ಬೆಂಗಳೂರು ವಾಹನ ಸವಾರರ ಗಮನಕ್ಕೆ: ಮೇ 5 ರಿಂದ 4 ದಿನ ಪೀಣ್ಯ ಫ್ಲೈಓವರ್ ಬಂದ್, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ
ಬೆಂಗಳೂರಿನ ಪ್ರಮುಖ ಸಂಪರ್ಕ ಸೇತುವೆಯಾಗಿರುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ ( ಮೇಲೆ ಸಂಚರಿಸುವ ವಾಹನ ಸವಾರರಿಗೆ ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಫ್ಲೈಓವರ್ ಕೇಬಲ್ ಅಳವಡಿಕೆ, ದುರಸ್ತಿ ಕಾಮಗಾರಿ ಹಾಗೂ ಅಂತಿಮ ಹಂತದ ಲೋಡ್ ಟೆಸ್ಟಿಂಗ್ ಹಿನ್ನೆಲೆಯಲ್ಲಿ ಮೇ 5 ರಿಂದ ಮೇ 8 ರವರೆಗೆ ಬರೋಬ್ಬರಿ 4 ದಿನಗಳ ಕಾಲ ಪೀಣ್ಯ ಫ್ಲೈಓವರ್ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಬಂದ್ ಆಗಲಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಬೆಂಗಳೂರು ಸಂಚಾರ ಪೊಲೀಸರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
ಭಾರೀ ವಾಹನಗಳ ಸಂಚಾರ ಮತ್ತು ತಾಂತ್ರಿಕ ಸುರಕ್ಷತೆಯ ದೃಷ್ಟಿಯಿಂದ ಈ ಲೋಡ್ ಟೆಸ್ಟಿಂಗ್ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದೆ. ಮೇ 5ರ (ಭಾನುವಾರ) ಮುಂಜಾನೆ 5 ಗಂಟೆಯಿಂದ ಮೇ 8ರ (ಬುಧವಾರ) ಬೆಳಗ್ಗೆ 11 ಗಂಟೆಯವರೆಗೆ ಎಲಿವೇಟೆಡ್ ಫ್ಲೈಓವರ್ ಮೇಲೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

ಈ ಅವಧಿಯಲ್ಲಿ ಫ್ಲೈಓವರ್ನ ಎರಡೂ ಬದಿಗಳಲ್ಲಿ (ನೆಲಮಂಗಲದಿಂದ ಬೆಂಗಳೂರು ಕಡೆಗೆ ಮತ್ತು ಬೆಂಗಳೂರಿನಿಂದ ನೆಲಮಂಗಲ ಕಡೆಗೆ) ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಹೀಗಾಗಿ ನಿತ್ಯ ತುಮಕೂರು ರಸ್ತೆ ಮೂಲಕ ಪ್ರಯಾಣಿಸುವ ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.
ಸಂಚಾರಿ ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಳು ಹೀಗಿವೆ
ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವ ವಾಹನಗಳಿಗೆ: ನೆಲಮಂಗಲ ಕಡೆಯಿಂದ ನಗರದತ್ತ ಆಗಮಿಸುವ ವಾಹನ ಸವಾರರು ಕೆನ್ನಮೆಟಲ್ (Kennametal) ಫ್ಯಾಕ್ಟರಿ ಹತ್ತಿರ ಫ್ಲೈಓವರ್ ಕೆಳಭಾಗದ ರಾಷ್ಟ್ರೀಯ ಹೆದ್ದಾರಿ-4 (NH-4) ಮತ್ತು ಸರ್ವಿಸ್ ರಸ್ತೆಯ ಮೂಲಕ ಸಾಗಬೇಕು. ಅಲ್ಲಿಂದ 8ನೇ ಮೈಲಿ, ದಾಸರಹಳ್ಳಿ, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್.ಆರ್.ಎಸ್ (SRS) ಜಂಕ್ಷನ್, ಗೊರಗುಂಟೆಪಾಳ್ಯ ಮಾರ್ಗವಾಗಿ ಜಾಲಹಳ್ಳಿ ಕ್ರಾಸ್ ಮೂಲಕ ತಮ್ಮ ಗಮ್ಯಸ್ಥಾನ ತಲುಪಬಹುದು.
