ಮೈತ್ರಿ ಸರ್ಕಾರದ ಕಳ್ಳೆತ್ತುಗಳನ್ನು ಲಾಕಪ್ಗೆ ಹಾಕಿ ಬೆಂಡೆತ್ತಬೇಕು: ಈಶ್ವರಪ್ಪ
ಬೆಂಗಳೂರು, ಜೂನ್ 14: ಐಎಂಎ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಸಚಿವ ಜಮೀರ್ ಅಹ್ಮದ್ ಮತ್ತು ಶಾಸಕ ರೋಷನ್ ಬೇಗ್ ಇಬ್ಬರನ್ನೂ ಬಂಧಿಸಿ ಲಾಕಪ್ಗೆ ಹಾಕಬೇಕು ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇರುವುದು ಸಮ್ಮಿಶ್ರ ಸರ್ಕಾರವಲ್ಲ, ಮಾರಾಟಗಾರರ ಸರ್ಕಾರ. ಕಮಿಷನ್ ಸಿಕ್ಕರೆ ವಿಧಾನಸೌಧವನ್ನೂ ಮಾರಾಟ ಮಾಡುತ್ತಾರೆ ಎಂದು ಟೀಕಿಸಿದರು.
ಐಎಂಎ ವಂಚನೆ ಪ್ರಕರಣದಲ್ಲಿ ಜಮೀರ್ ಅಹ್ಮದ್ ಮತ್ತು ರೋಷನ್ ಬೇಗ್ ಇಬ್ಬರನ್ನೂ ಬಂಧಿಸಬೇಕು. ಅವರಿಬ್ಬರೂ ಮೈತ್ರಿ ಪಕ್ಷಗಳ ಕಳ್ಳೆತ್ತುಗಳು. ಇಬ್ಬರನ್ನೂ ಲಾಕಪ್ಗೆ ಹಾಕಿ ಕ್ರಿಮಿನಲ್ಗಳನ್ನು ಬೆಂಡೆತ್ತುವಂತೆ ಬೆಂಡೆತ್ತಿದರೆ ಸತ್ಯ ಹೊರಬರುತ್ತದೆ ಎಂದರು.
ಐಎಂಎ ಬಹುಕೋಟಿ ಪ್ರಕರಣದಲ್ಲಿ ತಮ್ಮನ್ನು ಸುಮ್ಮನೆ ಸಿಲುಕಿಸಲಾಗಿದೆ ಎಂದು ಮಾಧ್ಯಮದ ಮುಂದೆ ಹೇಳುವ ಬದಲು ಎಸ್ಐಟಿ ಮುಂದೆ ಹೇಳಲಿ ಎಂದು ಸಿದ್ದರಾಮಯ್ಯ ಅವರು ರೋಷನ್ ಬೇಗ್ಗೆ ಆಗ್ರಹಿಸಿರುವುದನ್ನು ಉಲ್ಲೇಖಿಸಿದ ಈಶ್ವರಪ್ಪ, ರೋಷನ್ ಬೇಗ್ ತಮ್ಮ ವಿರುದ್ಧ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರಿಗೆ ಈ ರೀತಿ ಹೇಳುತ್ತಾರೆ. ಇದೇ ಮಾತನ್ನು ಅವರು ಜಮೀರ್ ಅಹ್ಮದ್ ವಿಚಾರದಲ್ಲಿ ಹೇಳಲಿ ಎಂದು ಸವಾಲು ಹಾಕಿದರು.
ಐಎಂಎಗೆ ಆಸ್ತಿ ಮಾರಾಟ ಮಾಡಿ 9 ಕೋಟಿ ತಗೊಂಡಿರುವುದರ ಹೊರತು ಬೇರೇನೂ ಗೊತ್ತಿಲ್ಲ ಎಂದು ಜಮೀರ್ ಅಹ್ಮದ್ ಹೇಳುತ್ತಾರೆ. ಅವರು ಕ್ಯಾಬಿನೆಟ್ ಸಚಿವರು. ಕ್ಯಾಬಿನೆಟ್ನಲ್ಲಿ ಪ್ರಸ್ತಾಪ ಮಾಡಿ ಚರ್ಚಿಸಲಿ. ನಿಮಗೆ ಸಂಬಂಧ ಇಲ್ಲ ಎಂದಾದಮೇಲೆ ಸಿಬಿಐಗೆ ಪ್ರಕರಣ ಏಕೆ ಕೊಡಬಾರದು ಎಂದು ಪ್ರಶ್ನಿಸಿದರು.

ನಿಜವಾದ ಕಳ್ಳೆತ್ತುಗಳು
ಯಶ್ ಮತ್ತು ದರ್ಶನ್ ಕಳ್ಳೆತ್ತುಗಳು ಎಂದು ಮೈತ್ರಿ ಸರ್ಕಾರದವರು ಹೇಳಿದ್ದರು. ಆದರೆ, ನಿಜವಾದ ಕಳ್ಳೆತ್ತುಗಳು ಜಮೀರ್ ಅಹ್ಮದ್ ಮತ್ತು ರೋಷನ್ ಬೇಗ್. ಕಡುಬಡವರನ್ನು ಲೂಟಿ ಮಾಡಿದ ವ್ಯಕ್ತಿಗೆ ಇಬ್ಬರೂ ಸಹಕಾರ ನೀಡಿದ್ದಾರೆ. ಎಷ್ಟೆಷ್ಟು ಹಣ ಡ್ರಾ ಮಾಡಿದ್ದಾರೆಯೋ ಗೊತ್ತಿಲ್ಲ ಎಂದರು.

ಪಕ್ಷೇತರರು ಬಿಜೆಪಿಗೆ ಬರುತ್ತಾರೆ
ಪಕ್ಷೇತರ ಶಾಸಕರಿಗೆ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಎಂಬ ಭೇದವಿಲ್ಲ. ಅದೇ ಪಕ್ಷೇತರ ಶಾಸಕರು ಮುಂದೆ ಬಿಜೆಪಿ ಸೇರುತ್ತಾರೆ. ಒಂದು ವರ್ಷದೊಳಗೆ ದೋಸ್ತಿ ಸರ್ಕಾರ ಬೀಳುತ್ತದೆ. ಆಗ ಅವರು ಬಿಜೆಪಿ ಕಡೆ ಬರುತ್ತಾರೆ ಎಂದರು.

ಸರ್ಕಾರ ಉಳಿಯಬೇಕು, ಲೂಟಿ ಮಾಡಬೇಕು
ಸಮ್ಮಿಶ್ರ ಸರ್ಕಾರದಲ್ಲಿ ಪಕ್ಷೇತರರಿಗೆ ಅವಕಾಶ ಮಾಡಿಕೊಡುತ್ತಾರಂತೆ. ಸರ್ಕಾರ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಶಂಕರ್ ಸಿದ್ದರಾಮಯ್ಯ ಅವರೊಂದಿಗೆ ಇದ್ದಾರಂತೆ. ಅವರಿಗೆ ತಮ್ಮ ಸರ್ಕಾರ ಉಳಿಯಬೇಕು, ಲೂಟಿ ಮಾಡಬೇಕು ಎಂಬುದಷ್ಟೇ ಗುರಿ. ಇದಕ್ಕಾಗಿ ಪಕ್ಷೇತರರನ್ನು ಸೇರಿಸಿಕೊಂಡಿದ್ದಾರೆ. ಅವರಿಗೂ ಅಷ್ಟೇ, ಯಾವ ಪಕ್ಷ ಅಧಿಕಾರಕ್ಕೆ ಬಂದರೂ ತಾವು ಮಂತ್ರಿಯಾಗಬೇಕೆಂದು ಹೋಗುತ್ತಾರೆ ಎಂದು ಟೀಕಿಸಿದರು.

ರಾಜ್ಯವನ್ನೇ ಮಾರುತ್ತಾರೆ
ಜಿಂದಾಲ್ಗೆ ನೀಡಿರುವ ಭೂಮಿಯನ್ನು ವಾಪಸ್ ಪಡೆಯಬೇಕು. ನಾವು ಹೋರಾಟ ನಡೆಸದೆಯೇ ಇದ್ದರೆ ರಾಜ್ಯವನ್ನೇ ಮಾರಾಟ ಮಾಡುವುದು ಗ್ಯಾರಂಟಿ. ಜಿಂದಾಲ್ಗೆ ಕಬ್ಬಿಣದ ಅದಿರು ಇರುವ ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.












Click it and Unblock the Notifications