ಲಂಚ ಪ್ರಕರಣ: ಬೆಸ್ಕಾಂ ತಾಂತ್ರಿಕ ನಿರ್ದೇಶಕರ ಪಿಎ ಎಸಿಬಿ ಬಲೆಗೆ!
ಬೆಂಗಳೂರು, ಜು. 06: ನಿವೃತ್ತಿ ಬಳಿಕ ನೆಮ್ಮದಿ ಕಾಲ ಕಳೆಯುವ ಬದಲಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದ ಬೆಸ್ಕಾಂ ಅಧಿಕಾರಿ ಲಂಚ ಸ್ವೀಕರಿಸಿ ಜೈಲು ಪಾಲಾಗಿದ್ದಾರೆ.
ಕೆ.ಆರ್. ವೃತ್ತದಲ್ಲಿರುವ ಬೆಸ್ಕಾಂ ತಾಂತ್ರಿಕ ನಿರ್ದೇಶಕ ಆಪ್ತ ಸಹಾಯಕ ಷಣ್ಮುಗಪ್ಪ ಬಂಧನಕ್ಕೆ ಒಳಗಾದ ಆರೋಪಿತ ಅಧಿಕಾರಿ. ಈತನಿಂದ 40 ಸಾವಿರ ರೂ. ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ.
ಯಲಹಂಕದ ನಿವಾಸಿ ವಿದ್ಯುತ್ ಗುತ್ತಿಗೆದಾರನಾಗಿದ್ದು, ಹೊಸಕೋಟೆ ತಾಲೂಕಿನ ಏಕರಾಜಪುರದಲ್ಲಿ ನಿರ್ಮಿಸಿರುವ ಖಾಸಗಿ ವಸತಿ ಬಡಾವಣೆಗೆ 250 ಕೆವಿಯ ನಾಲ್ಕು ಟ್ರಾನ್ಸ್ ಫರ್ಮರ್ ಅಳವಡಿಸಲು ಅನುಮೋದನೆ ನೀಡುವಂತೆ ಬೆಸ್ಕಾಂ ತಾಂತ್ರಿಕ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದರು. ಕಟ್ಟಡದ ಮಾಲೀಕರ ಪರವಾಗಿ ಗುತ್ತಿಗೆದಾರರು ಅರ್ಜಿ ಸಲ್ಲಿಸಿದ್ದರು.
ಖಾಸಗಿ ಬಡಾವಣೆಗೆ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಸಲು ಅನುಮತಿ ನೀಡಲು ತಾಂತ್ರಿಕ ನಿರ್ದೇಶಕರು, ವಿದ್ಯುತ್ ರವರ ಆಪ್ತ ಕಾರ್ಯದರ್ಶಿ ಷಣ್ಮುಗಪ್ಪ ಅವರು 40 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಒಂದಕ್ಕೆ ತಲಾ 10 ಸಾವಿರ ರೂ. ನಂತೆ ನಾಲ್ಕು ಟ್ರಾನ್ಸ್ಫಾರ್ಮರ್ ಅಳವಡಿಸಲು ನಲವತ್ತು ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಷಣ್ಮುಗಪ್ಪ ಅವರು ಲಂಚ ಸ್ವೀಕರಿಸುವಾಗ ಬೆಂಗಳೂರಿನ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

ವಿಚಾರಣೆ ವೇಳೆ ಷಣ್ಮುಗಪ್ಪ 2019 ರಲ್ಲೇ ನಿವೃತ್ತಿ ಹೊಂದಿದ್ದರು. ಗುತ್ತಿಗೆ ಆಧಾರದ ಮೇಲೆ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಿರುವುದು ಬೆಳಕಿಗೆ ಬಂದಿದೆ. ಮೇಲಾಧಿಕಾರಿಗಳ ಅಣತಿ ಮೇರೆಗೆ ಷಣ್ಮುಗಪ್ಪ ಲಂಚ ಸ್ವೀಕರಿಸಿ ಸಿಕ್ಕಿಬಿದ್ದನೋ? ಇಲ್ಲವೇ ಷಣ್ಮುಗಪ್ಪ ಅವರೇ ಲಂಚ ಸ್ವೀಕರಿಸಿ ಸಿಕ್ಕಿಬಿದ್ದರೇ ಎಂಬುದು ಎಸಿಬಿ ಮುಂದಿನ ತನಿಖೆಯಲ್ಲಿ ಗೊತ್ತಾಗಲಿದೆ.
ಒಬ್ಬ ಅಧಿಕಾರಿ ನಿವೃತ್ತಿ ಬಳಿಕ ಗುತ್ತಿಗೆ ಆಧಾರದ ಮೇಲೆ ಅದೇ ಇಲಾಖೆಗೆ, ಅದೇ ಹುದ್ದೆಗೆ ನಿಯೋಜನೆ ಆಗುತ್ತಾರೆ ಎಂದರೆ, ಅದಕ್ಕೆ ಆ ಅಧಿಕಾರಿ ಮೇಲಾಧಿಕಾರಿಗಳಿಗೆ ತೋರುವ ನಿಷ್ಠೆ ಕಾರಣ ಇರಬೇಕು. ಇಲ್ಲವೇ ಭ್ರಷ್ಟ ಅಂತ ಗೊತ್ತಿದ್ದಲ್ಲಿ ನಿವೃತ್ತಿ ಬಳಿಕ ಅವರನ್ನು ಯಾಕೆ ಅದೇ ಹುದ್ದೆಗೆ ನಿಯೋಜಿಸಿಕೊಂಡರು ಅಲ್ಲವೇ? ಕೆಲ ದಿನಗಳ ಹಿಂದಷ್ಟೇ ಎಸಿಬಿ ಕಾರ್ಯಶೈಲಿಯ ಬಗ್ಗೆ ಹೈಕೋರ್ಟ್ ಕಿಡಿ ಕಾರಿದೆ.
Recommended Video

ಎಸಿಬಿ ದಾಖಲಿಸಿರುವ ಅಷ್ಟೂ ಪ್ರಕರಣಗಳ ವಿವರಗಳನ್ನು ಕೇಳಿದೆ. ಸಣ್ಣ ಪುಟ್ಟ ಅಧಿಕಾರಿಗಳನ್ನು ಬಂಧಿಸುವ ಎಸಿಬಿ ದೊಡ್ಡವರ ಮೇಲೆ ಕೇಸು ದಾಖಲಿಸುತ್ತಿಲ್ಲ. ಎಸಿಬಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಅವರು ಕೇಳಿದ ಪ್ರಶ್ನೆ ಈಗಾಗಲೇ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದೆ. ನ್ಯಾಯಾಧೀಶರ ಪ್ರಶ್ನೆ ಬಳಿಕ ಐದು ಲಕ್ಷ ರೂ. ಲಂಚ ಪ್ರಕರಣದಲ್ಲಿ ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರನ್ನು ಬಂಧಿಸಿದ್ದರು.












Click it and Unblock the Notifications