ಗೌರಿ ಹಂತಕರ ನೇಣಿಗೇರಿಸಿ, ಸಂಘ ಪರಿವಾರವನ್ನು ದೂಷಿಸಬೇಡಿ: ಬಿಎಸ್ ವೈ
ಬೆಂಗಳೂರು, ಸೆಪ್ಟೆಂಬರ್ 12: ಗೌರಿ ಲಂಕೇಶ್ ಹತ್ಯೆಯಲ್ಲಿ ನಕ್ಸಲರ ಕೈವಾಡ ಇಲ್ಲ. ಇದು ಸಂಘ ಪರಿವಾರದ ಕೃತ್ಯ ಎಂದು ಸೋಮವಾರ ಮಾಜಿ ನಕ್ಸಲ್ ನಾಯಕರಾದ ಸಿರಿಮನೆ ನಾಗರಾಜ್ ಹಾಗೂ ನೂರ್ ಶ್ರೀಧರ್ ಹೇಳಿದರು. ಈ ಹೇಳಿಕೆಯನ್ನು ನಿರಾಕರಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈ ಆರೋಪ ಆಧಾರರಹಿತವಾದದ್ದು ಎಂದಿದ್ದಾರೆ.
ಈ ಆರೋಪ ಹಾಸ್ಯಾಸ್ಪದವಾದದ್ದು. ಈ ಹತ್ಯೆಗೂ ಬಿಜೆಪಿ ಅಥವಾ ಸಂಘ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಶೀಘ್ರವೇ ನ್ಯಾಯ ದೊರೆಯಬೇಕು ಮತ್ತು ಕೊಲೆಗಾರರನ್ನು ನೇಣುಗಂಬಕ್ಕೆ ಏರಿಸಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ.
In Pics: ನಾನೂ ಗೌರಿ ಎಂದು ಬಂದರು ಸಾವಿರಾರು ಮಂದಿ

ಗೌರಿ ಲಂಕೇಶ್ ಹತ್ಯೆಯನ್ನು ನಕ್ಸಲ್ ನಾಯಕ ವಿಕ್ರಮ್ ಗೌಡ ಮಾಡಿದ್ದಾನೆ ಎಂಬ ಆರೋಪವನ್ನು ಸಿರಿಮನೆ ನಾಗರಾಜು ಹಾಗೂ ನೂರ್ ಶ್ರೀಧರ್ ನಿರಾಕರಿಸಿದ್ದಾರೆ. ಈ ಹತ್ಯೆಯಲ್ಲಿ ನಕ್ಸಲರ ಕೈವಾಡ ಇಲ್ಲ. ವಿಕ್ರಮ್ ಗೌಡ ಆದಿವಾಸಿ ಯುವಕ. ಆತ ಅಮಾಯಕ. ಗೌರಿ ಲಂಕೇಶ್ ರನ್ನು ಕೊಲ್ಲುವುದಾಗಿ ಆತ ಯೋಚನೆ ಕೂಡ ಮಾಡಿರಲ್ಲ. ಕೆಲ ಗುಂಪು ಆತನನ್ನು ಬಲಿಪಶು ಮಾಡಲು ಯತ್ನಿಸುತ್ತಿವೆ ಎಂದು ಶ್ರೀಧರ್ ಹೇಳಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಭದ್ರತೆ ಒದಗಿಸಲು ಕಾಂಗ್ರೆಸ್ ಸರಕಾರ ವಿಫಲವಾಯಿತು ಎಂದು ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಸಂಘ ಪರಿವಾರದ ಬಗ್ಗೆ ಆರೋಪ ಮಾಡಿದ ರಾಹುಲ್ ಗಾಂಧಿ ಬಳಿ ಸಾಕ್ಷ್ಯಾಧಾರಗಳಿದ್ದರೆ ಅದನ್ನು ಒದಗಿಸಲಿ ಎಂದು ಕೂಡ ಅವರು ಹೇಳಿದ್ದಾರೆ.
ಸೆಪ್ಟೆಂಬರ್ ಐದರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಮುಂಭಾಗ ಗೌರಿ ಲಂಕೇಶ್ ಅವರ ಹತ್ಯೆಯಾಗಿತ್ತು. ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಗೌರಿ ಅವರಿಗೆ ಗುಂಡು ಹಾರಿಸಿದ ದೃಶ್ಯಗಳು ಸಿಸಿ ಟಿವಿ ಫೂಟೇಜ್ ನಲ್ಲಿ ದೊರೆತಿದ್ದವು. ಈ ಹತ್ಯೆ ಬಗ್ಗೆ ಸಾರ್ವಜನಿಕರು ಹಾಗೂ ಮಾಧ್ಯಮದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications