ಪತ್ರಿಕೆಗಳ ಜಾತಿ ಮೂಲ ಹುಡುಕಿ ಬಿಜೆಪಿ ಸರ್ಕಾರದ ಜಾಹೀರಾತು; ಪ್ರಿಯಾಂಕ್ ಖರ್ಗೆ ಹೀಗೆ ಹೇಳಿದ್ದು ಯಾಕೆ?
ಬ್ರಾಹ್ಮಣ ಸಮುದಾಯದ ವ್ಯಕ್ತಿಗಳ ಒಡೆತನದಲ್ಲಿ ಇರುವ ಪತ್ರಿಕೆಗಳಿಗೆ ಪ್ರತಿ ತಿಂಗಳು ಜಾಹೀರಾತು ನೀಡಬೇಕು ಎಂದು ರಾಜ್ಯ ವಾರ್ತಾ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಇದಕ್ಕೆ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ ಹೀಗಿದೆ.
ಬೆಂಗಳೂರು, ಜನವರಿ. 27: ರಾಜ್ಯದ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳ ಒಡೆತನದಲ್ಲಿ ಇರುವ ಪತ್ರಿಕೆಗಳಿಗೆ ಪ್ರತಿ ತಿಂಗಳು ಜಾಹೀರಾತು ನೀಡಬೇಕು ಎಂದು ರಾಜ್ಯ ವಾರ್ತಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದಕ್ಕೆ ಕಾಂಗ್ರೆಸ್ ನಾಯಕರು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ರಾಜ್ಯ ವಾರ್ತಾ ಇಲಾಖೆಯು ಜನವರಿ 24 ರ ಮಂಗಳವಾರ ಹೊರಡಿಸಿರುವ ಸುತ್ತೋಲೆಯಲ್ಲಿ, "ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಬ್ರಾಹ್ಮಣ ಸಮುದಾಯದ ಒಡೆತನದ ಪತ್ರಿಕೆಗಳಿಗೆ ಪ್ರತೀ ತಿಂಗಳು ಎರಡು ಪುಟಗಳ ಜಾಹಿರಾತು ಬಿಡುಗಡೆ ಮಾಡಲು ಸರ್ಕಾರ ಮಂಜೂರಾತಿ ಆದೇಶ ಹೊರಡಿಸಲಾಗಿದೆ" ಎಂದು ತಿಳಿಸಿದೆ.
ರಾಜ್ಯ ಸರ್ಕಾರ ಹಠಕ್ಕೆ ಅಂಗನವಾಡಿ ಕಾರ್ಯಕರ್ತರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ: ಸಿದ್ದರಾಮಯ್ಯ ಆಕ್ರೋಶ
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ 'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಗಪುರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ನಿಷ್ಠಾವಂತ ನೌಕರರಾಗಿದ್ದಾರೆ' ಎಂದಿದ್ದಾರೆ.
ಪತ್ರಿಕೆಗಳ ಜಾತಿ ಮೂಲ ಹುಡುಕಿ ಜಾಹಿರಾತು ನೀಡಲು ಹೊರಟಿದೆ ಬಿಜೆಪಿ ಸರ್ಕಾರ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 27, 2023
ಪ್ರತಿ ತಿಂಗಳು 2 ಪುಟಗಳ ಸರ್ಕಾರದ ಜಾಹಿರಾತು ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೆ ಮಾತ್ರವಂತೆ!
ಉಳಿದ ಜಾತಿಯವರದ್ದು ಪತ್ರಿಕೆಗಳಲ್ಲವೇ @BSBommai ಅವರೇ?
ನಾಗಪುರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ನಾಗಪುರದ ನಿಷ್ಠಾವಂತ ನೌಕರರಾಗಿದ್ದಾರೆ ಸಿಎಂ. pic.twitter.com/BDNC4kQtXT
"ಪತ್ರಿಕೆಗಳ ಜಾತಿ ಮೂಲ ಹುಡುಕಿ ಜಾಹೀರಾತು ನೀಡಲು ಹೊರಟಿದೆ ಬಿಜೆಪಿ ಸರ್ಕಾರ. ಪ್ರತಿ ತಿಂಗಳು 2 ಪುಟಗಳ ಸರ್ಕಾರದ ಜಾಹೀರಾತು ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೆ ಮಾತ್ರವಂತೆ! ಉಳಿದ ಜಾತಿಯವರದ್ದು ಪತ್ರಿಕೆಗಳಲ್ಲವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ..?" ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ 'ನಾಗಪುರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ನಾಗಪುರದ ನಿಷ್ಠಾವಂತ ನೌಕರರಾಗಿದ್ದಾರೆ ಸಿಎಂ' ಎಂದು ಟೀಕಿಸಿದ್ದಾರೆ.
