Tejasvi Surya: ನಮ್ಮ ಆರತಕ್ಷತೆಗೆ ಡ್ರೈಫ್ರೂಟ್ಸ್ ತರಬೇಡಿ: ಕಾರಣ ಕೊಟ್ಟ ತೇಜಸ್ವಿ ಸೂರ್ಯ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ಬಿಜೆಪಿಯ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸಿದ್ಧ ಕರ್ನಾಟಕ ಸಂಗೀತ ಗಾಯಕಿ ಮತ್ತು ಚೆನ್ನೈನ ಭರತನಾಟ್ಯಂ ಕಲಾವಿದೆ ಹಾಗೂ ಖ್ಯಾತ ಗಾಯಕಿಯಾದ ಶಿವಶ್ರೀ ಸ್ಕಂದಪ್ರಸಾದ್ ಅವರೊಂದಿಗೆ ತೇಜಸ್ವಿ ಸೂರ್ಯ ಅವರು ವಿವಾಹವು ಗುರುವಾರ ಖಾಸಗಿ ರೆಸಾರ್ಟ್ನಲ್ಲಿ ಅದ್ಧೂರಿಯಾಗಿ ನೆರವೇರಿತು. ಭಾನುವಾರ ಅರಮನೆ ಮೈದಾನದಲ್ಲಿ ಇವರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ ಆರತಕ್ಷತೆಗೆ ಆಗಮಿಸುವವರಿಗೆ ಸಂಸದ ತೇಜಸ್ವಿ ಸೂರ್ಯ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ (ಟ್ವಿಟರ್) ಎಂಪಿ ತೇಜಸ್ವಿ ಸೂರ್ಯ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಆತ್ಮೀಯ ಹಿತೈಷಿಗಳೇ, ನಮ್ಮ ವಿವಾಹ ಆರತಕ್ಷತೆ ಕಾರ್ಯಕ್ರಮವಿದ್ದು, ನಿಮ್ಮೆಲ್ಲರ ಆಗಮನ ನಮಗೆ ಹೆಚ್ಚಿನ ಸಂತಸ ತರಲಿದೆ. ಇದೆಲ್ಲ ಸಂಭ್ರಮ, ಸಂತಸದ ನಡುವೆ ತಮ್ಮೆಲ್ಲರಲ್ಲಿ ನನ್ನದೊಂದು ವಿನಂತಿ ಎಂದಿದ್ದಾರೆ. ನಮ್ಮ ಆರತಕ್ಷತೆ ಕಾರ್ಯಕ್ರಮಕ್ಕೆ ಹೂವಿನ ಬೊಕ್ಕೆಗಳು, ಡ್ರೈಫ್ರೂಟ್ಸ್ಗಳನ್ನು ದಯವಿಟ್ಟು ತರಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ಕೊಟ್ಟಿದ್ದಾರೆ.

