ಪಾಸ್ಪೋರ್ಟ್ಗಾಗಿ ಸುಷ್ಮಾ ಸ್ವರಾಜ್ ನಕಲಿ ಪತ್ರ, ಸಹೋದರರ ಬಂಧನ
ಬೆಂಗಳೂರು, ಏಪ್ರಿಲ್ 14 : ಪಾಸ್ ಪೋರ್ಟ್ಗಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಆಪ್ತ ಕಾರ್ಯದರ್ಶಿ ಸತೀಶ್ ಚಂದ್ರ ಗುಪ್ತಾ ಅವರ ನಕಲಿ ಸಹಿಯುಳ್ಳ ಶಿಫಾರಸು ಪತ್ರಗಳನ್ನು ಕೊಟ್ಟು ಪಾಸ್ಪೋರ್ಟ್ ಪಡೆಯಲು ಯತ್ನಿಸಿದ್ದ ಬೆಂಗಳೂರಿನ ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ.
ಜೆ.ಪಿ.ನಗರದ ಆರ್ಯ್ (25) ಹಾಗೂ ಸೂರ್ಯ ರೋಷನ್ (27) ಎನ್ನುವ ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ. ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯ ಅಧಿಕಾರಿ ಭರತ್ಕುಮಾರ್ ಕುತಟ್ಟಿ ನೀಡಿದ್ದ ದೂರಿನನ್ವಯ ಮೂರು ಶಿಫಾರಸು ಪತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಹೋದರರು, ವಿದೇಶಕ್ಕೆ ಹೋಗಲು ಪಾಸ್ಪೋರ್ಟ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಹಾಕಿದ್ದರು. ಅದರ ಪ್ರತಿಯನ್ನು ಪಾಸ್ಪೋರ್ಟ್ ಕಚೇರಿಗೆ ಸಲ್ಲಿಸಿದ್ದರು.
'ಅದಾದ ಕೆಲ ದಿನಗಳ ಬಳಿಕ ಸುಷ್ಮಾ ಸ್ವರಾಜ್ ಹಾಗೂ ಸತೀಶ್ ಚಂದ್ರ ಗುಪ್ತಾ ಅವರ ನಕಲಿ ಸಹಿಯುಳ್ಳ ಶಿಫಾರಸು ಪತ್ರ ಸಿದ್ಧಪಡಿಸಿದ್ದ ಆರೋಪಿಗಳು, ನೋಂದಣಿ ಅಂಚೆ ಮೂಲಕ ಅದನ್ನು ಪಾಸ್ಪೋರ್ಟ್ ಕಚೇರಿಗೆ ಕಳುಹಿಸಿದ್ದರು.
ಪತ್ರ ತಲುಪಿದ್ದು ಗೊತ್ತಾಗುತ್ತಿದ್ದಂತೆ ಜೆರಾಕ್ಸ್ ಪ್ರತಿ ಸಮೇತ ಕಚೇರಿಗೆ ಹೋಗಿದ್ದ ಅವರು, 'ಸಚಿವೆ ಹಾಗೂ ಕಾರ್ಯದರ್ಶಿ ಅವರು ನಮಗೆ ಪರಿಚಯಸ್ಥರು. ಅವರು ಶಿಫಾರಸು ಪತ್ರ ಕೊಟ್ಟಿದ್ದಾರೆ.
ಬೇಗನೇ ಪಾಸ್ಪೋರ್ಟ್ ಮಾಡಿಕೊಡಿ' ಎಂದು ಸಿಬ್ಬಂದಿಯನ್ನು ಒತ್ತಾಯಿಸಿದ್ದರು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಎರಡು ದಿನ ಬಿಟ್ಟು ಬರುವಂತೆ ಹೇಳಿದ್ದ ಸಿಬ್ಬಂದಿ, ಪತ್ರವನ್ನು ಹಿರಿಯ ಅಧಿಕಾರಿಗಳಿಗೆ ನೀಡಿದ್ದರು. ಅವರು ಪತ್ರವನ್ನು ಫ್ಯಾಕ್ಸ್ ಮೂಲಕ ಸಚಿವರ ಕಚೇರಿಗೆ ಕಳುಹಿಸಿದ್ದರು. ಅದನ್ನು ಪರಿಶೀಲಿಸಿದ್ದ ಅಲ್ಲಿಯ ಅಧಿಕಾರಿಗಳು, ಸಹಿ ನಕಲಿ ಎಂಬುದನ್ನು ಪತ್ತೆ ಹಚ್ಚಿದ್ದರು'
'ಈ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಪಾಸ್ಪೋರ್ಟ್ ಪರಿಶೀಲನೆಗಾಗಿ ಕಚೇರಿಗೆ ಬರುವಂತೆ ಆರೋಪಿಗಳಿಗೆ ಹೇಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.