ಬೆಂಗಳೂರು-ವಿಜಯವಾಡ ಎಕ್ಸ್ಪ್ರೆಸ್ವೇ: 12 ರಿಂದ 6 ಗಂಟೆಗೆ ಇಳಿಯಲಿದೆ ಪ್ರಯಾಣದ ಅವಧಿ
ಬೆಂಗಳೂರು, ಡಿ. 03: ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಆಂಧ್ರಪ್ರದೇಶದ ವಿಜಯವಾಡ ನಡುವೆ ಆಗಾಗ್ಗೆ ಪ್ರಯಾಣಿಸುವವರಿಗೆ ಒಳ್ಳೆಯ ಸುದ್ದಿಯೊಂದು ಬಂದಿದೆ. ಶೀಘ್ರದಲ್ಲೇ ವಿಜಯವಾಡ - ಬೆಂಗಳೂರು ಎಕ್ಸ್ಪ್ರೆಸ್ವೇ ಕಾಮಗಾರಿ ಪ್ರಾರಂಭವಾಗಲಿದ್ದು, ಇದಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಬಿಡ್ಗಳನ್ನು ಆಹ್ವಾನಿಸಿದೆ.
ಈ ಎಕ್ಸ್ಪ್ರೆಸ್ವೇ ಅನ್ನು ಬಿಕೆವಿ (ಬೆಂಗಳೂರು - ಕಡಪ - ವಿಜಯವಾಡ) ಎಕ್ಸ್ಪ್ರೆಸ್ವೇ ಎಂದೂ ಕರೆಯಲಾಗುತ್ತದೆ. ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಈಗಿರುವ ಮಾರ್ಗದಲ್ಲಿ 12 ಗಂಟೆಯಾಗುತ್ತಿದ್ದು, ಈ ಹೆದ್ದಾರಿಯಿಂದ ಅದು ಕೇವಲ 6 ಗಂಟೆಗೆ ಇಳಿಯಲಿದೆ. ಅಂದರೆ, ಶೇಕಡಾ 50 ರಷ್ಟು ಪ್ರಯಾಣದ ಅವಧಿ ಕಡಿಮೆಯಾಗಲಿದೆ.
ಜನವರಿಯಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಓಪನ್?
ಈ ಆರು ಲೇನ್ಗಳ ಎಕ್ಸ್ ಪ್ರೆಸ್ ವೇ 342 ಕಿಲೋಮೀಟರ್ ಉದ್ದವಿದ್ದು, ಸುಮಾರು 19,200 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತಕ್ಷಣವೇ ಅನುಮೋದಿಸಿದ್ದಾರೆ. ಆಂಧ್ರಪ್ರದೇಶದ ರಾಜ್ಯ ಸರ್ಕಾರವು ನಿರ್ಮಾಣವನ್ನು ಪ್ರಾರಂಭಿಸಲು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಯೋಜನೆಯನ್ನು 14 ಪ್ಯಾಕೇಜ್ಗಳಲ್ಲಿ ನಡೆಸುತ್ತಿದ್ದು, ಅದರಲ್ಲಿ ಹೈಬ್ರಿಡ್ ಆನ್ಯುಟಿ ಮಾಡೆಲ್ (ಎಚ್ಎಎಂ) ಅಡಿಯಲ್ಲಿ ನಾಲ್ಕಕ್ಕೆ ಬಿಡ್ಗಳನ್ನು ಆಹ್ವಾನಿಸಿದೆ. ಕಾಮಗಾರಿಗೆ ಪ್ರಾಧಿಕಾರವು ಒಟ್ಟು ವೆಚ್ಚದ 40 ಪ್ರತಿಶತವನ್ನು ಪಾವತಿಸುತ್ತದೆ. ಉಳಿದ 60 ಪ್ರತಿಶತವನ್ನು ಗುತ್ತಿಗೆದಾರರು ವ್ಯವಸ್ಥೆ ಮಡಿಕೊಳ್ಳಬೇಕು ಎನ್ನಲಾಗಿದೆ.
ಭಾರತಮಾಲಾ ಪರಿಯೋಜನಾ (BMP) ಹಂತ-2 ರ ಅಡಿಯಲ್ಲಿ ಈ ಯೋಜನೆಯನ್ನು ನಿರ್ಮಿಸಲಾಗುತ್ತಿದೆ. ಈ ಹೆದ್ದಾರಿ ಬೆಂಗಳೂರನ್ನು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ.
ಕೋಡಿಕೊಂಡ, ಪುಲಿವೆಂದುಲ, ಮಲ್ಲೇಪಾಲಿ, ವಂಗಪಾಡು, ಅಡ್ಡಂಕಿ, ಚಿಲಕಲೂರಿಪೇಟೆ ಮತ್ತು ಗುಂಟೂರು ಮುಂತಾದ ಪಟ್ಟಣಗಳ ಮೂಲಕ ಎಕ್ಸ್ಪ್ರೆಸ್ವೇ ಹಾದುಹೋಗಲಿದೆ.
ಎಲ್ಲವೂ ವೇಳಾಪಟ್ಟಿಯ ಪ್ರಕಾರ ನಡೆದರೆ, ಎಕ್ಸ್ಪ್ರೆಸ್ವೇ 2025 - 2026 ರ ವೇಳೆಗೆ ಸಾರ್ವಜನಿಕ ಬಳಕೆಗೆ ಮುಕ್ತವಾಗುವ ಅವಕಾಶವಿದೆ.
(ಮಾಹಿತಿ ಕೃಪೆ: ದಿ ಎಕನಾಮಿಕ್ ಟೈಮ್ಸ್)