವ ಶೌಚಾಲಯದಲ್ಲಿ ಪತ್ತೆಯಾಗಿತ್ತು. ಆದರೆ, ಅದರ ಪಕ್ಕದ ಕೊಠಡಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿತ್ತು. ಅದೇ ಕೊಠಡಿಯಲ್ಲಿ ಜೈಕುಮಾರ್ ಮಲಗುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆದ್ದರಿಂದ, ಇದು ಕೊಲೆ ಇರಬಹುದು ಎಂಬ ಆಯಾಮದಲ್ಲಿಯೇ ತನಿಖೆ ನಡೆಸಿದ್ದರು.

ಹತ್ಯೆ ಆಗಿದ್ದು ಹೇಗೆ? : ಪ್ರಿಯಕರನ ಜೊತೆ ಸೇರಿ ತಂದೆಯ ಹತ್ಯೆಗೆ ಪುತ್ರಿ ಸಂಚು ರೂಪಿಸಿದ್ದಳು. ತಾಯಿ ಮತ್ತು ಸಹೋದರ ಕೆಲಸದ ನಿಮಿತ್ತ ಪಾಂಡಿಚೇರಿಗೆ ಹೋಗಿದ್ದರು. ಮೊದಲು ತಂದೆಗೆ ನಿದ್ರೆ ಮಾತ್ರೆ ನೀಡಿ, ಬಳಿಕ ಚಾಕುವಿನಿಂದ ಚುಚ್ಚು ಹತ್ಯೆ ಮಾಡಲಾಗಿತ್ತು. ಬಳಿಕ ಸಿಕ್ಕಿ ಬೀಳುವ ಅನುಮಾನದಲ್ಲಿ ಶೌಚಾಲಯಕ್ಕೆ ಹೆಣವನ್ನು ಸಾಗಿಸಿ ಬೆಂಕಿ ಹಚ್ಚಿದ್ದರು.
ಶನಿವಾರ ಪಾರ್ಟಿ : ಶನಿವಾರ ರಾತ್ರಿ ಜೈಕುಮಾರ್ ಸ್ನೇಹಿತನ ಜೊತೆ ಪಾರ್ಟಿ ಮಾಡಿದ್ದರು. ಬಳಿಕ ಆತ ಮನೆಯಿಂದ ಹೊರ ಹೋಗಿದ್ದ. ತಂದೆ ಮತ್ತು ಪುತ್ರಿ ಇಬ್ಬರೇ ಇದ್ದಾಗ ಪ್ರಿಯಕರನನ್ನು ಕರೆಸಿಕೊಂಡು ಆಕೆ, ತಂದೆಯನ್ನು ಹತ್ಯೆ ಮಾಡಿದ್ದಾಳೆ.
ನನಗೆ ಸ್ವಾತಂತ್ರ್ಯವಿರಲಿಲ್ಲ : 9ನೇ ತರಗತಿ ಓದುತ್ತಿದ್ದ ಪುತ್ರಿಗೆ ಪ್ರಿಯಕರನಿದ್ದ. ಆತನೊಂದಿಗೆ ಹೊರಗೆ ಹೋಗಲು ಜೈಕುಮಾರ್ ಒಪ್ಪಿಗೆ ನೀಡುತ್ತಿರಲಿಲ್ಲ. ಶನಿವಾರವೂ ಪಾರ್ಟಿ ಮಾಡಲು ಹೋಗುವುದಾಗಿ ಹೇಳಿದ್ದಾಗ ಜೈಕುಮಾರ್ ಒಪ್ಪಿಗೆ ನೀಡಿರಲಿಲ್ಲ. "ನನಗೆ ಮನೆಯಲ್ಲಿ ಸ್ವಾತಂತ್ರ್ಯವಿರಲಿಲ್ಲ. ಆದ್ದರಿಂದ, ಹತ್ಯೆ ಮಾಡಿದೆ" ಎಂದು ಪುತ್ರಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.
ರಾಜಸ್ಥಾನ ಮೂಲದ ಜೈಕುಮಾರ್ ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದರು. ಭಾಷ್ಯಂ ವೃತ್ತದ ಸಮೀಪ ಅಂಗಡಿ ಇದ್ದು, ಅಲ್ಲೇ ಮನೆ ಮಾಡಿಕೊಂಡಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು.











Click it and Unblock the Notifications