Bengaluru SCR: ಬಿಜೆಪಿ ಪ್ರಣಾಳಿಕೆಯಲ್ಲಿ 'ಬೆಂಗಳೂರು' ರಾಜ್ಯ ರಾಜಧಾನಿ ಪ್ರದೇಶ (SCR) ಎಂದಿದ್ದೇಕೆ?
ಬೆಂಗಳೂರು, ಮೇ 01: ಕರ್ನಾಟಕ ವಿಧಾನಸಭಾ ಚುನಾವಣೆ 2023 ಪ್ರಯುಕ್ತ ರಾಜ್ಯ ಬಿಜೆಪಿಯು ಸೋಮವಾರ ಪ್ರಣಾಳಿಕೆ ಹೊರಡಿಸಿದ್ದು, ಅದರಲ್ಲಿ ಬೆಂಗಳೂರಿಗೆ ಹತ್ತು ಹಲವು ಭರವಸೆ ನೀಡಿದೆ. ಮುಂದಿನ ಪೀಳಿಗೆಗೆ ಬೆಂಗಳೂರನ್ನು ಅಭಿವೃದ್ಧಿಪಡಿಸಿ 'ರಾಜ್ಯ ರಾಜಧಾನಿ ಪ್ರದೇಶ (SCR)' ವಾಗಿ ನೀಡಲಾಗುವುದು ಎಂದು ತಿಳಿಸಿದೆ.
ಹಾಗಾದರೆ ಬಿಜೆಪಿ ಪಕ್ಷ ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ, ಉದ್ಯಾನಗರಿ, ಐಟಿ ಕೇಂದ್ರ ಬೆಂಗಳೂರನ್ನು 'ರಾಜ್ಯ ರಾಜಧಾನಿ ಪ್ರದೇಶ' (SCR) ಕರೆದಿದ್ದು ಯಾಕೆ?. ಇದು ಬೆಂಗಳೂರು ನಗರವಾಗಿ ಅಭಿವೃದ್ಧಿ ಹೊಂದಲಿದೆಯೋ? ಇಲ್ಲ ನವದೆಹಲಿ ರೀತಿಯಲ್ಲಿ ಪ್ರದೇಶವಾಗಿ ಅಭಿವೃದ್ಧಿ ಕಾಣಲಿದೆಯೋ ಎಂಬುದು ಪ್ರಣಾಳಿಕೆಯಲ್ಲಿ ಬಹಿರಂಗೊಂಡಿಲ್ಲ.

ಒಂದು ನಗರವೆಂದರೆ ಸಕಲ ಮೂಲಸೌಕರ್ಯ, ನ್ಯಾಯಾಲಯ, ಶೈಕ್ಷಣಿ ಸಂಸ್ಥೆ, ರಸ್ತೆ ಮತ್ತು ಉತ್ತಮ ಸಾರಿಗೆ ವ್ಯವಸ್ಥೆ, ವಿಧಾನಸಭಾ ಕ್ಷೇತ್ರಗಳು ಹೀಗೆ ಎಲ್ಲವನ್ನು ಒಳಗೊಂಡಿರುತ್ತದೆ. ಅದೇ ಪ್ರದೇಶವೆಂದರೆ ಇವೆಲ್ಲದರ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳು, ಜಿಲ್ಲೆಗಳ ಪ್ರದೇಶಗಳು ಜತೆ ಜತೆಗೆ ಅಕ್ಕಪಕ್ಕದ ಪ್ರದೇಶವನ್ನು ಒಳಗೊಂಡ ಪ್ರದೇಶವನ್ನು ಪ್ರದೇಶ ಎನ್ನಲಾಗುತ್ತದೆ.
ದೆಹಲಿಯಂತೆ ಬೆಂಗಳೂರು ಅಭಿವೃದ್ಧಿ?
ಉದಾಹರಣೆಗೆ ರಾಷ್ಟ್ರ ರಾಜಧಾನಿ ನವದೆಹಲಿಯನ್ನು ನೋಡುವುದಾದರೆ ದೆಹಲಿ ಮತ್ತು ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಹಲವಾರು ಜಿಲ್ಲೆಗಳನ್ನು ಒಳಗೊಂಡು 'ರಾಷ್ಟ್ರ ರಾಜಧಾನಿ ಪ್ರದೇಶ' (NCR) ಆಗಿದೆ. ಇದಕ್ಕೆ ಹೋಲಿಕೆ ಮಾಡಿದರೆ ಬೆಂಗಳೂರು ಬೆಳೆಯುತ್ತಿರುವ ಬೃಹತ್ ನಗರ. ಇದರ ಸುತ್ತಮುತ್ತ ದೇವನಹಳ್ಳಿ, ಹೊಸಕೋಟೆ, ತುಮಕೂರು, ಕನಕಪುರ, ರಾಮನಗರ, ಆನೇಕಲ್ ಪ್ರದೇಶಗಳು ಬರುತ್ತವೆ. ಮುಂದಿನ ದಿನಗಳಲ್ಲಿ ಇವೆಲ್ಲ ಪ್ರದೇಶಗಳನ್ನು ಒಳಗೊಂಡಂತೆ ಬೆಂಗಳೂರು ಬೆಳೆಯಲಿದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ.
ಬಿಜೆಪಿ ಪ್ರಣಾಳಿಕೆಯಲ್ಲಿನ ಅಭಿವೃದ್ಧಿ ಅಂಶಗಳನ್ನು ಗಮನಿಸಿದರೆ ನಮ್ಮ ಮೆಟ್ರೋ ನಗರದ ಹೊರವಲಯ ಪ್ರದೇಶ ತಲುಪಿದೆ. ಉಪನಗರ ರೈಲು ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, 16000 ಕೋಟಿ ಅನುದಾನದಡಿ ಅಭಿವೃದ್ಧಿಪಡಿಸುತ್ತಿದೆ. ವಿಶ್ವ ದರ್ಜೆಯ 'ಕಾನ್ಕಾರ್ಡ್ ಬೆಂಗಳೂರು', ಬೆಂಗಳೂರು ಏಕೀಕೃತ ಟ್ರಾನ್ಸಿಟ್ ನೆಟ್ ವರ್ಕ್' ವರ್ಚುವಲ್ ವಿದ್ಯಾಯೋಜನೆ' ಮುಖ್ಯವಾಗಿ'ಮೈ ಬೆಂಗಳೂರು-ಮೈರೂಟ್, ಒನ್ ಸಿಟಿ ಕಾರ್ಡ್ ಯೋಜನೆಗೆ ಬಿಜೆಪಿ ಮುಂದಾಗಿದೆ. ಈ ಮೂಲಕ ಸಾರಿಗೆ ಅಭಿವೃದ್ಧಿ ಪಡಿಸಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಸೆಳೆಯುವ ಪ್ರಯತ್ನ ಇದಾಗಿದೆ ಎನ್ನಲಾಗುತ್ತದೆ.