ವಾರ್ತಾ ಇಲಾಖೆ ಹೊರಡಿಸಿರುವ ಆದೇಶದಲ್ಲಿ, " ಮಾಧ್ಯಮ ಪಟ್ಟಿಯಲ್ಲಿರುವ ಬ್ರಾಹ್ಮಣ ಸಮುದಾಯದ ಒಡೆತನದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಸರ್ಕಾರದ ಆದೇಶದಲ್ಲಿ ತಿಳಿಸಿರುವ ಪದ್ಧತಿಗೊಳಪಟ್ಟು ಜಾಹೀರಾತು ಬಿಟುಗಡೆ ಮಾಡಲು ತಮ್ಮ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಇಲಾಖೆಯ ಮಾಧ್ಯಮ ಪಟ್ಟಿಯುವ ಹಾಗೂ ನಾಲ್ಕು ಪುಟಗಳಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆಗಳ ಸಂಪಾದಕರುಗಳಿಂದ ಕೆಳಕಂಡ ಮಾಹಿತಿಯನ್ನು ಕಡ್ಡಾಯವಾಗಿ ಪಡೆದುಕೊಂಡು ಏಳು ದಿವಸಗಳ ಒಳಗಾಗಿ ಕೇಂದ್ರ ಕಚೇರಿಗೆ ಸಲ್ಲಿಸಬೇಕು" ಎಂದಿದೆ.
ಆರ್ಎನ್ಐ ಪ್ರಮಾಣಪತ್ರ, ಘೋಷಣಾ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ, ಇತ್ತೀಚಿನ ಒಂದು ತಿಂಗಳ ಪತ್ರಿಕಾ ಸಂಚಿಕೆಗಳು, ಕಳೆದ 5 ವರ್ಷಗಳಲ್ಲಿ RNI ಗೆ ಸಲ್ಲಿಸಿರುವ ವಾರ್ಷಿಕ ವರದಿ ಸೇರಿ ಹಲವು ದಾಖಲಾತಿಗಳನ್ನು ಸಲ್ಲಿಸಲು ತಿಳಿಸಲಾಗಿದೆ.
ಈ ಸುತ್ತೋಲೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಹಲವರು ಬಿಜೆಪಿ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ.
ಚಿಂತಕ, ಲೇಖಕ ಯೋಗೇಶ್ ಮಾಸ್ಟರ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ "ಬೊಮ್ಮಾಯಿ ಸರಕಾರದ ಬೊಮ್ಮನ್ ಸಹಕಾರ" ಎಂದು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
"ಬ್ರಾಹ್ಮಣ ಸಮುದಾಯದ ಒಡೆತನವಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಎರಡು ಪುಟಗಳ ಜಾಹಿರಾತು ನೀಡುವ ಬಗ್ಗೆ ಸರಕಾರವೇ ಸುತ್ತೋಲೆ ಹೊರಡಿಸಿದೆ.
ಸರ್ಕಾರವೇ ಜಾತೀಯತೆ ಅಥವಾ ವೈದಿಕ ವ್ಯಾಮೋಹಕ್ಕೆ ಒಳಗಾಗಿದೆ ಎನ್ನಬೇಡಿ. ಭಾರತದಲ್ಲಿ ಅತ್ಯಂತ ಅಲ್ಪಸಂಖ್ಯಾತರಾಗಿದ್ದು ಬಹುಸಂಖ್ಯಾತರ ಮೆದುಳಿಗೆ ಶಾಶ್ವತ ಪ್ರೇರಕ ಮತ್ತು ಪೋಷಕರಾಗಿರುವ ಬ್ರಾಹ್ಮಣರಿಗೆ ಸರ್ಕಾರ ಇಷ್ಟಾದರೂ ಕೃತಜ್ಞತೆ ತೋರದಿದ್ದರೆ ಹೇಗೆ..?
ಜಲಗಾರ ಶಿವ ಹೇಳಿದ್ದು ನೆನಪಿಗೆ ಬಂತು.
ಮೊದಲ ಠಕ್ಕನು ಮೊದಲ ಬೆಪ್ಪನಂ ಸಂಧಿಸಲು
ಸಂಭವಿಸಿತೆಂಬರೀ ಮತ ಎಂಬ ಮತಿವಿಕಾರಂ.
ದೊರೆ ಪುರೋಹಿತರ್ ಅವಳಿಮೊಲೆಯೂಡಿ ಸಲುಹಿದರದಂ.
ಮತದ ಮದಿರೆಯನೀಂಟಿ ಮಂಕುಬಡಿದಿದೆ ಜನಕೆ.
ಕೊನೆ ದೊರೆಯ ಕೊರಳಿಗಾ ಕೊನೆ ಪುರೋಹಿತನ ಕರುಳ್
ಉರುಳಾಗುವಾ ವರೆಗೆ ಸುಖವಿಲ್ಲ ಈ ಧರೆಗೆ!
ಮಾದ್ಯಮ ಕ್ಷೇತ್ರದಲ್ಲಿನ ಠಕ್ಕ ಮತ್ತು ಬೆಪ್ಪರ ಒಡಂಬಡಿಕೆಯ ಫಲಶೃತಿಗೆ ಮಂಗಳವಾಗಲಿ ಎಂದು ಟೀಕಿಸಿದ್ದಾರೆ.