'ಭ್ರಮೆ' ಕನ್ನಡಿ'ಗರಿ'ಗೊಂದೊಳ್ಳೆ "ಶೋ ಟೀಂ"
ಸಂಗೀತ ಪ್ರೇಮಿಗಳಿಗೆ ಹೊಸದೇನನ್ನಾದರೂ ಕೊಡಬೇಕಂಬ ತುಡಿತವಿರುವ, ಸ್ಫೂರ್ತಿಯ ಚಿಲುಮೆಯಂತಿರುವ ವಿಕಾಸ್ ವಸಿಷ್ಠ, ಸ್ಪರ್ಶ ಆರ್.ಕೆ., ವಿಶ್ವಾಸ್ ವಸಿಷ್ಠ, ಅಲಕಾ ಸುಬ್ರಮಣ್ಯ, ಸಂದೀಪ್ ರವಿಕುಮಾರ್ ಅವರು 'ಭ್ರಮೆ' ಎಂಬ ತಂಡ ಕಟ್ಟಿಕೊಂಡು ಸಂಗೀತ ಪ್ರೇಮಿಗಳಿಗೆ ಹೊಸ ಬಗೆಯಲ್ಲಿ ಸಂಗೀತಧಾರೆ ಹರಿಸಲು ಸಜ್ಜಾಗಿದ್ದಾರೆ. ಈ ಐವರು ಪ್ರತಿಭಾವಂತರ ಬಹುಕಾಲದ ಕನಸಾದ 'ಭ್ರಮೆ' ಸಂಗೀತ ತಂಡ ಬೆಂಗಳೂರಿನ ಮಳೆಯ ಹಿಮ್ಮೇಳದಲ್ಲಿ ಶನಿವಾರ ಲೋಕಾರ್ಪಣೆಗೊಂಡಿದೆ. ಈ ಸಮಾರಂಭ ಕುರಿತ ವರದಿ ಕುಮುದವಲ್ಲಿ ಅರುಣ್ ಮೂರ್ತಿ ಅವರ ಬರವಣಿಗೆಯಲ್ಲಿದೆ ಓದಿ...
ಕನ್ನಡಿ'ಗರಿ'ಗೊಂದು ಶೋ ಥೀಮು ...ಹುಚ್ಚು ಮಳೆಗೂ ಸೆಡ್ಡು ಹೊಡೆದು ಕನ್ನಡ ಭಾಷಾ ಸೊಗಡನ್ನ, ಕನ್ನಡ ಪದ ಸೌಂದರ್ಯವನ್ನ, ಕನ್ನಡ ಗೀತ ಸೌರಭವನ್ನ ನವನವೀನ ಶೈಲಿಯಲ್ಲಿ ಪ್ರೆಸೆಂಟಿಸಿ... ನೆರೆದಿದ್ದ ಅಭಿಮಾನೀ ಸಾಗರವನ್ನ ಗಾನದಲೆಯಲ್ಲಿ ತೇಲಿಸಿ, ಹುಚ್ಚು 'ಭ್ರಮೆ'ಯಲ್ಲಿ ಅಲೆದಾಡಿಸಿ 'ವಾಸ್ತವ'ದತ್ತ ತಂದುಬಿಟ್ಟ "ಭ್ರಮೆ" ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಅಂತೂ ಇಂತೂ 3 ದಿನದ ಹಬ್ಬ ಮುಗಿಸಿ ಸುಸ್ತಾಗಿ ಬಂದಿದ್ದ ನನಗೆ, ನನ್ನ ಕಣ್ಣುಗಳಿಗೆ, ಕಿವಿಗಳಿಗೆ ನೆನ್ನೆ ಹಬ್ಬದೂಟ!!
