Bengaluru Power Cut: ಬೆಂಗಳೂರಿನ ಈ ಭಾಗದಲ್ಲಿ ನಾಳೆ ವಿದ್ಯುತ್ ವ್ಯತ್ಯಯ
ಬೆಂಗಳೂರು, ನವೆಂಬರ್ 28: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿಗೆ ಪವರ್ ಕಟ್ ಸಾಮಾನ್ಯವಾಗಿ ಬಿಟ್ಟಿದೆ. ಗ್ರಾಮೀಣ ಭಾಗಗಳಿಂದ ಹೆಚ್ಚಾಗಿ ಈಗ ನಗರದಲ್ಲೇ ವಿದ್ಯುತ್ ವ್ಯತ್ಯಯ ಆಗುತ್ತಿದೆ. ನಾಳೆ (ನವೆಂಬರ್ 29) ಬುಧವಾರ ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಯುವುದರಿಂದ ನಗರದ ಹಲವು ಭಾಗಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದೊಂದಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಹಲವು ನಿರ್ವಹಣೆ ಕಾರ್ಯಗಳನ್ನು ಕೈಗೊಂಡಿದ್ದು, ನಾಳೆ (ನವೆಂಬರ್ 29) ಬುಧವಾರ ಬೆಂಗಳೂರಿನ ಉತ್ತರ ಭಾಗಗಳಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ ಎಂದು ವರದಿಯಾಗಿದೆ.

ವಿದ್ಯುತ್ ಸರಬರಾಜು ಕಂಪನಿಗಳು ಬೆಂಗಳೂರಿನ ಉತ್ತರ ಭಾಗಗಳಲ್ಲಿ ಕೆಲವು ನಾಳೆ ಕಾಮಾಗಾರಿಗಳನ್ನು ನಡೆಸಲು ಸಜ್ಜಾಗಿದೆ. ಕಾಮಗಾರಿಗಳ ನವೀಕರಣ, ಆಧುನೀಕರಣ, ಡಿಟಿಸಿ ರಚನೆ ನಿರ್ವಹಣೆ, ಲೈನ್ ನಿರ್ವಹಣೆ, ಓವರ್ಹೆಡ್ನಿಂದ ಭೂಮಿಯೊಳಗೆ ಕೇಬಲ್ಗಳನ್ನು ಬದಲಾಯಿಸುವುದು, ರಿಂಗ್ ಮುಖ್ಯ ಘಟಕದ ನಿರ್ವಹಣೆ, ಮರದ ಟ್ರಿಮ್ಮಿಂಗ್, ವಿದ್ಯುತ್ ಕಂಬಗಳ ಅಥವಾ ಟ್ರ್ಯಾನ್ಸ್ ಫಾರ್ಮರ್ಗಳ ಬಳಿ ಬೆಳೆದ ಗಿಡ-ಗಂಟಿಗಳನ್ನು ತೆರವುಗೊಳಿಸುವುದು, ಜಲಸಿರಿ 24×7 ನೀರು ಸರಬರಾಜು ಕೆಲಸ, ಹದಗೆಟ್ಟ ಕಂಬಗಳ ಬದಲಾವಣೆ, ಭೂಮಿಯೊಳಗಿನ ಕೇಬಲ್ ಹಾನಿ ಸರಿಪಡಿಸುವಿಕೆ ಇತ್ಯಾದಿ ಕಾರ್ಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಬುಧವಾರ ಬೆಳಗ್ಗೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ..?
