ತೇಜಸ್ವಿನಿ ಮಾತಿಗೆ ಬಿಜೆಪಿಯಲ್ಲೇ ಅಸಮಾಧಾನ
ಬೆಂಗಳೂರು, ನ. 13: ಬಿಜೆಪಿ ವಕ್ತಾರೆ ತೇಜಸ್ವಿನಿ ರಮೇಶ ಹೇಳಿಕೆಗೆ ಅವರ ಪಕ್ಷದ ವರಿಷ್ಠರೇ ಬೇಸರ ವ್ಯಕ್ತಪಡಿಸಿದ್ದು, ಪಕ್ಷದ ಘನತೆಗೆ ಧಕ್ಕೆಯಾಗುವಂತೆ ಹೇಳಿಕೆ ನೀಡಬೇಡಿ ಎಂದು ಸೂಚಿಸಿದ್ದಾರೆ. ಇದರಿಂದ ಕಾಂಗ್ರೆಸ್ ಕಾಲೆಳೆಯಲು ಹೋದ ತೇಜಸ್ವಿನಿ ಸ್ವತಃ ಜಾರಿಬಿದ್ದು ನಗೆಪಾಟಲಿಗೀಡಾಗಿದ್ದಾರೆ.
ತೇಜಸ್ವಿನಿ ರಮೇಶ ಹಾಗೂ ಸಚಿವೆ ಉಮಾಶ್ರೀ ಜಟಾಪಟಿ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಂಡ ಹಿನ್ನೆಲೆಯಲ್ಲಿ ಪ್ರಹ್ಲಾದ ಜೋಶಿ ಪ್ರತಿಕ್ರಿಯೆ ನೀಡಿದರು.

ರಾಜಕೀಯಕ್ಕಿಂತ ವ್ಯಕ್ತಿಯ ವರ್ಚಸ್ಸು ಮುಖ್ಯವಾಗಿರುತ್ತದೆ. ಸಚಿವೆಯಾಗಿರುವ ಉಮಾಶ್ರೀ ಅವರನ್ನು ಗೌರವಿಸಬೇಕು. ಹೆಣ್ಣು ಮಕ್ಕಳ ಕುರಿತು ಮಾತನಾಡುವಾಗ ಯೋಚಿಸಬೇಕು ಎಂದು ಸೂಚಸಿದ್ದಾರೆ. [ಅಸಭ್ಯ ಹೇಳಿಕೆ: ತೇಜಸ್ವಿನಿ-ಉಮಾಶ್ರೀ ಜಟಾಪಟಿ]
ಅಲ್ಲದೆ, ಇನ್ನು ಮುಂದೆ ಮಾಧ್ಯಮಗಳ ಜತೆ ಮಾತನಾಡುವಾಗ ಶಬ್ದಗಳ ಬಳಕೆ ಸರಿಯಾಗಿರಬೇಕು, ವರಿಷ್ಠರ ಜತೆ ಚರ್ಚಿಸಬೇಕು ಎಂದು ತಮ್ಮದೇ ಪಕ್ಷದ ವಕ್ತಾರಿಗೆ ಜೋಶಿ ಸ್ಪಷ್ಟ ಸೂಚನೆ ನೀಡಿದ್ದಾರೆ.
ಸಚಿವ ವಿನಯಕುಮಾರ ಸೊರಕೆ ವಾಗ್ದಾಳಿ: ತೇಜಸ್ವಿನಿ ರಮೇಶ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ಅವರಿಗೆ ಬಿಜೆಪಿ ಹೊಸದು. ಅವರಿಗಿನ್ನೂ ಆ ಪಕ್ಷದ ಸಂಸ್ಕೃತಿ ಗೊತ್ತಿಲ್ಲ. ಆದ್ದರಿಂದ ಅಲ್ಲಿ ಹೀರೊ ಆಗಲು ಹೊರಟಿದ್ದಾರೆ. ಬಿಜೆಪಿ ಈಗಾಗಲೇ ಬಂಗಾರಪ್ಪ, ಆಳ್ವಾ, ತಾರಾದೇವಿ ಅವರನ್ನು ಬಳಸಿ ಬೀಸಾಡಿದೆ. ತೇಜಸ್ವಿನಿ ಅವರಿಗೂ ಶೀಘ್ರ ಈ ಗತಿ ಬರಲಿದೆ ಎಂದು ಸಚಿವ ವಿನಯಕುಮಾರ ಸೊರಕೆ ಎಚ್ಚರಿಕೆ ನೀಡಿದ್ದಾರೆ.
ತೇಜಸ್ವಿನಿ ಹೇಳಿದ್ದೇನು?: ಕಾಂಗ್ರೆಸ್ನಲ್ಲಿ ಸುಂದರ ಮಹಿಳೆಯರನ್ನು ವಸ್ತುವಿನಂತೆ ಬಳಸಿಕೊಳ್ಳಲಾಗುತ್ತಿದೆ. ಆ ಪಕ್ಷದಲ್ಲಿ ದುಶ್ಯಾಸನನಂತಹ ಮಹಿಳಾ ಪೀಡಕರಿದ್ದಾರೆ. ಪುರುಷರು ಹೇಳಿದಂತೆ ಕೇಳಿದರೆ ಮಾತ್ರ ಮಹಿಳೆಯರಿಗೆ ಪದವಿ ಸಿಗುತ್ತದೆ. ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ, ಅಧಿಕಾರ ನೀಡುವುದಿಲ್ಲ. ಚಿತ್ರನಟಿ ರಮ್ಯಾ ಸುಂದರಿಯಾಗಿದ್ದು, ಸೆಲೆಬ್ರಿಟಿಯಾಗಿರುವ ಕಾರಣ ಅವರಿಗೆ ಟಿಕೆಟ್ ನೀಡಲಾಗಿದೆ. ಆದ್ದರಿಂದ ಮಹಿಳೆಯರು ಕಾಂಗ್ರೆಸ್ ಸೇರುವ ಮೊದಲು ಎಚ್ಚರಿಕೆ ವಹಿಸಬೇಕು ಎಂದು ತೇಜಸ್ವಿನಿ ರಮೇಶ ಮಂಡ್ಯದಲ್ಲಿ ಹೇಳಿದ್ದರು.












Click it and Unblock the Notifications