ಉಳಿದ ಶಾಸಕರನ್ನು ಬೆದರಿಸಲು ಅನರ್ಹತೆ ಅಸ್ತ್ರ ಪ್ರಯೋಗ: ಬಾಲಚಂದ್ರ ಜಾರಕಿಹೊಳಿ ಅರೋಪ
ಬೆಂಗಳೂರು, ಜುಲೈ 26: 'ಸ್ಪೀಕರ್ ಅವರು ಮೂವರು ಶಾಸಕರನ್ನು ಅನರ್ಹಗೊಳಿಸಿರುವುದು ರಾಜಕೀಯ ಪ್ರೇರಿತ' ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆರೋಪಿಸಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪೀಕರ್ ಅವರ ಆದೇಶವು ರಾಜಕೀಯ ಪ್ರೇರಿತ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದರು.
'ಅನರ್ಹತೆಯ ನಿರ್ಧಾರ ತೆಗೆದುಕೊಳ್ಳಬೇಕಿದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್ನವರು ದೂರು ನೀಡಿರುವ ಎಲ್ಲ ಶಾಸಕರ ವಿರುದ್ಧವೂ ಮಾಡಬೇಕಿತ್ತು. ಕೇವಲ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಉಳಿದ 13 ಶಾಸಕರನ್ನು ಬೆದರಿಸಲು ಈ ರೀತಿ ಅನರ್ಹತೆಯ ಅಸ್ತ್ರ ಬಳಸಿದ್ದಾರೆ ಎನ್ನುವುದು ಸ್ಪಷ್ಟ. ರಾಜೀನಾಮೆ ನೀಡಿರುವ ಉಳಿದ ಶಾಸಕರು ಅನರ್ಹತೆಯ ಭಯದಿಂದ ವಾಪಸ್ ಬರಲಿ ಎಂಬ ಕಾರಣಕ್ಕೆ ಈ ಆದೇಶ ಹೊರಡಿಸಿದ್ದಾರೆ' ಎಂದು ಆರೋಪಿಸಿದರು.

'ಶಾಸಕರನ್ನು ಅನರ್ಹಗೊಳಿಸುವ ಮೂಲಕ ಹೆದರಿಕೆ ಹುಟ್ಟಿಸಿ ಉಳಿದವರನ್ನು ಸೆಳೆದುಕೊಳ್ಳುವ ತಂತ್ರ ಇದು. ಈ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ ತೀರ್ಮಾನ ತೆಗೆದುಕೊಳ್ಳಬೇಕಿದೆ. '2010ರಲ್ಲಿ ನನ್ನನ್ನು ಸೇರಿ 16 ಮಂದಿ ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಆದರೆ ಅದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು' ಎಂದು ಹೇಳಿದರು ಎಂದರು.
'ಸ್ಪೀಕರ್ ಅವರು ತಮ್ಮನ್ನು ನೋಡಲು ಬಂದ ಶಾಸಕರು ಸಾವಿರ ಪೊಲೀಸರೊಂದಿಗೆ ಬಂದಿದ್ದರು ಎಂದು ಆರೋಪಿಸಿದ್ದಾರೆ. ಈ 13 ಶಾಸಕರು ಅಷ್ಟು ಪೊಲೀಸ್ ಭದ್ರತೆಯೊಂದಿಗೆ ಬಾರದೆ ಹೋಗಿದ್ದರೆ ಶಾಸಕ ಸುಧಾಕರ್ ಅವರಿಗೆ ಆದ ಸ್ಥಿತಿ ಇವರಿಗೂ ಆಗುತ್ತಿತ್ತು. ರಾಜೀನಾಮೆ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಹೇಳಿತ್ತು. ಆದರೆ, ಇವರು ಅನರ್ಹತೆಗೊಳಿಸಿ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ' ಎಂದು ಹೇಳಿದರು.
ಬೆಳಗಾವಿಯಲ್ಲಿ ಎರಡನೆಯ ನಿದರ್ಶನ:
ಬೆಳಗಾವಿ ಇಬ್ಬರು ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡಿರುವುದು ಇದು ಎರಡನೆಯ ನಿದರ್ಶನವಾಗಿದೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿ ಆದೇಶಿಸಿದ್ದಾರೆ.
ಇದಕ್ಕೂ ಮೊದಲು 9 ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಇಬ್ಬರು ಶಾಸಕರು ಅನರ್ಹಗೊಂಡಿದ್ದರು. 2010ರಲ್ಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದುಕೊಂಡಿದ್ದ ಬಿಜೆಪಿಯ 11 ಶಾಸಕರನ್ನು ಸ್ಪೀಕರ್ ಕೆ.ಜಿ. ಬೋಪಯ್ಯ ಅನರ್ಹಗೊಳಿಸಿದ್ದರು. ಆಗ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಕಾಗವಾಡ ಶಾಸಕ ರಾಜು ಕಾಗೆ ಕೂಡ ಅನರ್ಹಗೊಂಡಿದ್ದರು. ಬಳಿಕ ಈ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು.












Click it and Unblock the Notifications