ವಿಕಾಸ್, ವಿಶ್ವಾಸ್... ಅದೆಷ್ಟು ಪುಣ್ಯವಂತರಪ್ಪಾ ನಿಮ್ಮ ಅಪ್ಪ, ಅಮ್ಮ ನಿಮ್ಮಂತಹ ಅಪ್ಪಟ ಕನ್ನಡ ಪ್ರತಿಭೆಗಳನ್ನು ನಮಗೆ ಕೊಟ್ಟ ಅವರಿಗೆ ದೊಡ್ಡದೊಂದು ಥ್ಯಾಂಕ್ಸ್. ಏನು ಕಂಠ, ಅದೇನು ಆಲಾಪ, ಅದೆಂತಹ ಗಮಕ...ಫೆಂಟಾಬ್ಯುಲಸ್ ನಮ್ ಅಲಕಾ, ನಮ್ ಸ್ಪರ್ಶ ...ಸದಾ ಸುಶ್ರಾವ್ಯ ಸುಂದರಿಯರು.[ಭ್ರಮೆ ತಂಡದ ಕಲಾವಿದರ ವ್ಯಕ್ತಿಚಿತ್ರ ಓದಿ]
ಕನ್ನಡ ಹಾಡುಗಳನ್ನು ಹೆಂಗೆಂಗೋ ಹಾಡಿ ಹಾಳು ಮಾಡದೇ, ಅದೇ ರಾಗ ತಾಳ ಭಾವ ಇಟ್ಕೊಂಡು ಒಂದಿಷ್ಟೂ ಕನ್ ಫ್ಯೂಷನ್ ಮಾಡದ ಹಾಗೆ ಫ್ಯೂಷನ್ ಮಾಡಿದ್ದು ಖುಷಿಯಾಯ್ತು. ಎಲ್ಲಾ ಹಾಡುಗಳೂ ಚೆಂದ ಚೆಂದ. 'ಯಾರು ತಿಳಿಯರು... ನಿನ್ನ ಕಂದ ಪದ್ಯ ಸೂಪರ್. ಜೋಗುಳ ಮೆಡ್ಲೀ ಕೇಳ್ತಾ..ಕೇಳ್ತಾ ನಾನು ತೂಕಡಿಸಿದ್ದು ಹಾಡಿನ, ಹಾಡಿದವರ ಶಕ್ತಿಗೊಂದು ನಿದರ್ಶನ. ದಿಲ್ ಸೇ ರೇ, ಕವ್ವಾಲಿ, ಕಾಲ ಭೈರವ, ಈ ಸುಂದರ ಬೆಳದಿಂಗಳ ...ಎಲ್ಲವೂ ಬೊಂಬಾಟ್.

ಅಕ್ಷರನಷ್ಟೇ ಸುಂದರ, ಸುಲಲಿತ ಅವರ ಕನ್ನಡ. ಜಾಹೀರಾತು ಹಾಡುಗಳ ಹಿನ್ನಲೆಯಲ್ಲಿ ಗಂಡ ಹೆಂಡತಿ, ದಾಂಪತ್ಯ ಕಲಹ ಲಕಲಕ ಹೊಳೆದಿದ್ದು ಥೇಟು 'ಅಕ್ಷರ'ನಂತೆ ಹಾಡಿಗಿಂತ ಅವರೇ ಮಾತೇ ಸೆಳೆದಿದ್ದು ಹೆಚ್ಚು ಇಲ್ಲಿ. ಒಳ್ಳೇ ಪ್ರಯತ್ನ. ಮಳೆಯ ಕಾರಣದಿಂದ ನಾನು ನಾಲ್ಕನೇ ಹಾಡಿಗೆ ಎಂಟ್ರಿ ಕೊಟ್ಟಿದ್ದಕ್ಕೆ ಮೊದಲ 3 ಗಾನಮಳೆಯಲ್ಲಿ ನೆನೆಯೋಕೆ ಸಾಧ್ಯವಾಗಲಿಲ್ಲ. ಮಿಸ್ಡ್ ಆಕರ್ಷ ಕಮಲ ಅವರ ಆರಾಮ್ ನಿರೂಪಣೆ (ಮನೇಲಿ ಮಾತಾಡೋ ತರಹ ), ಗಾಯಕರಿಗೆ ಅವರ ಗಾನದಷ್ಟೇ ಅದ್ಭುತವಾಗಿ ಸಾಥ್ ಕೊಟ್ಟ ವಾದ್ಯಸಂಗೀತಗಾರರು (ಸಂದೀಪ್, ಅಕ್ಷರ ಬಿಟ್ಟು ಇನ್ಯಾರ ಹೆಸರು ಗೊತ್ತಾಗ್ಲಿಲ್ಲ ) ನಿಜಕ್ಕೂ ಶ್ಲಾಘನೀಯರು.
