Bengaluru Weather Update: ಈ ಬಿಸಿಲಿಗೆ ಸುಸ್ತಾಗಿದ್ದೀರಾ? ಮೇನಲ್ಲಿ ಮನೆಯಿಂದ ಹೊರ ಬರೋದು ಇನ್ನೂ ಕಷ್ಟ!
ಬೆಂಗಳೂರು, ಮಾರ್ಚ್ 25: ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ರಾಜಧಾನಿ ಬೆಂಗಳೂರಿಗೆ ಮಳೆ ಬರುತ್ತದೆ ಎಂದು ಹವಾಮಾನ ಇಲಾಕೆ ಹೇಳುತ್ತಲೇ ಇದೆ... ಆದರೆ, ವರುಣ ದೇವ ಮಾತ್ರ ರಾಜ್ಯದ ಮೇಲೆ, ಬೆಂಗಳೂರಿಗರ ಮೇಲೆ ಕರುಣೆ ತೋರಿಸುತ್ತಿಲ್ಲ. ಇದರ ಜೊತೆಗೆ ಹಲವು ವಿಜ್ಞಾನಿಗಳು ಸಿಲಿಕಾನ್ ಸಿಟಿಯಲ್ಲಿ ಉಷ್ಣಾಂಶ ಜಾಸ್ತಿಯಾಗುವ ಮುನ್ಸೂಚನೆಯನ್ನೇ ನೀಡುತ್ತಿದ್ದಾರೆ.
ಬೆಂಗಳೂರು ನಗರದಲ್ಲಿನ ನೀರಿನ ಅಭಾವದಿಂದಾಗಿ ಉಷ್ಣಾಂಶ ಹೆಚ್ಚಾಗಿದ್ದು, ಮಾರ್ಚ್ ತಿಂಗಳಲ್ಲಿ 34 ಡಿಗ್ರಿ ಸೆಲಿಯಸ್ಸ್ ಉಷ್ಣಾಂಶ ಇದ್ದರೆ ಇದು ಮೇ ತಿಂಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಎಎಸ್ಸಿ) ಪರಿಸರ ವಿಜ್ಞಾನಿ ಡಾ. ಟಿವಿ ರಾಮಚಂದ್ರರಾವ್ ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ನೆಲ - ಜಲ ಸಂರಕ್ಷಣಾ ಸಮಿತಿ ವತಿಯಿಂದ ನಗರದ ಗಾಂಧಿಭವನದಲ್ಲಿ ಏರ್ಪಡಿಸಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿ ಬೆಂಗಳೂರಿನ ಹವಾಮಾನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಾವು ಕೆರೆ ಸಂರಕ್ಷಣೆ ಕುರಿತಂತೆ ಆಧ್ಯಯನ ಮಾಡಿರುವ ಬಗ್ಗೆ ವಿವರಣೆ ನೀಡಿದ್ದಾರೆ.
ಉದ್ಯಾನ ನಗರಿ, ಗಾರ್ಡನ್ ಸಿಟಿ ಎಂದು ಕರೆಯಿಸಿಕೊಳ್ಳುತ್ತಿದ್ದ ಬೆಂಗಳೂರಿನಲ್ಲಿ ಕೆರೆಗಳನ್ನು ಮುಚ್ಚಿ, ಲೇಔಟ್ ಮಾಡಿ ಗಗನಚುಂಬಿ ಕಟ್ಟಡಗಳನ್ನು ಕಟ್ಟಲಾಗಿದೆ. ಸಿಟಿಯ ಮುಕ್ಕಾಲು ಭಾಗ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಮಾಡಿ, ಮಳೆಗಾಲದಲ್ಲಿ ನೀರು ಇಂಗಲು ವ್ಯವಸ್ಥೆಯಿಲ್ಲ. ಹೀಗಾಗಿ ಬಿದ್ ಮಳೆ ನೀರು ಭೂಮಿಗೆ ಇಳಿಯದೆ ಕುಡಿಯುವ ನೀರಿಗೆ ಸಮಸ್ಯೆ ತಲೆದೋರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"740 ಚದರ ಕಿಲೋಮೀಟರ್ ವ್ಯಾಪ್ತಿಯ ಬೆಂಗಳೂರಿನಲ್ಲಿ ಕೆಂಪೇಗೌಡರ ಕಾಲದಲ್ಲಿ 1,452 ಕೆರೆಗಳಿದ್ದವು. ಆಗ ಗರಿಷ್ಠ ಉಷ್ಣಾಂಶ 14 ರಿಂದ 16 ಡಿಗ್ರಿ ಇರುತ್ತಿತ್ತು. ಡಿಸೆಂಬರ್ನಲ್ಲಿ ತಾಪಮಾನ ಶೂನ್ಯ ಇರುತ್ತಿತ್ತು. ನಗರದಲ್ಲಿ ಸದ್ಯ 193 ಕೆರೆಗಳು ಮಾತ್ರ ಜೀವಂತವಾಗಿವೆ. ಕೇಂದ್ರ ಪರಿಸರ ಸಚಿವಾಲಯ ನಿರ್ದೇಶನದಂತೆ ಶೇಕಡಾ 33ರಷ್ಟು ಹಸಿರು ಇರಬೇಕು. ಆದರೆ ಶೇಕಡಾ 4ರಷ್ಟು ಮಾತ್ರ ಹಸಿರು ಪ್ರದೇಶ ಇದೆ. ಮಾರ್ಚ್ನಲ್ಲಿ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದರೆ ಮುಂದಿನ ಮೇ ತಿಂಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ" ಎಂದಿದ್ದಾರೆ.

ವಿಚಾರ ಸಂಕಿರಣ ಏರ್ಪಡಿಸಿದ್ದ ಕರ್ನಾಟಕ ನೆಲ - ಜಲ ಸಂರಕ್ಷಣಾ ಸಮಿತಿ ಸಂಚಾಲಕ ಕುರುಬುರು ಶಾಂತಕುಮಾರ್ ಮಾತನಾಡಿ, "ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಭೀಮ, ಕೃಷ್ಣಾ, ಘಟಪ್ರಭಾ, ಮಹದಾಯಿ, ಕಾವೇರಿ ನದಿಗಳಿಂದ ನೀರು ಹರಿಸುವಂತೆ ರೈತರು ಒತ್ತಡ ಹಾಕುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ಸ್ಥಗಿತಗೊಳಿಸುವ ಡಿಎಂಕೆ ಚುನಾವಣಾ ಪ್ರಣಾಳಿಕೆ ಏಕೆ ಬೇಕು? ಕುಡಿಯುವ ನೀರಿನ ವಿವಾದದ ಮೂಲಕ ಜನರನ್ನ ಕೆಣಕುವ ರಾಜಕೀಯ ಪಕ್ಷದ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಲಿ" ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.











Click it and Unblock the Notifications