ಸಂತೋಷ್ ಹತ್ಯೆ: ರಾಮಲಿಂಗಾರೆಡ್ಡಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಬೆಂಗಳೂರು, ಫೆಬ್ರವರಿ 13: ಹಿಂದು ಕಾರ್ಯಕರ್ತ ಸಂತೋಷ್ ಹತ್ಯೆಗೆ ಸ್ಕ್ರೂ ಡ್ರೈವರ್ ಬಳಸಲಾಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ ಗೃಹ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಅವರ ಧೋರಣೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ಜೆ.ಸಿ.ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಯಮಹಲ್ ನ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಗೃಹ ಇಲಾಖೆಯ ವೈಫಲ್ಯದ ವಿರುದ್ಧ ಘೋಷಣೆ ಕೂಗಿದರು. ಪೊಲೀಸರ ದರ್ಪ ಅಟ್ಟಹಾಸಕ್ಕೇರಿತ್ತು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಮೋರ್ಚಾ ಕಾರ್ಯಕರ್ತರನ್ನು ಒತ್ತಡ ಹೇರಿ ಬಂಧಿಸಲು ಮುಂದಾದರು.
ಡಿವಿಎಸ್ ಗೆ ಸುಳ್ಳು ಹೇಳಿಕೆ ನೀಡುವುದೇ ಖಯಾಲಿ: ರಾಮಲಿಂಗಾರೆಡ್ಡಿ
ಆಗ ಯಾವುದೇ ಪ್ರಚೋದನೆ ಇಲ್ಲದೇ ಬಂಧಿಸುತ್ತಿರುವುದನ್ನು ಪ್ರಶ್ನಿಸಿದ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ತಮ್ಮೇಶಗೌಡರ ತಲೆ ಕೂದಲನ್ನು ಎಳೆದು ಎಸಿಪಿ ರವಿಪ್ರಸಾದ್ ದರ್ಪ ತೋರಿದರು. ಲಾಠಿ ಚಾರ್ಜ್ ಮೂಲಕ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಯತ್ನಿಸಿದರು. ನಂತರ ಎಲ್ಲಾ ಕಾರ್ಯಕರ್ತರನ್ನು ಬಲವಂತವಾಗಿ ಬಂಧಿಸಿ ಬೇರೆಡೆಗೆ ಕರೆದ್ಯೊಯಲಾಯಿತು.
ಪೊಲೀಸರ ದೌರ್ಜನ್ಯಕ್ಕೆ ಯುವಮೋರ್ಚಾ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಇದೇ ರೀತಿ ಧೋರಣೆ ಮುಂದುವರೆದರೆ ಗೃಹ ಸಚಿವ ಶ್ರೀ ರಾಮಲಿಂಗಾರೆಡ್ಡಿ ಮನೆ ಎದುರು ಪ್ರತಿಭಟಿಸುವುದಾಗಿ ಶ್ರೀ ತಮ್ಮೇಶಗೌಡ ಎಚ್ಚರಿಕೆ ನೀಡಿದರು. ನಂತರ ಶ್ರೀ ತಮ್ಮೇಶ ಗೌಡ, ನಗರ ಅಧ್ಯಕ್ಷರಾದ ಶ್ರೀ ಸಪ್ತಗಿರಿ ಗೌಡ, ನಗರ ಜಿಲ್ಲೆ ಅಧ್ಯಕ್ಷರಾದ ಶ್ರೀ ನವೀನ ರೆಡ್ಡಿ ಹಾಗೂ ಮುಂತಾದವರನ್ನು ಪೊಲೀಸರು ವಶಕ್ಕೆ ಪಡೆದರು.