ಲಿಂಗಾಯತ ಸಮುದಾಯ ಕಡಗಣಿಸಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್: ಚುನಾವಣೆಗಾಗಿ ಮಾತ್ರವೇ ಓಲೈಕೆ
ಲಿಂಗಾಯತ ಸಮುದಾಯ ಕಡೆಗಣಿಸಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಮಾಡುತ್ತಿರುವುದು ಏನು? ಈ ಕುರಿತು ವಿವರಿಸಿದ ಆಮ್ ಆದ್ಮಿ ಪಕ್ಷದ ನಾಯಕರು.
ಬೆಂಗಳೂರು, ಮಾರ್ಚ್ 17: ಕರ್ನಾಟಕದ ರಾಜ್ಯದ ಬಹುದೊಡ್ಡ ಸಮುದಾಯಗಳಲ್ಲಿ ಒಂದಾಗಿರುವ 'ಲಿಂಗಾಯತ' ಸಮುದಾಯವನ್ನು ಮೂರು ಪಕ್ಷಗಳು ಕಡೆಗಣಿಸಿವೆ. ಕೇವಲ ಚುನಾವಣೆ ಬಂದಾಗ ಮಾತ್ರವೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಓಲೈಕೆಯ ನಾಟಕವಾಡತ್ತವೇ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷರಾದ ರವಿಚಂದ್ರ ನೆರಬೆಂಚಿ ಖಂಡಿಸಿದರು.
ಬೆಂಗಳೂರಲ್ಲಿ ಶುಕ್ರವಾರ ಆಮ್ ಆದ್ಮಿ ಪಾರ್ಟಿ (AAP) ರಾಜ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಶಿಕ್ಷಣ ಕ್ಷೇತ್ರಕ್ಕೆ ಲಿಂಗಾಯತ ಮಠಗಳು ಹಾಗೂ ಸಂಸ್ಥೆಗಳು ಅಪಾರ ಕೊಡುಗೆ ನೀಡಿವೆ. ಇವುಗಳು ಇಲ್ಲದಿದ್ದರೆ ರಾಜ್ಯವು ಶಿಕ್ಷಣದಲ್ಲಿ ಹಿಂದುಳಿದು ಬಿಹಾರ ಹಾಗೂ ಉತ್ತರ ಪ್ರದೇಶದಂತೆ ಆಗುತ್ತಿತ್ತು ಎಂದರು.

ಇಂದಿನ ಸನ್ನಿವೇಶದಲ್ಲಿ ರಾಜಕೀಯ ಕಾರಣಗಳಿಗಾಗಿ ಲಿಂಗಾಯತ ಸಮುದಾಯವನ್ನು ಅವಹೇಳನ ಮಾಡುವಂತಹ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಬಿಜೆಪಿಯು ಬಿ,ಎಸ್.ಯಡಿಯೂರಪ್ಪನವರನ್ನು ಕೇವಲವಾಗಿ ನಡೆಸಿಕೊಳ್ಳಲಾಗಿದೆ. ದಿಢೀರ್ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು. ನಂತರ ಲಿಂಗಾಯತ ಸಮುದಾಯದ ಓಲೈಕೆಗಾಗಿ ಬಿಜೆಪಿಯ ಕೇಂದ್ರ ಸಮಿತಿಯಲ್ಲಿ ಸ್ಥಾನ ನೀಡಲಾಯಿತು. ವೀರೇಂದ್ರ ಪಾಟೀಲ್ರವರನ್ನು ಸರಿಯಾಗಿ ನಡೆಸಿಕೊಳ್ಳದ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಅನುಭವಿಸಿದ ಸೋಲುಗಳನ್ನೇ ಬಿಜೆಪಿ ಕೂಡ ಅನುಭವಿಸಲಿದೆ ಎಂದು ಭವಿಷ್ಯ ನುಡಿದರು.
ಎಎಪಿಯಿಂದ ಬಸವಣ್ಣನವರ ತತ್ವ ಕಾರ್ಯ ರೂಪಕ್ಕೆ
ಆಮ್ ಆದ್ಮಿ ಪಾರ್ಟಿಯ ನೀತಿಗಳು ಹಾಗೂ ಶರಣ ಬಸವಣ್ಣನವರು ತತ್ತ್ವಗಳು ಒಂದೇ ಆಗಿವೆ. ಸಮಾನತೆ, ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕೆಂದು ಬಸವಣ್ಣನವರು 12ನೇ ಶತಮಾನದಲ್ಲೇ ಪ್ರತಿಪಾದಿಸಿದ್ದರು. ಆಮ್ ಆದ್ಮಿ ಪಾರ್ಟಿಯು ದೆಹಲಿಯಲ್ಲಿ ಅವುಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದೆ ಎಂದು ಎಎಪಿ ಕಾರ್ಯಗಳನ್ನು ಅವರು ವಿವರಿಸಿದರು.