ಬೆಂಗಳೂರಿನ ಉತ್ತರ ಭಾಗವಾದ ಸಹಕಾರನಗರ ಎ, ಬಿ, ಡಿ, ಇ, ಎಫ್ ಮತ್ತು ಜಿ ಬ್ಲಾಕ್ಗಳು, ಅಮೃತಹಳ್ಳಿ, ತಲಕಾವೇರಿ ಲೇಔಟ್, ಬಿಜಿಎಸ್ ಲೇಔಟ್, ನವ್ಯ ನಗರ, ಜಿಕೆವಿಕೆ ಲೇಔಟ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಕೆಂಪಾಪುರ, ಟೆಲಿಕಾಂ ಲೇಔಟ್, ಸಿಂಗಹಳ್ಳಿ II ಹಂತ, ವೆಂಕಟೇಶ್ವರ ನಗರ, ಕಳ್ಳಿಪಾಳ್ಯ, ಅತ್ತೂರು ಲೇಔಟ್, ತಿರುಮನಹಳ್ಳಿ, ಯಶೋದಾ ನಗರ, ಗೋಪಾಲಪ್ಪ ಲೇಔಟ್, ಆರ್ಎಂಝಡ್ ಅಜೂರ್, ಬ್ರಿಗೇಡ್ ಕ್ಯಾಲಾಡಿಯಂ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ.
ಚಿಕ್ಕಬಳ್ಳಾಪುರದಲ್ಲಿ ಇಂದು ವಿದ್ಯುತ್ ವ್ಯತ್ಯಯ
ಚಿಕ್ಕಬಳ್ಳಾಪುರ ಜಿಲ್ಲೆಯ ಮಿಟ್ಟೇಮರಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕಾರಣದಿಂದ ನ.28ರಂದು ಬಾಗೇಪಲ್ಲಿ ತಾಲೂಕಿನ ಪೆದ್ದನಗರ್ಲು, ಜೂಲಪಾಳ್ಯ, ಚೊಕ್ಕಂಪಲ್ಲಿ, ಆಚಗಾನಪಲ್ಲಿ, ಸೂರಪ್ಪಲ್ಲಿ, ವಡಗೆರೆ, ಪೋಲನಾಯಕ ನಪಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಸ್ಕಾಂ ಎಚ್ಚರಿಕೆ ಸೂಚನೆ
ಇನ್ನು ಇತ್ತೀಚಿಗೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಕಾಡುಗೋಡಿಯಲ್ಲಿ ವಿದ್ಯುತ್ ತಂತಿ ತುಳಿದು ತಾಯಿ ಮಗು ಸ್ಥಳದಲ್ಲಿಯೇ ದಾರುಣವಾಗಿ ಸಾವನಪ್ಪಿದ್ದರು. ಇಂತಹ ಪ್ರಕರಣ ನಡೆಯಲು ಪ್ರಮುಖ ಕಾರಣವಾಗಿದ್ದು ಬೆಸ್ಕಾಂನ ಬೇಜವಾಬ್ದಾರಿತನ ಎನ್ನುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ನಿಂದ ಜನರ ಸುರಕ್ಷತೆಗಾಗಿ ಹಲವು ಕಾರ್ಯಗಳಿಗೆ ಮುಂದಾಗಿದೆ.
ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ಪರಿವರ್ತಕಗಳಿಗೆ ಜಾಹೀರಾತು ಫಲಕಗಳನ್ನು ಕಟ್ಟುವುದರಿಂದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿ ವಿದ್ಯುತ್ ಅವಘಡಗಳಿಗೆ ಕಾರಣವಾಗಬಹುದು. ಹೀಗಾಗಿ ವಿದ್ಯುತ್ ಕಂಬಗಳು, ಪಿಲ್ಲರ್ ಬಾಕ್ಸ್ಗಳು, ಟ್ರಾನ್ಸ್ಫಾರ್ಮರ್ಗಳು, ತಂತಿಗಳು ಮತ್ತು ಬೇಲಿಗಳನ್ನು ಮುಟ್ಟುವುದಾಗಲಿ ಅಥವಾ ಹತ್ತಿರ ಹೋಗುವುದಾಗಲಿ ಮಾಡದಿರಿ ಎಂದು ಬೆಸ್ಕಾಂ ಎಚ್ಚರಿಕೆ ನೀಡಿದೆ. ಅಲ್ಲದೇ ಯಾವುದೇ ರೀತಿಯ ವಿದ್ಯುತ್ ಅವಘಡಗಳು ಸಂಭವಿಸಿದಲ್ಲಿ ಬೆಸ್ಕಾಂನ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ ಎಂದು ತಿಳಿಸಿದೆ.












Click it and Unblock the Notifications