ಬೆಂಗಳೂರಿಗೆ ಸೇರಿಕೊಳ್ಳಲಿವೆ ಈ ಪಂಚಾಯಿತಿಗಳು, ಇಲ್ಲಿ ಭೂಮಿ ಇದ್ರೆ ನೀವೇ ಕೋಟ್ಯಾಧಿಪತಿಗಳು
ಸಿಲಿಕಾನ್ ಸಿಟಿ ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಾ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ. ಮೊದಲಾದರೆ ಬೆಂಗಳೂರು ಅಂದ್ರೆ ಒಂದು ಸಣ್ಣ ನಗರ ಎನ್ನುತ್ತಿದ್ರು. ಈಗ ಕಣ್ಣು ಹಾಯಿಸಿ ನೋಡುವಷ್ಟು ನಾಲ್ಕು ದಿಕ್ಕಿನಲ್ಲೂ ನಗರ ಬೆಳೆದಿದೆ. ನಗರಕ್ಕೆ ಹೊಂದಿಕೊಂಡಿದ್ದ ಗ್ರಾಮೀಣ ಭಾಗಗಳು ಕೂಡ ಈಗ ಮೈಕೊಡವಿಕೊಂಡು ನಗರೀಕರಣದತ್ತ ಸಾಗಿವೆ. ಶೀಘ್ರದಲ್ಲೇ ಹಲವು ಗ್ರಾಮ ಪಂಚಾಯಿತಿಗಳು ಕೂಡ ಬೆಂಗಳೂರಿನೊಂದಿಗೆ ಬೆರೆತು ಹೋಗಲಿದೆ. ಈ ಗ್ರಾಮಗಳಲ್ಲಿ ಆಸ್ತಿ ಇರುವವರು ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಗಳಾಗೋದು ಗ್ಯಾರಂಟಿ!
ಹೌದು, ಬೆಂಗಳೂರು ಬೃಹತ್ ಆಗಿ ಬೆಳೆದಿರುವುದರಿಂದ ಈಗಿನಂತೆ ಒಂದು ಪಾಲಿಕೆ ಅಧೀನದಲ್ಲಿ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಗ್ರೇಟರ್ ಬೆಂಗಳೂರು ಪರಿಕಲ್ಪನೆಯಡಿ ಬೆಂಗಳೂರನ್ನು ಎರಡು ಅಥವಾ ಮೂರು ಪಾಲಿಕೆಗಳಾಗಿ ವಿಂಗಡಿಸಲು ತಯಾರಿ ನಡೆದಿದೆ. ಇದೇ ವೇಳೆ ಬೆಂಗಳೂರಿಗೆ ಹೊಂದಿಕೊಂಡಿರುವ ಕೆಲವು ಗ್ರಾಮ ಪಂಚಾಯಿತಿಗಳನ್ನು ಕೂಡ ನಗರ ವ್ಯಾಪ್ತಿಗೆ ಸೇರಿಸಿಕೊಳ್ಳಲು ಮುಂದಾಗಿದೆ. ಇನ್ನು ಎರಡು ಮೂರು ವರ್ಷಗಳಲ್ಲೇ ಈ ಗ್ರಾಮಗಳ ಸ್ವರೂಪವೇ ಬದಲಾಗಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಪುನರ್ ರಚನೆ ಮಾಡುವ ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿ ಸುಮಾರು 25 ಪಂಚಾಯಿತಿಗಳನ್ನು ಹೊಸ ಮುನ್ಸಿಪಲ್ ಕಾರ್ಪೊರೇಷನ್ಗಳಿಗೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ ನಾಲ್ಕು ಅಥವಾ ಐದು ಪಾಲಿಕೆಗಳಾಗಿ ವಿಂಗಡಿಸುವ ಸಾಧ್ಯತೆಯೂ ಇದ್ದು, ಇದು ಗ್ರೇಟರ್ ಬೆಂಗಳೂರು ಅಥಾರಿಟಿಗೆ ವರದಿ ಮಾಡಲಿವೆ. ಬೆಂಗಳೂರಿಗೆ ಸಮೀಪದಲ್ಲಿರುವ ಬೊಮ್ಮಸಂದ್ರ, ಜಿಗಣಿ ಸೇರಿದಂತೆ 25 ಪಂಚಾಯಿತಿಗಳು ಹೊಸ ಬೆಂಗಳೂರು ಮಹಾನಗರ ಪಾಲಿಕೆಗಳಿಗೆ ಸೇರ್ಪಡೆಯಾಗಲಿವೆ. ಇದು ಉತ್ತಮ ಮೂಲಸೌಕರ್ಯ, ಆಡಳಿತ ಮತ್ತು ನಗರಾಭಿವೃದ್ಧಿಗೆ ದಾರಿ ಮಾಡಿಕೊಡಲಿದೆ.
ಕರ್ನಾಟಕ ವಿಧಾನಸಭೆಯ ಜಂಟಿ ಪರಿಶೀಲನಾ ಸಮಿತಿಯು ಬೃಹತ್ ಬೆಂಗಳೂರು ಆಡಳಿತ ಮಸೂದೆ-2024 ಅನ್ನು ಕಳೆದ ಆರು ತಿಂಗಳಲ್ಲಿ ಕಾನೂನು ತಜ್ಞರು, ನಾಗರಿಕ ಗುಂಪುಗಳು ಮತ್ತು ಸಾರ್ವಜನಿಕರೊಂದಿಗೆ ಸಮಾಲೋಚಿಸಿ ಪರಿಶೀಲನೆಯೂ ನಡೆಸಿದೆ. ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದ ಸಮಿತಿ ಕೂಡ ಈ ಬಗ್ಗೆ ತನ್ನ ವರದಿಯನ್ನು ಸ್ಪೀಕರ್ ಅವರಿಗೆ ಸಲ್ಲಿಸಿದ್ದು, ಈಗ ಶುರುವಾಗಿರುವ ಬಜೆಟ್ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ.

