ಗೋವಾದ ಕ್ಯಾಸಿನೊದಲ್ಲಿ 10 ಲಕ್ಷ ರೂಪಾಯಿ ಗೆದ್ದ ಬೆಂಗಳೂರಿನ ಟೀ ವ್ಯಾಪಾರಿ: ಆತನಿಂದ 15 ಲಕ್ಷ ಸುಲಿಗೆ ಮಾಡಿದ ಸ್ನೇಹಿತರು
ಬೆಂಗಳೂರು, ಆಗಸ್ಟ್ 11: ಬೆಂಗಳೂರಿನ ತ್ಯಾಗರಾಜನಗರದ ಟೀ ಮಾರಾಟಗಾರ ತಿಲಕ್ ಎಂ ಮಣಿಕಂಠ (32) ಎಂಬುವವರು ಗೋವಾದ ಕ್ಯಾಸಿನೊದಲ್ಲಿ 10 ಲಕ್ಷ ರೂಪಾಯಿ ಗೆದ್ದಿದ್ದಾರೆ. ಆಗಸ್ಟ್ 1 ರಂದು ಗೋವಾದ ಪಣಜಿಯಲ್ಲಿರುವ ಕ್ಯಾಸಿನೊದಲ್ಲಿ ತಿಲಕ್ ಅವರು 10 ಲಕ್ಷ ರೂಪಾಯಿ ಜಾಕ್ಪಾಟ್ ಹೊಡೆದಿದ್ದಾರೆ. ಆ ಬಳಿಕ ಹೋಟೆಲ್ ಉದ್ಯಮಿಯಾಗುವ ತಮ್ಮ ಕನಸು ನನಸಾಗುತ್ತದೆ ಎಂದು ಅವರು ಭಾವಿಸಿದ್ದಾರೆ. ಆದರೆ, ಅವರ ಕನಸು ಭಗ್ನವಾಗಿದೆ. ಇದು ಹೇಗೆಂದು ತಿಳಿಯಬೇಕೆ... 'ಟೈಮ್ಸ್ ಆಫ್ ಇಂಡಿಯಾ' ಪ್ರಕಟಿಸಿರುವ ಈ ವರದಿ ಓದಿ.
ಗೋವಾದ ಕ್ಯಾಸಿನೊದಲ್ಲಿ ತಿಲಕ್ ಜಾಕ್ಪಾಟ್ ಹೊಡೆದಿರುವುದು ಅವರ ಸ್ನೇಹಿತರಿಗೆ ಗೊತ್ತಾಗಿದೆ. ತಿಲಕ್ ಅವರನ್ನು ಆಗಸ್ಟ್ 05ರಂದು ಅಪಹರಿಸಿರುವ ಸ್ನೇಹಿತರು 15 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ತಿಲಕ್ ಅವರು ಬೆಳಗ್ಗೆ ಮತ್ತು ಸಂಜೆ ರಸ್ತೆಬದಿಯಲ್ಲಿ ಚಹಾ ಮಾರಾಟ ಮಾಡುತ್ತಾರೆ. ನಿತ್ಯ ಗ್ರಾಹಕರಿಗೆ ಮನೆಯಲ್ಲಿ ಮಾಂಸಾಹಾರ ತಯಾರಿಸಿ ಕೊಡುವ ತಿಲಕ್, ಜೂ.29ರಂದು ಕೆಲ ಸ್ನೇಹಿತರೊಂದಿಗೆ ಜೂಜಾಡಲು ಗೋವಾಕ್ಕೆ ತೆರಳಿದ್ದರು.
ಸುಮಾರು 15 ಲಕ್ಷ ರೂಪಾಯಿ ಪಣಕ್ಕಿಟ್ಟು 10 ಲಕ್ಷ ರೂಪಾಯಿ ಲಾಭ ಗಳಿಸಿದ್ದರು. ತಿಲಕ್ ಅವರು ಹೆಂಡತಿ ಮತ್ತು ಇಬ್ಬರು ಅಪ್ರಾಪ್ತ ಪುತ್ರರಿಗಾಗಿ ದೊಡ್ಡ ಆಸೆಗಳನ್ನು ಹೊತ್ತುಕೊಂಡು ಗೋವಾದಿಂದ ಮನೆಗೆ ಹಿಂತಿರುಗಿದ್ದರು.