ಸಾರಿಗೆ ಸುಧಾರಣೆಗೆ ಬಿಜೆಪಿ ಆದ್ಯತೆ
'ಒನ್ ಸಿಟಿ ಒನ್ ಕಾರ್ಡ್' ಯೋಜನೆಯಲ್ಲಿ ತುಮಕೂರು, ಆನೇಕಲ್, ರಾಮನಗರ, ಹೊಸಕೋಟೆ, ದೇವನಹಳ್ಳಿ ಸೇರಿದಂತೆ ಬೆಂಗಳೂರು ಗ್ರಾಮಾಂತರದ ಭಾಗಗಳು ಹಾಗೂ ನಗರದ ಸುತ್ತಮುತ್ತಲಿನ ಭಾಗಗಳು ಬರಲಿವೆಯಾ? ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಒಂದುವೇ ಈ ಭಾಗಗಳನ್ನು ಒಳಗೊಂಡಂತೆ ಬೆಂಗಳೂರು ಅಭಿವದ್ಧಿಯಾದರೆ ಅದು 'ರಾಜ್ಯ ರಾಜಧಾನಿ ಪ್ರದೇಶ' (SCR) ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಣಾಳಿಕೆಯಲ್ಲಿ ಸಾರಿಗೆ ಸಂಪರ್ಕ ಜಾಲದ ವಿಸ್ತರಣೆಗೆ ಹೆಚ್ಚು ಆದ್ಯತೆ ನೀಡಿದಂತಿದೆ. ಹೊಸ ಆಲೋಚನೆಗಳು ಡಿಜಿಟಲ್ ವ್ಯವಸ್ಥೆ ಇಲ್ಲಿವೆ. ಬೆಂಗಳೂರನ್ನು ರಾಜ್ಯ ರಾಜಧಾನಿ ಪ್ರದೇಶ (SCR) ಎಂದು ಕರೆದಿರುವ ಬಿಜೆಪಿ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಂತೆ ಅಭಿವೃದ್ಧಿ ಸಂಕಲ್ಪ ಮಾಡಿದಂತೆ ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಬೆಂಗಳೂರಿನಲ್ಲಿ ಹೈಕೋರ್ಟ್, ಸರ್ಕಾರದ ಆಡಳಿತದ ಮುಖ್ಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸಾಕಷ್ಟು ಐಟಿ ಕಂಪನಿಗಳು ಇಲ್ಲಿವೆ. ಐಟಿ ಹಬ್ ಆಗಿರುವ ಅಧಿಕ ಸಂಚಾರ ದಟ್ಟಣೆ, ಜನದಟ್ಟಣೆ ಪ್ರದೇಶವಾಗಿ ಗುರುತಿಸಿಕೊಂಡಿದೆ. ರಾಜಧಾನಿಯತ್ತ ಬರುವ ವಲಸಿಗರಿಗೆ, ವಿಶ್ವಮಟ್ಟದ ಕಂಪನಿಗಳಿಗೆ,ಹೂಡಿಕೆಗಳಿಗೆ ಕಡಿಮೆ ಇಲ್ಲ. ಇದೆಲ್ಲದ್ದಕ್ಕೂ ಮೂಲಸೌಕರ್ಯ ಒದಗಿಸುತ್ತಾ ಹೋದಂತೆ ನಗರ ವಿಸ್ತರಣೆ ಆಗುತ್ತದೆ.
ಈ ಹಿಂದೆ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡುವ ಪ್ರಸ್ತಾಪವು ಇದೆ ಎಂಬ ಮಾತುಗಳು ಕನ್ನಡಪರ ಮುಖ್ಯಸ್ಥರಿಂದ ಕೇಳಿ ಬಂದಿತ್ತು. ಅವರು ಇದನ್ನು ವಿರೋಧಿಸಿದ್ದರು. ಬೆಂಗಳೂರು ಪ್ರದೇಶವಾಗಿ ಬೆಳೆದರೆ ಅದು ತನ್ನ ಮೂಲ ಸ್ವರೂಪ ಕಳೆದುಕೊಳ್ಳಲಿದೆ ಅಂತಲೂ ಹೇಳಲಾಗುತ್ತಿದೆ.












Click it and Unblock the Notifications