ಶುಲ್ಕ ಭರಿಸದ ಕಾಲೇಜುಗಳ ಫಲಿತಾಂಶಕ್ಕೆ ಬೆಂವಿವಿ ತಡೆ
ಬೆಂಗಳೂರು, ಜ. 3: ಕಾಲೇಜುಗಳು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಯಲು ಬೆಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ. ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಕೆ.ಎನ್. ನಿಂಗೇಗೌಡ ಈ ವಿಷಯ ತಿಳಿಸಿದ್ದಾರೆ.
ಜ್ಞಾನಭಾರತಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾವಿಷಯಕ ಪರಿಷತ್ ಸಭೆಯಲ್ಲಿ ಪಾಲ್ಗೊಂಡಿದ್ದ ಕೆ.ಎನ್. ನಿಂಗೇಗೌಡ, "ಹಲವು ಕಾಲೇಜುಗಳು ಇನ್ನೂ ಮೇ-ಜೂನ್ ಪರೀಕ್ಷಾ ಶುಲ್ಕವನ್ನೇ ಸಂದಾಯ ಮಾಡಿಲ್ಲ. 62 ಕಾಲೇಜುಗಳು ಒಟ್ಟೂ 1.62 ಕೋಟಿ ರು. ಶುಲ್ಕ ಪಾವತಿಸಬೇಕಾಗಿದೆ. ಆದ್ದರಿಂದ ಅಂತಹ ಕಾಲೇಜುಗಳ ಫಲಿತಾಂಶವನ್ನು ತಲೆಹಿಡಿಯಲಾಗಿದೆ" ಎಂದು ತಿಳಿಸಿದ್ದಾರೆ. [ಬೆಂಗಳೂರು ವಿವಿ ಉತ್ತರ ಪತ್ರಿಕೆ ಬಾರ್ ನಲ್ಲಿಟ್ಟಿದ್ದು ಉಪನ್ಯಾಸಕ]
"ಮೌಲ್ಯಮಾಪನಕ್ಕೆ ಇಂಗ್ಲಿಷ್ ಪ್ರಾಧ್ಯಾಪಕರನ್ನು ಕಳುಹಿಸದ 353 ಕಾಲೇಜುಗಳ 1 ಮತ್ತು 3ನೇ ಸೆಮಿಸ್ಟರ್ ಫಲಿತಾಂಶವನ್ನೂ ತಡೆಹಿಡಿಯಲಾಗಿದೆ. ಆ ಕಾಲೇಜುಗಳಿಗೆ ಶೋಕಾಸ್ ನೋಟಿಸ್ ನೀಡಲಾಗುವುದು" ಎಂದು ತಿಳಿಸಿದ್ದಾರೆ.
ಆಂತರಿಕ ಮೌಲ್ಯಮಾಪನ ಅಂಕ : ಹಲವು ಕಾಲೇಜುಗಳು ಇನ್ನೂ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿಲ್ಲ. ಈ ಅಂಕ ಬಂದ ಮೇಲೆ ಎಲ್ಲ ಕೋರ್ಸ್ಗಳ ಫಲಿತಾಂಶ ಪ್ರಕಟಿಸಲಾಗುವುದೆಂದು ನಿಂಗೇಗೌಡ ಹೇಳಿದ್ದಾರೆ. [ಕಾಲೇಜುಗಳ ವಿರುದ್ಧ ಬೆಂಗಳೂರು ವಿವಿ ಕುಲಪತಿ ಗರಂ]
ಆಂತರಿಕ ಮೌಲ್ಯಮಾಪನ ಅಂಕದಲ್ಲಿ ಏಕರೂಪತೆ ಕಾಯ್ದುಕೊಳ್ಳಬೇಕೆಂದು ಉನ್ನತ ಶಿಕ್ಷಣ ಪರಿಷತ್ ಸೂಚಿಸಿದೆ. ಇದರಂತೆ ಶೇ. 30ರಷ್ಟು ಆಂತರಿಕ ಮೌಲ್ಯಮಾಪನದ ಅಂಕ ಹಾಗೂ ಶೇ. 70ರಷ್ಟು ಪರೀಕ್ಷಾ ಅಂಕಗಳನ್ನು ನಿಗದಿಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ. ತಿಮ್ಮೇಗೌಡ ತಿಳಿಸಿದ್ದಾರೆ.
ಫೇಲ್ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ : 1964ರಿಂದ 2014ರ ವರೆಗಿನ ಅವಧಿಯಲ್ಲಿ ಓದಿರುವ ಆದರೆ ಪದವಿ ಪೂರ್ಣಗೊಳಿಸದ ಅಭ್ಯರ್ಥಿಗಳಿಗೆ ಹೊಸ ಅವಕಾಶ ಕಲ್ಪಿಸಲಾಗಿದೆ ಎಂದು ಡಾ. ಬಿ. ತಿಮ್ಮೇಗೌಡ ತಿಳಿಸಿದ್ದಾರೆ. [ಬೆಂಗಳೂರು ವಿವಿ ಪ್ರಾಧ್ಯಾಪಕಿಯರಿಗೆ ಲೈಂಗಿಕ ಕಿರುಕುಳ?]
ಈ ಅವಧಿಯಲ್ಲಿ ಅನುತ್ತೀರ್ಣಗೊಂಡವರು ಇಂದಿನ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆದು ಪದವಿ ಪೂರ್ಣಗೊಳಿಸಬಹುದು. ವಿಶ್ವವಿದ್ಯಾಲಯವು ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಈ ಅವಕಾಶ ನೀಡಲಾಗಿದೆ ಎಂದು ಡಾ. ತಿಮ್ಮೇಗೌಡ ಹೇಳಿದ್ದಾರೆ.