ವಿಡಿಯೋ, ರಾಮನಗರ: ಶಾಲಾ ಮಕ್ಕಳಿದ್ದ ಬಿಎಂಟಿಸಿ ಬಸ್ ಗೆ ಬೆಂಕಿ
ಬೆಂಗಳೂರಿನಿಂದ ತಲಕಾಡಿಗೆ ಪ್ರವಾಸ ಹೊರಟಿದ್ದ ಶಾಲಾ ಮಕ್ಕಳಿದ್ದ ಬಿಎಂಟಿಸಿ ಬಸ್ಒಂದು ರಾಮನಗರದ ಮುದಗೆರೆಯಲ್ಲಿ ಹೊತ್ತಿ ಉರಿದಿದ್ದು, ಮಕ್ಕಳೆಲ್ಲಾ ಅನಾಹುತದಿಂದ ಪಾರಾಗಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ರಾಮನಗರ, ಡಿಸೆಂಬರ್, 3: ಪ್ರವಾಸಕ್ಕೆ ಹೊರಟಿದ್ದ ಶಾಲಾ ಮಕ್ಕಳ ವಾಹನಕ್ಕೆ ಬೆಂಕಿ ತಾಕಿ ಬಸ್ ಸುಟ್ಟು ಭಸ್ಮವಾಗಿರುವ ಘಟನೆ ರಾಮನಗರ ಮುದಗೆರೆಯಲ್ಲಿ ಶನಿವಾರ ನಡೆದಿದೆ.
ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ನ ಬಿಎಂಎಲ್ ಶಾಲೆಯ ಒಟ್ಟು 80 ವಿದ್ಯಾರ್ಥಿಗಳು ಎರಡು ಬಸ್ ಗಳಲ್ಲಿ ತಲಾಕಾಡಿಗೆ ಪ್ರವಾಸ ಹೊರಟಿದ್ದರು. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರು ರಾಮನಗರದ ಮುದಗೆರೆ ಸಮೀಪ ಬಸ್ ಬರುತ್ತಿದ್ದಂತೇ, ಒಂದು ಬಸ್ ನ ಇಂಜಿನ್ ಹೊತ್ತಿ ಉರಿದಿದೆ.

ಕೂಡಲೇ ಎಚ್ಚೆತ್ತುಕೊಂಡ ಬಸ್ ಚಾಲಕ ಮತ್ತು ಶಿಕ್ಷಕರು ಮಕ್ಕಳನ್ನು ಬಸ್ ನಿಂದ ಕೆಳಗಿಳಿಸಿ ಪ್ರಾಣಾಪಾಯದಿಂದ ಮಕ್ಕಳನ್ನು ಪಾರು ಮಾಡಿದ್ದಾರೆ.
ಬಸ್ ನಲ್ಲಿ ಒಟ್ಟು 40 ವಿದ್ಯಾರ್ಥಿಗಳಿದ್ದರು. ಅವರೆಲ್ಲಾ ಏಳು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. ಶಿಕ್ಷಕರು ಶಾಲಾ ಆಡಳಿತ ಮಂಡಳಿಗೆ, ಮತ್ತು ಪೋಷಕರಿಗೆ ವಿಷಯ ಮುಟ್ಟಿಸಿದ್ದು, ಅವರೆಲ್ಲಾ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ಹೇಳಲಾಗಿದೆ.
ಬಸ್ ಹೊತ್ತಿ ಉರಿದ ಪರಿಣಾಮ ಹೆದ್ದಾರಿಯಯಲ್ಲಿ ಸುಮಾರು 2 ಕೀ.ಮೀ ವರೆಗೆ ಸಂಚಾರ ಸ್ಥಗಿತಗೊಂಡಿದೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಸ್ಥಗಿತಗೊಂಡಿದ್ದ ಸಂಚಾರವನ್ನು ತೆರವುಗೊಳಿಸುತ್ತಿದ್ದಾರೆ.











Click it and Unblock the Notifications