ಬೆಂಗಳೂರು ವಿಂಗಡಣೆಯಾದ್ರೆ ಯಾರಿಗೆಲ್ಲ ಲಾಭ?
ಈ ಸಮಿತಿಯು ಬಿಬಿಎಂಪಿಯ ಸ್ವರೂಪ ಬದಲಾವಣೆ ಮಾಡಲು ಸೂಚಿಸಿದ್ದು, ಎರಡು ಅಥವಾ ಏಳು ಸಣ್ಣ ಪಾಲಿಕೆ ಅಥವಾ ನಗರಸಭೆಗಳನ್ನು ಸ್ಥಾಪಿಸಲು ಶಿಫಾರಸು ಮಾಡಿದೆ. ಈಗಿರುವ 200 ಚದರ ಕಿ.ಮೀ. ವ್ಯಾಪ್ತಿಯ ಬೆಂಗಳೂರು ಮಹಾನಗರ ಪಾಲಿಕೆಯ ಮಿತಿಯನ್ನು ಉಳಿಸಿಕೊಂಡು, ಉಳಿದಂತೆ ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಉತ್ತರ ವಲಯಗಳಾಗಿ ಬೆಂಗಳೂರನ್ನು ವಿಭಜಿಸಿ ಸರ್ಕಾರವು ಐದು ಪಾಲಿಕೆಗಳನ್ನು ರಚಿಸುವ ಸಾಧ್ಯತೆಯಿದೆ. ಇದರಿಂದಾಗಿ ಪ್ರತಿ ಪುರಸಭೆಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ.

ಆಸ್ತಿ ತೆರಿಗೆಗಳ ಸಂಗ್ರಹಣೆ ಮತ್ತು ಹಂಚಿಕೆಯ ಮೇಲೂ ಸಂಪೂರ್ಣ ನಿಯಂತ್ರಣ ಹೊಂದಿರುತ್ತೆ. ಈಗಾಗಲೇ ಅತಿ ಹೆಚ್ಚು ಆಸ್ತಿ ತೆರಿಗೆ ಪಾವತಿಸುತ್ತಿರುವ ಮಹದೇವಪುರದಂತಹ ಪ್ರದೇಶದ ಜನರ ಬೇಡಿಕೆಯೂ ಈಡೇರಿದಂತಾಗಿದೆ. ಒಟ್ಟಾರೆ ಈಗ ಪಂಚಾಯಿತಿಗಳು ಕೂಡ ಬೆಂಗಳೂರು ಹೊಸ ಪಾಲಿಕೆಗಳ ವ್ಯಾಪ್ತಿಗೆ ಸೇರಿಕೊಳ್ಳುವುದಿಂದ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬರಲಿದೆ. ಈ ಪ್ರಸ್ತಾವನೆ ಬೆನ್ನಲ್ಲೇ ರಿಯಲ್ ಎಸ್ಟೇಟ್ ದೈತ್ಯರು ಈ ಪ್ರದೇಶಗಳ ಮೇಲೆ ಹದ್ದಿನಕಣ್ಣಿಟ್ಟಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಈ ಭಾಗದ ಭೂಮಿ ಬೆಲೆ ದುಬಾರಿಯಾಗಲಿದ್ದು, ದಯವಿಟ್ಟು ಯಾರೂ ತಮ್ಮ ಆಸ್ತಿಗಳನ್ನು ಆತುರದಲ್ಲಿ ಮಾರಿಕೊಳ್ಳಬೇಡಿ ಎಂದೂ ತಜ್ಞರು ಸಲಹೆ ನೀಡಿದ್ದಾರೆ.
ಈಗಾಗಲೇ ರಿಯಲ್ ಎಸ್ಟೇಟ್ ಕುಳಗಳು ಈ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಈಗಲೇ ಕಡಿಮೆ ಬೆಲೆಗೆ ಭೂಮಿ ಖರೀದಿಸಿದರೆ ಮುಂದಿನ ವರ್ಷಗಳಲ್ಲಿ ಹತ್ತುಪಟ್ಟು ಲಾಭ ಗಳಿಸಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲೂ ಲೇಔಟ್ಗಳ ನಿರ್ಮಾಣ ಭರದಿಂದ ಸಾಗಿದೆ. ಇಲ್ಲಿ ಆಸ್ತಿ ಖರೀದಿಸಲು ಜನ ಮುಗಿಬೀಳುತ್ತಿದ್ದಾರೆ.












Click it and Unblock the Notifications