ಇಂದು ಮೆಟ್ರೋದಲ್ಲಿ ನಿಮ್ಮೊಂದಿಗೆ ಪ್ರಯಾಣಿಸಲಿದ್ದಾರೆ ಈ ನಾಯಕರು; ಯಾಕೆ?
ʼರಾಜಕೀಯ ನಾಯಕರು ಏನ್ ಬಿಡ್ರೀ.., ಎ.ಸಿ.ಕಾರಲ್ಲಿ ಕೂತ್ಕೊಂಡು ಓಡಾಡುತ್ತಾರೆ. ನಮ್ ಕಷ್ಟ ಏನ್ ಅವರಿಗೆ ಅರ್ಥ ಆಗುತ್ತಾ?ʼ ಅನ್ನೋ ಮಾತನ್ನು ಸಾರ್ವಜನಿಕರು ಆಗಾಗ ಹೇಳೋದನ್ನು ಕೇಳಿರ್ತೀವಿ. ಬೆಂಗಳೂರಿನಲ್ಲಿ ಮೆಟ್ರೋದಲ್ಲಿ ಪ್ರಯಾಣ ಮಾಡುವವರಂತೂ ʼನಮ್ಮ ಸಮಸ್ಯೆಗಳನ್ನ ಯಾರಿಗಪ್ಪಾ ಹೇಳಿಕೊಳ್ಳೋದುʼ ಎಂದು ಅಸಹಾಯಕರಾಗಿ ಇರುವುದನ್ನು ನೋಡಿರ್ತೀವಿ. ಆದ್ರೆ ಇವತ್ತು ನಿಮ್ಮ ಸಮಸ್ಯೆಗಳನ್ನು ಕೇಳೋಕೆ ಅಂತಾನೆ ಬಿಜೆಪಿ ಸಂಸದರು ನಿಮ್ಮೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ಬರ್ತಿದ್ದಾರೆ.
ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮೆಟ್ರೋದಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣಿಸಲಿದ್ದಾರೆ. ಈ ವಿಚಾರವನ್ನು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು, ಇಂದು ಸಂಜೆ 5.30ಕ್ಕೆ ಮೆಟ್ರೋ ಸೇವೆಗಳನ್ನು ಸುಧಾರಿಸಲು ಹಾಗೂ ಸಲಹೆಗಳನ್ನು ಕೋರಲು ಕೆ.ಆರ್.ಪುರದಿಂದ ಮೆಜೆಸ್ಟಿಕ್ವರೆಗೆ ನಮ್ಮ ಮೆಟ್ರೋ ಪರ್ಪಲ್ ಲೈನ್ನಲ್ಲಿ ಪ್ರಯಾಣಿಸುವುದಾಗಿ ತಿಳಿಸಿದ್ದಾರೆ.

ಮೆಟ್ರೋ ಪ್ರಯಾಣಿಕರಿಗೆ ರೈಲುಗಳ ಕೊರತೆಯು ಹೆಚ್ಚು ಸಮಸ್ಯೆಯಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ನಿಮ್ಮ ಪ್ರಯಾಣವನ್ನು ಸುಲಭಗೊಳಿಸಲು ಹಾಗೂ ಈ ಸಮಸ್ಯೆಗೆ ಏನು ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ತಿಳಿಯಲು ಮೆಟ್ರೋದಲ್ಲಿ ಪ್ರಯಾಣಿಸಲಿದ್ದೇವೆ ಎಂದಿದ್ದಾರೆ. ಹೆಚ್ಚು ದಟ್ಟಣೆ ಸಮಯದಲ್ಲಿ (ಪೀಕ್) ವಿಧಾನಸೌಧ ಮತ್ತು ಸೆಂಟ್ರಲ್ ಕಾಲೇಜಿನಲ್ಲಿ ಜನರು ಸಂಜೆ ವೇಳೆ ಮೆಟ್ರೋ ಒಳಗೆ ಪ್ರವೇಶಿಸಲು ಸಹ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ನಿರ್ವಹಣೆ ಸಮಸ್ಯೆಯಿಂದಾಗಿ ಮೆಟ್ರೋ ಕಾರ್ಯಾಚರಣೆಗೆ ಅಡ್ಡಿಯಾದ ಕೆಲವು ನಿದರ್ಶನಗಳೂ ಇವೆ.
ಇದಕ್ಕೆ ಸಂಬಂಧಿಸಿದ ಸಾರ್ವಜನಿಕರ ಸಲಹೆಗಳು ಮತ್ತು ಸಮಸ್ಯೆಗಳ ಕುರಿತು ನಿಮ್ಮ ಸಮಗ್ರ ಪ್ರತಿಕ್ರಿಯೆಯನ್ನು ನಾನು ಬಯಸುತ್ತೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಇಂದು ಸಂಜೆ ಈ ಮಾರ್ಗದಲ್ಲಿ ಪ್ರಯಾಣಿಸುವ ಮೆಟ್ರೋ ಬಳಕೆದಾರರು ತಮ್ಮ ಸಲಹೆಗಳನ್ನು ಸಂಸದರೊಂದಿಗೆ ಹಂಚಿಕೊಳ್ಳಬಹುದಾದ ಅವಕಾಶ ಸಿಗಲಿದೆ.












Click it and Unblock the Notifications