ಜೂನ್ 19ರಂದು ಮಧ್ಯರಾತ್ರಿವರೆಗೂ ನಮ್ಮ ಮೆಟ್ರೋ ಸಂಚಾರ
ಬೆಂಗಳೂರು, ಜೂನ್ 16: ಜೂನ್ 19ರ ಭಾನುವಾರ ಬಹುನಿರೀಕ್ಷಿತ ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ20 ಅಂತಾರಾಷ್ಟ್ರೀಯ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಾವಿರಾರು ಜನ ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಇವರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ರೈಲುಗಳ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು-ದಕ್ಷಿಣ ಆಫ್ರಿಕಾ ಟಿ20 ಸರಣಿಯ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ. ಪಂದ್ಯ ವೀಕ್ಷಿಸಲು ಸಾವಿರಾರು ಜನರು ಕ್ರೀಡಾಂಗಣದಲ್ಲಿ ಸೇರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಪಂದ್ಯದ ನಂತರದ ತಡರಾತ್ರಿಯಲ್ಲಿ ಜನರ ಪ್ರಯಾಣಕ್ಕೆ ಸಹಾಯಕವಾಗಲು ಜೂನ್ 19 ಮತ್ತು ಜೂನ್ 20 ರ ಮಧ್ಯರಾತ್ರಿ ತನಕ ಮೆಟ್ರೋ ರೈಲು ಹೆಚ್ಚುವರಿ ಗಂಟೆಗಳ ಕಾಲ ಸೇವೆ ಒದಗಿಸಲಿದೆ.
ಹೆಚ್ಚುವರಿ ಅವಧಿಗೆ ಮೆಟ್ರೋ ರೈಲು ಓಡಾಟದ ಕುರಿತು ಬಿಎಂಆರ್ ಸಿಎಲ್ ಪ್ರಕಟಣೆ ನೀಡಿದೆ. ನಾಲ್ಕು ಟರ್ಮಿನಲ್ ನಿಲ್ದಾಣಗಳಿಂದ (ಕೆಂಗೇರಿ, ನಾಗಸಂದ್ರ, ಬೈಯಪ್ಪನಹಳ್ಳಿ ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್) ಕೊನೆಯ ರೈಲು ಜೂನ್ 20ರ ಬೆಳಗಿನ ಜಾವ 1 ಗಂಟೆಗೆ ಹೊರಡಲಿದೆ ಎಂದು ತಿಳಿಸಿದೆ. ಮೆಜೆಸ್ಟಿಕ್ನಿಂದ ನಾಲ್ಕು ದಿಕ್ಕಿನ ಕಡೆಗೆ ಬೆಳಗಿನ ಜಾವ 1.30ಕ್ಕೆ ಕೊನೆ ರೈಲು ಹೊರಡಲಿದೆ.

ಪೇಪರ್ ಟಿಕೆಟ್ ನೀಡಲಿರುವ ಬಿಎಂಆರ್ ಸಿಎಲ್
ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಲು ಉದ್ದೇಶಿಸಿರುವವರಿಗೆ ಒಂದು ಬಾರಿ ಹಿಂದಿರುಗುವ ಟಿಕೆಟ್ ನೀಡುವುದಾಗಿ ರೈಲು ನಿಗಮ ತಿಳಿಸಿದೆ. ಜನಸಂದಣಿಯನ್ನು ತಪ್ಪಿಸಲು ಕಾಗದದ ಟಿಕೆಟ್ಗಳನ್ನು ಜೂನ್ 19 ರಂದು ಮಧ್ಯಾಹ್ನ 3 ಗಂಟೆಯಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ನೀಡಲಾಗುವುದು, ಈ ಟಿಕೆಟ್ಗಳು ಜೂನ್ 19 ರಂದು ರಾತ್ರಿ 10 ರಿಂದ ಜೂನ್ 20 ರಂದು ಬೆಳಿಗ್ಗೆ 1 ಗಂಟೆಯವರೆಗೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಯಾವುದೇ ದಿಕ್ಕಿನ ಕಡೆಗೆ ಒಂದು ಪ್ರಯಾಣ ಮಾಡಲು ಮಾತ್ರ ಅನುಮತಿ ನೀಡುತ್ತದೆ.