ಬಸವಣ್ಣನವರ ನಾಡಿನಲ್ಲೂ ಅದೇ ಮಾದರಿಯ ಆಡಳಿತ ನೀಡಲು ಈ ಚುನಾವಣೆಯಲ್ಲಿ ಅವಕಾಶ ದೊರೆಯುವ ವಿಶ್ವಾಸವಿದೆ. ರಾಜ್ಯದ ಅನೇಕ ಲಿಂಗಾಯತ ಯುವಕರು ಹಾಗೂ ಮುಖಂಡರು ಆಮ್ ಆದ್ಮಿ ಪಾರ್ಟಿ ಸೇರುತ್ತಿರುವುದು ನಮ್ಮ ಉತ್ಸಾಹ ಹೆಚ್ಚಿಸಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2ಎ ಮೀಸಲಾತಿ ನೀಡುವುದಾಗಿ ತಾಯಿಯ ಮೇಲೆ ಆಣೆ ಮಾಡಿ ಹೇಳಿದ್ದರು. ನಂತರ ಅವರು ಕಡೆಗಣಿಸುವ ಮೂಲಕ ಇಡೀ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಶಿಕ್ಷಣ ಹಾಗೂ ನೌಕರಿಯಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ರವಿಚಂದ್ರ ನೆರಬೆಂಚಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಕುಶಲಸ್ವಾಮಿ ಮಾತನಾಡಿ, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಉಚಿತವಾಗಿ ಸಿಗಬೇಕೆಂದು ಶರಣ ಬಸವಣ್ಣನವರು ಹೇಳಿದ್ದಾರೆ. ನಮ್ಮ ಪಕ್ಷ ಬಸವಣ್ಣನವರ ತತ್ತ್ವಗಳ ಮಾರ್ಗದಲ್ಲಿ ಸಾಗುತ್ತಿದೆ. ಆದರೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬಸವಣ್ಣನವರ ಹೆಸರನ್ನು ಕೇವಲ ತೋರಿಕೆಗಾಗಿ ಬಳಸಿಕೊಳ್ಳುತ್ತಿವೆ. ಬಸವಣ್ಣನವರ ತತ್ತ್ವಗಳನ್ನು ಗಾಳಿಗೆ ತೂರಿ, ಜಾತಿ-ಧರ್ಮ ರಾಜಕೀಯದಲ್ಲಿ ತೊಡಗಿಕೊಂಡಿವೆ ಎಂದು ಅವರು ದೂರಿದರು.
ಲಿಂಗಾಯತರ ಕಡೆಗಣನೆ ಮಾಡಿದ್ದ ಯಾರು?
ಲಿಂಗಾಯತರ ಓಟುಗಳು ನಮಗೆ ಬೇಡ. ಅವರು ಓಟುಗಳು ಇಲ್ಲದೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಜಯಪುರದಲ್ಲಿ ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದರು. ಅವರ ಈ ಒಂದು ಹೇಳಿಕೆ ಬಿಜೆಪಿಗೆ ಇರುಸು ಮುರುಸು ಉಂಟು ಮಾಡಿದೆ. ರಾಜ್ಯದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು, ವೇದಿಕೆಗಳು ಸಿಟಿ ರವಿ ವಿರುದ್ಧ ಕಿಡಿ ಕಾರಿದ್ದಾರೆ. ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಇದರಿಂದ ಎಚ್ಚೆತ್ತುಕೊಂಡ ಸಿ.ಟಿ ರವಿ, ತಮ್ಮ ಹೇಳಿಕೆ ವಿರುದ್ಧ ಸ್ಪಷ್ಟನೆ ನೀಡಿದರು. ಇದೆಲ್ಲ ಕಾಂಗ್ರೆಸ್ಸಿನ ಸುಳ್ಳಿನ ಕಾರ್ಖಾನೆಯ ಸೃಷ್ಟಿ ಎಂದು ಆರೋಪಿಸಿದರು.












Click it and Unblock the Notifications