ನಮ್ಮ ಶಾಸಕರ ಖಾತೆಗೆ ಬಿಜೆಪಿ ಹಣ ವರ್ಗಾಯಿಸಿದೆ: ಡಿ.ಕೆ.ಶಿವಕುಮಾರ್
ಬೆಂಗಳೂರು, ನವೆಂಬರ್ 06: ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನವನ್ನು ಬಿಜೆಪಿಯವರು ಇನ್ನೂ ಬಿಟ್ಟಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ಅಭೂತಪೂರ್ವ ಗೆಲುವಿನ ಕುರಿತು ಮಾತನಾಡಲು ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯವನ್ನು ಬಹಿರಂಗಪಡಿಸಿದರು.
ಸೂಟ್ಕೇಸ್ ಹಿಡಿದುಕೊಂಡೇ ಕಾಂಗ್ರೆಸ್-ಜೆಡಿಎಸ್ನ ಕೆಲವು ಶಾಸಕರನ್ನು ಖರೀದಿಸುವ ಯತ್ನವನ್ನು ಬಿಜೆಪಿಯವರು ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆರೋಪ ಮಾಡಿದರು.
ನಿನ್ನೆ (ನವೆಂಬರ್ 05) ಬೆಳಿಗ್ಗೆ ಕೂಡ ನಮ್ಮ ಕಡೆಯ ಕೆಲವು ಶಾಸಕರನ್ನು ಬಿಜೆಪಿಯ ಮುಖಂಡರು ಭೇಟಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದ ಡಿ.ಕೆ.ಶಿವಕುಮಾರ್ ಈಗಾಗಲೇ ಕೆಲವರ ಬ್ಯಾಂಕ್ ಖಾತೆಗೆ ಹಣ ಕೂಡ ವರ್ಗಾಯಿಸಲಾಗಿದೆ ಎಂದು ಶಾಕ್ ನೀಡಿದರು.

ಕೆಲವು ಶಾಸಕರು ಅವಕಾಶ ತಿರಸ್ಕರಿಸಿದ್ದಾರೆ
ಕೆಲವು ಶಾಸಕರು ಬಿಜೆಪಿಯ ಅವಕಾಶವನ್ನು ಸ್ಪಷ್ಟವಾಗಿ ತಿರಸ್ಕರಿಸಿದರೆ ಇನ್ನು ಕೆಲವರು ಸಮಯ ಪಡೆದಿದ್ದಾರೆ ಎಂಬ ಅಂಶವನ್ನೂ ಡಿ.ಕೆ.ಶಿವಕುಮಾರ್ ಅವರು ಇಂದು ಹೇಳಿದರು.

ಬಿಜೆಪಿಗಿಂತಲೂ ನಮಗೆ ಶಕ್ತಿ ಇದೆ
ಬಿಜೆಪಿಯವರಿಗೆ ಮಾತ್ರವೇ ಆಪರೇಷನ್ ಮಾಡುವ ಶಕ್ತಿ ಇದೆ ಎಂದು ಅವರು ಅಂದುಕೊಳ್ಳಬಾರದು, ಬೇರೆಯವರಿಗೂ ಆ ಶಕ್ತಿ ಇದೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ ಡಿ.ಕೆ.ಶಿವಕುಮಾರ್, ನಮ್ಮ ಪಕ್ಷದ ನಾಯಕರು ಈ ಬಗ್ಗೆ ನಮಗೆ ಯಾವುದೇ ಆದೇಶ ನೀಡಿಲ್ಲ ಎಂದು ಹೇಳಿದರು.

ಯಡಿಯೂರಪ್ಪ-ಜಗದೀಶ್ ಶೆಟ್ಟರ್ ಹೇಳಿದ್ದಾರೆ
ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರ ಮಾತುಗಳನ್ನು ಉದಾಹರಣೆಯಾಗಿ ನೀಡಿದ ಅವರು, ಬಿಜೆಪಿ ಮಾಜಿ ಮುಖ್ಯಮಂತ್ರಿಗಳೇ ನವೆಂಬರ್ 6 ರಿಂದ ಸರ್ಕಾರದ ಪಥನ ಪ್ರಾರಂಭವಾಗುತ್ತದೆ ಎಂದಿದ್ದಾರೆ. ಬಿಜೆಪಿಯವರು ಆಪರೇಷನ್ ಕಮಲಕ್ಕೆ ಕೈಹಾಕಿರುವುದು ಸ್ಪಷ್ಟ ಎಂದಿದ್ದಾರೆ.

ಬಳ್ಳಾರಿಯಲ್ಲಿ ದಿಗ್ವಿಜಯ
ಬಳ್ಳಾರಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತುರುಸಿನ ಪೈಪೋಟಿ ಇತ್ತು. ಬಳ್ಳಾರಿಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಶ್ರೀರಾಮುಲು ಎದುರು ಬದುರಾಗಿದ್ದರು. ಇಬ್ಬರ ನಡುವಿನ ಕಾಳಗ ಇದೆಂದೇ ಹೇಳಲಾಗುತ್ತು. ಆದರೆ ಅಂತಿಮವಾಗಿ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಅವರು ಲಕ್ಷಕ್ಕೂ ಹೆಚ್ಚು ಮತಗಳ ಅಂತಿರದಿಂದ ಗೆದ್ದರು.












Click it and Unblock the Notifications