ಭಾರತದಲ್ಲಿ ಪ್ರತಿವರ್ಷ ನಡೆಯುವ 1 ಕೋಟಿಗೂ ಅಧಿಕ ಮದುವೆ ಸಮಾರಂಭಗಳಲ್ಲಿ ಶೇ 85ರಷ್ಟು ಹೂವುಗಳು ಹಾಗೂ ಬೊಕ್ಕೆಗಳು ಕೇವಲ 24 ಘಂಟೆಗಳಲ್ಲಿ ನಿಷ್ಕ್ರಿಯವಾಗುತ್ತವೆ. ಇನ್ನು ವರ್ಷಕ್ಕೆ ಏನಿಲ್ಲವೆಂದರೂ 300,000 ಕೆ.ಜಿ.ಯಷ್ಟು ಡ್ರೈಫ್ರೂಟ್ಸ್ಗಳು ಮದುವೆ ನಡೆಯುವ ಸ್ಥಳದಲ್ಲಿಯೇ ಉಳಿದು ಹೋಗುತ್ತವೆ. ಇದರಿಂದ ವಾರ್ಷಿಕ 315 ಕೋಟಿ ಮೊತ್ತದ ಹಣ ಅನವಶ್ಯಕವಾಗಿ ವೆಚ್ಚವಾಗುತ್ತದೆ ಎಂದು ಮಾದರಿ ಮಾತುಗಳನ್ನಾಡಿದ್ದಾರೆ. ಹಾಗಾಗಿ ನಾಳೆಯ ಕಾರ್ಯಕ್ರಮಕ್ಕೆ ಹೂವಿನ ಬೊಕ್ಕೆಗಳು, ಡ್ರೈ ಫ್ರೂಟ್ಸ್ಗಳನ್ನು ದಯವಿಟ್ಟು ತರಬೇಡಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ ಎಂದಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯಲಿರುವ ನಮ್ಮ ಆರತಕ್ಷತೆ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಹಾಗೂ ದಿವ್ಯಾಂಗ ವ್ಯಕ್ತಿಗಳಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 11 ಘಂಟೆಗೆ ವೃಕ್ಷ, ಗಾಯತ್ರಿ ವಿಹಾರ, ಅರಮನೆ ಮೈದಾನ ಬೆಂಗಳೂರು, ಇಲ್ಲಿ ನಿಮ್ಮ ಆಗಮನಕ್ಕಾಗಿ ಕಾಯುತ್ತಿರುತ್ತೇನೆ. ನಿಮ್ಮ ಪ್ರೀತಿಪೂರ್ವಕ ಆಶೀರ್ವಾದವೇ ನಮಗೆ ಶ್ರೀರಕ್ಷೆ ಎಂದು ತೇಜಸ್ವಿ ಸೂರ್ಯ ಆಹ್ವಾನಿಸಿದ್ದಾರೆ.

ತೇಜಸ್ವಿ ಮಡದಿ ಹಿನ್ನೆಲೆ: ಶಿವಶ್ರೀ ಸ್ಕಂದ ಪ್ರಸಾದ್ ಅವರು ಚೆನ್ನೈ ಮೂಲದ ಗಾಯಕಿ, ಭರತನಾಟ್ಯ ಕಲಾವಿದೆ. ಬಿ.ಟೆಕ್ ಪದವೀಧರೆಯಾಗಿರುವ ಅವರು ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ತಮ್ಮ ಗಾಯನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಶಿವಶ್ರೀ ಅವರು ಚೆನ್ನೈ ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಹಾಗೂ ಚೆನ್ನೈನ ಸಂಸ್ಕೃತ ಕಾಲೇಜಿನಿಂದ ಸಂಸ್ಕೃತದಲ್ಲಿ ಎಂಎ ಪದವಿ ಪಡೆದಿದ್ದಾರೆ.
ತಮಿಳಿನಿ ಪೊನ್ನಿಸ್ ಸೆಲ್ವನ್-ಭಾಗ 2ರ ಕನ್ನಡ ಆವೃತ್ತಿಯ ಹಾಡಿಗೆ ಶಿವಶ್ರೀ ಧ್ವನಿ ನೀಡಿದ್ದಾರೆ. ಮದುವೆಗೂ ಮುನ್ನ ತೇಜಸ್ವಿ ಸೂರ್ಯ ಅವರು ಶಿವಶ್ರೀ ಅವರೊಂದಿಗೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದಿದ್ದರು. 2021ರಲ್ಲಿ ಚೆನ್ನೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ತೇಜಸ್ವಿ ಸೂರ್ಯ ಅವರು ಶಿವಶ್ರೀ ಅವರನ್ನು ಸನ್ಮಾನಿಸಿದ್ದರು. ಈ ಫೋಟೋಗಳನ್ನು ಶಿವಶ್ರೀ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬಳಿಕ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಇತ್ತೀಚೆಗೆ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿದೆ.












Click it and Unblock the Notifications