ಜೆಡಿಎಸ್ಗೆ ಆನೆ ಜತೆ ಲವ್, ಕಾಂಗ್ರೆಸ್ ಜತೆ ಮದುವೆ: ಅಶೋಕ್ ಲೇವಡಿ
Recommended Video

ಬೆಂಗಳೂರು, ಮೇ 23: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯನ್ನು ಖಂಡಿಸಿ ಕರಾಳ ದಿನ ಆಚರಿಸುತ್ತಿರುವ ಬಿಜೆಪಿ, ಬುಧವಾರ ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದೆ.
ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸಮ್ಮಿಶ್ರ ಸರ್ಕಾರದ ರಚನೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಶಾಸಕ ಆರ್. ಅಶೋಕ್, ದಿನಕ್ಕೊಂದು ಪಕ್ಷದ ಜತೆ ಸಂಬಂಧ ಬೆಳೆಸಿಕೊಳ್ಳುತ್ತಿದೆ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದರು.

ಜೆಡಿಎಸ್ ಪಕ್ಷವು ಆನೆ ಜತೆ (ಬಹುಜನ ಸಮಾಜ ಪಕ್ಷ) ಪ್ರೀತಿ ಮಾಡಿ, ಓವೈಸಿ ಜತೆ ಡೇಟಿಂಗ್ ನಡೆಸಿ ಈಗ ಕಾಂಗ್ರೆಸ್ ಜತೆ ಮದುವೆ ಮಾಡಿಕೊಂಡಿದೆ ಎಂದು ಅಶೋಕ್ ಲೇವಡಿ ಮಾಡಿದರು.
ಜೆಡಿಎಸ್ ಎಲ್ಲಿಗೆ ಹೋಗುತ್ತದೆ, ಯಾರ ಜತೆ ತಿರುಗಾಡುತ್ತದೆ ಮತ್ತು ಏನು ಮಾಡುತ್ತದೆ ಎಂಬುದು ಏನೂ ಗೊತ್ತೇ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಜನರು ಈ ಗದ್ದಲ, ಗೊಂದಲ, ಅನೈತಿಕತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಸರ್ಕಾರ ಮೂರು ತಿಂಗಳು ಕೂಡ ಬದುಕುವುದಿಲ್ಲ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯ ಅವರನ್ನು ಅವರ ತಾಯಿ ನಾಡು, ಅವರು ಹುಟ್ಟಿಬೆಳೆದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರು ಹೀನಾಯವಾಗಿ ಸೋಲಿಸಿದ್ದಾರೆ. ಅವರು ಮಾನ ಮರ್ಯಾದೆ ಇದ್ದರೆ ರಾಜಕೀಯದಿಂದ ನಿವೃತ್ತ ಹೊಂದಬೇಕು ಎಂದು ಅಶೋಕ್ ಆಗ್ರಹಿಸಿದರು.












Click it and Unblock the Notifications