ಮೋದಿ ಸಮಾವೇಶಕ್ಕೆ ಸ್ವಾಗತಿಸುತ್ತಿದೆ ಬಿಎಸ್ವೈ ಪೋಸ್ಟರ್!
ಬೆಂಗಳೂರು, ನ. 13 : ಮಾಜಿ ಮುಖ್ಯಮಂತ್ರಿ ಮತ್ತು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳುವ ವಿಷಯ ಯಕ್ಷಪ್ರಶ್ನೆಯಾಗಿದೆ. ಆದರೆ, ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಸದ್ಯ ಮೋದಿ ಸಮಾವೇಶದ ಸ್ಥಳದಲ್ಲೂ ಯಡಿಯೂರಪ್ಪ ಪೋಸ್ಟರ್ ಜನರನ್ನು ಸ್ವಾಗತಿಸುತ್ತಿದೆ.
ನ.17ರ ಭಾನುವಾರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾವೇಶದ ಸುತ್ತ-ಮುತ್ತಲಿನ ಸ್ಥಳದಲ್ಲಿ ವಿವಿಧ ನಾಯಕರು ಪೋಸ್ಟರ್ ಗಳು ರಾರಾಜಿಸುತ್ತಿವೆ. ಅವುಗಳಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಪೋಸ್ಟರ್ ಸಮಾವೇಶದ ಪ್ರವೇಶ ದ್ವಾರದ ಬಳಿಯೇ ಇದೆ.

ಶಾದಿ ಭಾಗ್ಯ ಯೋಜನೆ ವಿಸ್ತರಣೆ ಮತ್ತು ಎಪಿಎಲ್ ಕಾರ್ಡ್ದಾರರಿಗೂ ಪಡಿತರ ವಿತರಣೆ ಬೇಡಿಕೆ ಈಡೇರಿಸುವಂತೆ ಯಡಿಯೂರಪ್ಪ ನಡೆಸುತ್ತಿರುವ ಅಹೋರಾತ್ರ ಧರಣಿಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡುತ್ತಿರುವ ಈ ಪೋಸ್ಟರ್ ಮೋದಿ ಸಮಾವೇಶದ ಪ್ರವೇಶ ದ್ವಾರದ ಬಳಿಯಲ್ಲಿಯೇ ಇದೆ. ಯಡಿಯೂರಪ್ಪ ಬಿಜೆಪಿಗೆ ಮರಳದಿದ್ದರೂ ನರೇಂದ್ರ ಮೋದಿ ಅವರಿಗೆ ಬೆಂಬಲ ಘೋಷಿಸಿದ್ದಾರೆ.
ಆದ್ದರಿಂದ ಯಡಿಯೂರಪ್ಪ ಅಭಿಮಾನಿಗಳು ನರೇಂದ್ರ ಮೋದಿ ಸಮಾವೇಶದ ಹೆಬ್ಬಾಗಿಲಲ್ಲಿ ಇಂತಹ ಪೋಸ್ಟರ್ ಹಾಕಿರಬಹುದು. ಆದರೆ, ಬಿಜೆಪಿ ನಾಯಕರು ಸಮಾವೇಶದ ದಿನ ಅದನ್ನು ಅಲ್ಲಿಂದ ತೆಗೆಯುತ್ತಾರೋ ಅಥವ ಹಾಗೆ ಉಳಿಸಿಕೊಳ್ಳುತ್ತಾರೋ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಿಜೆಪಿ ಮಾಜಿ ಶಾಸಕರೊಬ್ಬರು ಜನರಿಗೆ ದೀಪಾವಳಿ ಶುಭಾಶಯ ಸಲ್ಲಿಸಲು ಹಾಕಿದ್ದ ಪೋಸ್ಟರ್ ಗಳಲ್ಲಿಯೂ ಬಿಜೆಪಿ ನಾಯಕರ ಚಿತ್ರಗಳ ನಡುವೆ ಯಡಿಯೂರಪ್ಪ ಅವರ ಫೋಟೋ ಹಾಕಿದ್ದರು. ಅದಕ್ಕೂ ಮುನ್ನ ಗೋವಾದಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯ ಸಂದರ್ಭದಲ್ಲಿಯೂ ಬಿಜೆಪಿ ನಾಯಕರ ಪೋಟೋ ಜೊತೆಗೆ ಯಡಿಯೂರಪ್ಪ ಫೋಟೋ ಕಾಣಿಸಿಕೊಂಡಿತ್ತು.












Click it and Unblock the Notifications