ಸಿ.ಎಂ.ಟಿ.ಐ (CMTI) ನಿಂದ ನೆಲಮಂಗಲ ಕಡೆಗೆ ಹೋಗುವ ವಾಹನಗಳಿಗೆ: ಬೆಂಗಳೂರು ನಗರದ ಕಡೆಯಿಂದ ನೆಲಮಂಗಲದತ್ತ ಪ್ರಯಾಣಿಸುವ ವಾಹನ ಸವಾರರು ಸಿ.ಎಂ.ಟಿ.ಐ ಬಳಿ ಫ್ಲೈಓವರ್ ಕೆಳಭಾಗದ ಎನ್.ಹೆಚ್.-4 (NH-4) ಮತ್ತು ಸರ್ವಿಸ್ ರಸ್ತೆಯನ್ನು ಬಳಸಬೇಕು. ಅಲ್ಲಿಂದ ಎಸ್.ಆರ್.ಎಸ್ ಜಂಕ್ಷನ್, ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ದಾಟಿ ಪಾರ್ಲೆ-ಜಿ (Parle-G) ಟೋಲ್ ಮೂಲಕ ನೆಲಮಂಗಲದತ್ತ ಪ್ರಯಾಣ ಮುಂದುವರಿಸಬಹುದು.
ಈ ಮುಂಚೆ, ಫ್ಲೈಓವರ್ ಕೇಬಲ್ ಅಳವಡಿಕೆ ಮತ್ತು ಅಂತಿಮ ಲೋಡ್ ಟೆಸ್ಟಿಂಗ್ ಕಾರಣಗಳಿಗಾಗಿ ಏಪ್ರಿಲ್ 13 ರಿಂದ 5 ದಿನಗಳ ಕಾಲ ಪೀಣ್ಯ ಫ್ಲೈಓವರ್ ಬಂದ್ ಮಾಡಲಾಗುವುದು ಎಂದು ಪ್ರಕಟಿಸಲಾಗಿತ್ತು. ಆದರೆ, ಕೆಲವು ತಾಂತ್ರಿಕ ಹಾಗೂ ಅನಿವಾರ್ಯ ಕಾರಣಾಂತರಗಳಿಂದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆ ಪ್ರಕ್ರಿಯೆಯನ್ನು ಮುಂದೂಡಿತ್ತು. ಇದರಿಂದಾಗಿ ಆ ಅವಧಿಯಲ್ಲಿ ವಾಹನಗಳ ಸಂಚಾರಕ್ಕೆ ಎಂದಿನಂತೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಅಂತಿಮ ಹಂತದ ಸುರಕ್ಷತಾ ಪರೀಕ್ಷೆಗಳನ್ನು ನಡೆಸಲು ದಿನಾಂಕ ನಿಗದಿಪಡಿಸಲಾಗಿದ್ದು, ಮೇ 5 ರಿಂದ 8 ರವರೆಗೆ ಕಾಮಗಾರಿ ನಡೆಯಲಿದೆ.
"ಸಂಚಾರಸಲಹೆ/Traffic advisory" pic.twitter.com/Fuw8r1EuJx
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 1, 2026
ಉತ್ತರ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿರುವುದರಿಂದ ಹಾಗೂ ಟ್ರಾಫಿಕ್ ಡೈವರ್ಶನ್ ಇರುವುದರಿಂದ ಇಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಸಾಧ್ಯತೆಯಿದೆ. ಹಾಗಾಗಿ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರಿ ಪೊಲೀಸರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಸಹಕರಿಸುವಂತೆ ಕೋರಲಾಗಿದೆ.












Click it and Unblock the Notifications