"ಭ್ರಮೆ" ಯನ್ನ 'ಭ್ರಮೆ' ಯಲ್ಲಿ ತೇಲುವಂತೆ ಮಾಡಿದ್ದು ಇಬ್ಬರು 'ನಾಗರಾಜ'ರು ಕಲರ್ ಕಲರ್ ಬೆಳಕು ಕೊಟ್ಟು ಈವೆಂಟ್ ನ ಇನ್ನಷ್ಟು ಬಣ್ಣಪೂರಿತ, ವರ್ಣಪ್ರೇರಿತ ಮಾಡಿದ ನಾಗರಾಜ್ ಸೋಮಯಾಜಿ, ಫೆಂಟಾಸ್ಟಿಕ್ ಸ್ಟೇಜ್ ಡಿಸೈನ್ ನ ರೂವಾರಿ ನಾಗರಾಜ್ ವಸ್ತಾರೆ ( ತುಂಬಾ ಚೆನ್ನಾಗಿತ್ತು ವಸ್ತಾರೆ ಸರ್...ಆದ್ರೆ ದೊಡ್ಡ ಕೆಂಪು ಹಲಗೆ ಕಾರ್ಯಕ್ರಮಕ್ಕೆ ಕೊಂಚ ಅಡ್ಡಿಯಾಯ್ತು ಅನ್ನಿಸ್ತು ನಂಗೆ...sorry) & ಹಾಡುಗಾರರ ವಸ್ತ್ರ ವಿನ್ಯಾಸ ಹೊಸ ಥರ ಅನ್ನಿಸಿದ್ರೂ... ನಂಗೆ ಅಷ್ಟು ಮನಸಿಗೆ ಹೊಂದಿಕೆಯಾಗಲಿಲ್ಲ.

ಇದರ ಬಗ್ಗೆ ಇನ್ನಷ್ಟು ಗಮನ ಕೊಟ್ಟರೆ "ಭ್ರಮೆ" ಕನ್ನಡಿ'ಗರಿ'ಗೊಂದೊಳ್ಳೆ ಅದ್ಭುತ "ಶೋ ಟೀಂ" ಆಗೋದ್ರಲ್ಲಿ ಸಂಶಯಾನೇ ಇಲ್ಲ. ಈಗಾಗಲೇ ಆಗಿರೋದೂ ಸುಳ್ಳಲ್ಲ...ಇನ್ನೂ ಹೆಚ್ಚು ಹೆಚ್ಚು ಜನರನ್ನು, ದೇಶ-ವಿದೇಶಗಳಲ್ಲಿ ತಲುಪುವಂತಾಗಲಿ ಅನ್ನೋದು ನನ್ನ ಹಾರೈಕೆ.
ಬಹಳಷ್ಟು ಹಿಂದಿ ಹಾಡುಗಳ, ಹಾಡುಗಾರರ Show Off ಗಳನ್ನು ನೋಡಿರುವ ನನಗೆ, ನಮ್ಮ ಕನ್ನಡತನ ಮೆರೆಸುವ ಈ ಯುವ ಗಾಯಕರ ತಂಡ ಕಂಡು ನಿಜಕ್ಕೂ ಹಿಡಿಸಲಾರದಷ್ಟು ಸಂತೋಷ "ಭ್ರಮೆ" ಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಮಾಡಿದ ಪ್ರತಿಯೊಬ್ಬರೂ ಅಭಿನಂದನೆಗೆ ಅರ್ಹರು.
ಆದ್ರೆ...ಗೌರವ ಸಮರ್ಪಣೆ ಕೊನೆಯಲ್ಲಿ ಮಾಡಿದ್ದು, ಅದನ್ನ ನೋಡೋಕೆ ಜನರೂ ಇಲ್ಲದೇ ಇದ್ದಿದ್ದು, ಇದ್ದವರೂ ಗಮನಿಸದೇ ತಮ್ಮ ತಮ್ಮ ಮಾತುಗಳಲ್ಲಿ ಮುಳುಗಿದ್ದು ...ಅಸಹನೀಯ ಅನ್ನಿಸ್ತು. ಎರೆಡೆರೆದು ಹಾಡುಗಳ ಮಧ್ಯೆ ನಾಲ್ಕು ನಾಲ್ಕು ಜನರನ್ನು ವೇದಿಕೆಗೆ ಕರೆದಿದ್ದರೆ ಗೌರವಯುತವಾಗಿರ್ತಿತ್ತೇನೋ..."ಭ್ರಮೆ" ಕನ್ನಡಿಗರ ಒಂದು ಹೆಮ್ಮೆಯ ತಂಡವಾಗಿ ಬೆಳೆಯಲಿ, ಉಳಿಯಲಿ.












Click it and Unblock the Notifications