ಬಾಬ್ರಿ ಮಸೀದಿ ಧ್ವಂಸ ತೀರ್ಪು: ಕಾಂಗ್ರೆಸ್ ದೇಶದ ಜನತೆಯ ಕ್ಷಮೆ ಕೇಳಲಿ!
ಬೆಂಗಳೂರು, ಸೆ. 30: ಬಾಬ್ರಿ ಮಸೀದಿ ವಿಚಾರದಲ್ಲಿ ಬಿಜೆಪಿ ನಾಯಕರಿಗೆ ರಿಲೀಫ್ ಸಿಗುತ್ತಿದ್ದಂತೆಯೆ ಬಿಜೆಪಿ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಾಯಕರು ಹಾಗೂ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಪರಿಷತ್ ಸದಸ್ಯ ರವಿಕುಮಾರ್ ನೇತೃತ್ವದಲ್ಲಿ ಸಂಭ್ರಮಾಚರಣೆಯನ್ನು ಮಾಡಲಾಗಿದೆ. ಬಳಿಕ ಮಾತನಾಡಿದ ಅವರು, ಸಿಬಿಐ ಬಿಜೆಪಿ ನಾಯಕರು ಬಾಬ್ರಿ ಮಸೀದಿ ಧ್ವಂಸ ಮಾಡಿದ್ದರು ಎಂದು ಆರೋಪಿಸಿತ್ತು. ಬಿಜೆಪಿ, ವಿಶ್ವ ಹಿಂದೂ ಪರಿಷತ್ಗೆ ಇಂದು ಐತಿಹಾಸಿಕ ದಿನ. ಬಾಬರಿ ಮಸೀದಿ ಕುಸಿದು ಬೀಳಲು ಬಿಜೆಪಿ ನಾಯಕರ ಪಾತ್ರ ಇಲ್ಲ ಎಂದು ತೀರ್ಪು ನೀಡಿದೆ.
ಬಾಬರಿ ಮಸೀದಿ ತೀರ್ಪು; ಕರ್ನಾಟಕದ ನಾಯಕರ ಪ್ರತಿಕ್ರಿಯೆ
ಬಾಬ್ರಿ ಮಸೀದಿ ಕೆಡವಲು ಹೋಗಿದ್ದ ಕರ ಸೇವಕರನ್ನು ತಡೆಯುವ ಪ್ರಯತ್ನ ಮಾಡಿದ್ದರು. ಎಲ್.ಕೆ. ಅಡ್ವಾಣಿ, ಉಮಾಭಾರತಿ, ಕಲ್ಯಾಣ ಸಿಂಗ್ ಕರ ಸೇವಕರನ್ನು ತಡೆದಿದ್ದರು ಎಂದೂ ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ. ಅದರಿಂದ ದೋಷ ಮುಕ್ತ ನಾಯಕತ್ವ ರಾಷ್ಟ್ರದಲ್ಲಿ ಇತ್ತು ಎಂಬ ಸಂದೇಶವನ್ನು ನೀಡಿದೆ. ಈ ತೀರ್ಪು ನಮ್ಮ ಬಲವನ್ನು ಇನ್ನಷ್ಟು ಹೆಚ್ಚಿಸಿದೆ. ಈ ತೀರ್ಪನ್ನು ಭಾರತೀಯ ಜನತಾ ಪಾರ್ಟಿ ಸ್ವಾಗತಿಸಿದೆ ಎಂದು ರವಿಕುಮಾರ್ ಹೇಳಿದ್ದಾರೆ.
ಸಚಿವ ಸಿ ಟಿ ರವಿ ಸ್ವಾಗತ: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಜನ ಆಪಾದಿತರನ್ನು ಕೋರ್ಟ್ ದೋಷಮುಕ್ತಗೊಳಿಸಿದೆ. ಪ್ರಕರಣ ಪೂರ್ವಯೋಜಿತವಲ್ಲ ಅನ್ನೋದನ್ನು ಕೋರ್ಟ್ ಹೇಳಿದೆ. ಈ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ. ಇದನ್ನು ನೆಪವಾಗಿಟ್ಕೊಂಡು 1992 ರಲ್ಲಿ ಬಿಜೆಪಿಯ ನಾಲ್ಕು ಸರ್ಕಾರಗಳನ್ನೂ ವಜಾ ಮಾಡುವ ಕೆಲಸ ನಡೆಯಿತು.
Recommended Video
ಆಗ ಅಂಥ ಸಂವಿಧಾನ ಬಾಹಿರ ಕೆಲಸ ಆಗಿತ್ತು. ಸತ್ಯವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಆವತ್ತು ನಾಲ್ಕು ಬಿಜೆಪಿ ಸರ್ಕಾರಗಳನ್ನು ವಜಾ ಮಾಡಿದ ಕಾಂಗ್ರೆಸ್ ದೇಶದ ಜನತೆಯ ಕ್ಷಮೆ ಕೇಳಲಿ. ಇತಿಹಾಸ ಬಲ್ಲವರಿಗೆ ವಾಸ್ತವಿಕ ಸತ್ಯ ಗೊತ್ತಿದೆ. ಬಿಜೆಪಿಯ ಅಜೆಂಡಾದಲ್ಲಿ ಮಸೀದಿ ಒಡೆಯುವುದು ಇರಲಿಲ್ಲ ಎಂದು ಸಚಿವ ಸಿ.ಟಿ. ರವಿ ಹೇಳಿಕೆ ಕೊಟ್ಟಿದ್ದಾರೆ.