ಬೆಂಗಳೂರು ಮನೆಗಳ್ಳರ ಬಂಧನ, ಅಪಾರ ಹಣ ವಶ
ಬೆಂಗಳೂರು, ನ. 3: ವೇಶ್ಯೆಯರ ಸಂಗ ಮಾಡಲು ಅವರಿಗೆ ಹಣ ಬೇಕಿತ್ತು. ಅದಕ್ಕೆ ಆರಿಸಿಕೊಂಡ ದಾರಿ ಮನೆಗಳ್ಳತನ. ಒಂದೆರಡು ದಿನಗಳಿಂದ ಬೀಗ ಹಾಕಿರುವ ಮನೆಗಳೇ ಇವರ ಟಾರ್ಗೆಟ್. ಮನೆ ಮಾಲೀಕರು ಪರ ಊರಿಗೆ ತೆರಳಿದ್ದಾರೆ ಅಥವಾ ಊರಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಒಳನುಗ್ಗಿ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಕಳ್ಳರು ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಚಂದ್ರಲೇಔಟ್, ವಿಜಯನಗರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ ಮತ್ತು ಚಿಕ್ಕಪೇಟೆ ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ 30 ಪ್ರಕರಣ ದಾಖಲಾಗಿದ್ದವು. ಇದಕ್ಕೆ ಸಂಬಂಧಿಸಿ ಆಂಧ್ರ ಮೂಲದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ. [ಆಟೊವನ್ನೇ ದರೋಡೆ ಅಡ್ಡೆ ಮಾಡಿಕೊಂಡಿದ್ದರು]
ಬಂಧಿತರಿಂದ 40.50 ಲಕ್ಷ ರೂ. ಮೌಲ್ಯದ 1 ಕೆಜಿ ಚಿನ್ನಾಭರಣ ಮತ್ತು 7 ಕೆ.ಜಿ. ಬೆಳ್ಳಿ ಆಭರಣಗಳ ವಶಪಡಿಸಿಕೊಳ್ಳಲಾಗಿದೆ. ಲಕ್ಷ್ಮೀನಗರದ ಕಿರ್ಲೊಸ್ಕರ್ ಕಾಲೋನಿ ನಿವಾಸಿ ರಾಜ (40) ಮತ್ತು ಆಂಧ್ರ ತಿರುಪತಿ ಮೂಲದ ಪೆಂಚಾಲ್ ರೆಡ್ಡಿ (33) ಬಂಧಿತರು. ಅಲ್ಲದೇ ಕೃತ್ಯಕ್ಕೆ ಬಳಸುತ್ತಿದ್ದ ಇಂಡಿಕಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಮೇಲೆ ಹಿಂದೆಯೂ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಮೈಸೂರಿನಲ್ಲಿ ಒಮ್ಮೆ ಕಳ್ಳತನಕ್ಕೆ ಯತ್ನಿಸಿದ್ದ ರಾಜನನ್ನು ನಾಗರಿಕರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿದ್ದ. [ಸಾರಿಗೆ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಭೂಪನ ಬಂಧನ]
ಕೆಂಗೇರಿಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಸತ್ಯನಾರಾಯಣ ಎನ್. ಕುದೂರ್ರ ನೇತೃತ್ವದಲ್ಲಿ ಚಂದ್ರಲೇಔಟ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಪಿ.ಎಸ್.ಸುದರ್ಶನ್, ಮಂಜು, ಪಿ.ಸದಾಶಿವಯ್ಯ, ಲಕ್ಷ್ಮೀಶ, ಗುರುಸ್ವಾಮಿ, ಶಾಂತೇಶ್.ಎಸ್.ಗೋದಿ, ಮಂಜುನಾಥ, ಕುಮಾರ್, ಖಾಜಾ ಜಮೀರ್ ಮತ್ತು ಕೇಶವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.