ವಿಶೇಷ ಪ್ರಯಾಣಕ್ಕೆ 50 ರುಪಾಯಿ ನಿಗದಿ
ಕಬ್ಬನ್ ಪಾರ್ಕ್ಗೆ ತೆರಳಲು ಸ್ಮಾರ್ಟ್ ಕಾರ್ಡ್, ಟೋಕನ್ಗಳನ್ನು ಉಪಯೋಗಿಸಬಹುದು. ಆದರೆ ರಾತ್ರಿ 10 ಗಂಟೆಯ ನಂತರ ಕಬ್ಬನ್ ಪಾರ್ಕ್ನಿಂದ ಹೊರಡುವ ಮೆಟ್ರೋ ರೈಲುಗಳಿಗೆ ಟೋಕನ್, ಸ್ಮಾರ್ಟ್ ಕಾರ್ಡ್ ಅನ್ವಯ ಆಗುವುದಿಲ್ಲ. ಕಾಗದದ ಟಿಕೆಟ್ ಪಡೆದವರು ಮಾತ್ರ ಪ್ರಯಾಣಿಸಬಹುದಾಗಿದೆ. ಟಿಕೆಟ್ಗೆ 50 ರುಪಾಯಿ ನಿಗದಿಪಡಿಸಿದ್ದು, ಯಾವುದೇ ನಿಲ್ದಾಣದಲ್ಲಿ ಇಳಿದರೂ ಇದೇ ಮೊತ್ತ ಇರಲಿದೆ ಎಂದು ಬಿಎಂಆರ್ ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

2019ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ ನಡೆದಿತ್ತು
2019ರ ಸೆಪ್ಟಂಬರ್ನಲ್ಲಿ ಇಲ್ಲಿ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯ ನಡೆದಿತ್ತು. ಅದೂ ಕೂಡ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿತ್ತು ಎನ್ನುವುದೇ ವಿಶೇಷ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಅದಾದ ನಂತರ ಕೋವಿಡ್ ಕಾರಣದಿಂದ ಇಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿರಲಿಲ್ಲ. ವರ್ಷಗಳ ನಂತರ 2022ರ ಮಾರ್ಚ್ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ಟೆಸ್ಟ್ ಪಂದ್ಯವನ್ನಾಡಿತ್ತು. ಈ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 238 ರನ್ಗಳ ಭಾರಿ ಅಂತರದ ಜಯ ಸಾಧಿಸಿತ್ತು.

ಆಟ ಕಣ್ತುಂಬಿಕೊಳ್ಳಲು ಕಾದಿರುವ ಅಭಿಮಾನಿಗಳು
ಕೋವಿಡ್ -19 ಲಾಕ್ಡೌನ್ ಕ್ರಿಕೆಟ್ ಪಂದ್ಯಾವಳಿ ಮೇಲೂ ಪರಿಣಾಮ ಬೀರಿತ್ತು. ಆಗಾಗ್ಗೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಾಕ್ಷಿಯಾಗುತ್ತಿದ್ದ ಚಿನ್ನಸ್ವಾಮಿ ಕ್ರೀಡಾಂಗಣ ಕೋವಿಡ್ ಪರಿಣಾಮದಿಂದ ಪಂದ್ಯಗಳ ಬರ ಎದುರಿಸಿದೆ.
40,000 ವೀಕ್ಷಕರ ಸಾಮರ್ಥ್ಯ ಹೊಂದಿರುವ ಚಿನ್ನಸ್ವಾಮಿ ಕ್ರೀಡಾಂಗಣ ಕೋವಿಡ್-19 ನಂತರ ಮೊದಲ ಅಂತಾರಾಷ್ಟ್ರೀಯ ಟಿ-20 ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಆಟವನ್ನು ಕಣ್ತುಂಬಿಕೊಳ್ಳಲು ಕ್ರೀಡಾ ಪ್ರೇಮಿಗಳು ಕಾತರರಾಗಿದ್ದಾರೆ.












Click it and Unblock the Notifications