ಮಣಿಕಂಠ ಅವರ ಕೋರಿಕೆಯಂತೆ ಬಹುಮಾನದ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಇದು ಅವರ ಗೆಳೆಯರಿಗೆ ಗೊತ್ತಾಗಿದೆ.

ತಿಲಕ್ ಅವರು ಆಗಸ್ಟ್ 5 ರಂದು ಬೇಕರಿಯೊಂದರ ಬಳಿ ಟೀ ಕುಡಿಯುತ್ತಿದ್ದಾಗ ಆರೋಪಿಗಳು ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿ ಜ್ಞಾನಭಾರತಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.
'ಅಲ್ಲಿ ಅವರು ನನ್ನನ್ನು ಬೆದರಿಸಿ ನನ್ನ ಮೊಬೈಲ್ ಫೋನ್ ಕಿತ್ತುಕೊಂಡರು. ನನ್ನ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದಾಗ ನನ್ನ ಬಳಿ 25 ಲಕ್ಷ ರೂ. ಇರುವುದು ಅವರಿಗೆ ಗೊತ್ತಾಗಿದೆ. ಮತ್ತೊಬ್ಬ ಸ್ನೇಹಿತ ನಾಗೇಂದ್ರನನ್ನು ಸ್ಥಳಕ್ಕೆ ಕರೆಸುವಂತೆ ಕೇಳಿಕೊಂಡರು. ಅವರು ಬಂದ ನಂತರ ತೆಂಗಿನ ಮರಕ್ಕೆ ಕಟ್ಟಿ ಹಾಕಿ ಥಳಿಸಿದರು. ನಂತರ ನೆಲಮಂಗಲದ ಕೋಣೆಗೆ ಕರೆದುಕೊಂಡು ಹೋದರು.

ನನ್ನ ಬಳಿಯಿದ್ದ ಹಣ ತಮಗೆ ಸೇರಿದ್ದು ಎಂದು ಹೇಳಿಕೊಂಡರು. ನನ್ನ ಖಾತೆಯಿಂದ ಅವರ ಖಾತೆಗೆ 15 ಲಕ್ಷ ರೂ. ಜಮಾ ಮಾಡಿಸಿಕೊಂಡರು. ಮರುದಿನ ಬೆಳಿಗ್ಗೆ ನನ್ನನ್ನು ಕಾರಿನಲ್ಲಿ ಬೆಂಗಳೂರಿಗೆ ಕರೆತಂದು ಬಿಟ್ಟರು. ಪೊಲೀಸರಿಗೆ ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿ ಎಚ್ಚರಿಸಿದ್ದಾರೆ' ಎಂದು ತಿಲಕ್ ಹೇಳಿದ್ದಾರೆ.
ಮಣಿಕಂಠ ನೀಡಿದ ದೂರಿನ ಆಧಾರದ ಮೇಲೆ ಹನುಮಂತನಗರ ಪೊಲೀಸರು ತಲೆಮರೆಸಿಕೊಂಡಿರುವ ಕಾರ್ತಿಕ್, ಪಾಂಡು, ಈಶ್ವರ್, ನಿಶ್ಚಲ್ ಹಾಗೂ ಇತರರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಮೂರ್ನಾಲ್ಕು ಬಾರಿ ಗೋವಾದ ಕ್ಯಾಸಿನೋಗಳಿಗೆ ಭೇಟಿ ನೀಡಿದ್ದೆ. ಆದರೆ ಒಮ್ಮೆಯೂ ಆಡಿರಲಿಲ್ಲ ಎಂದು ತಿಲಕ್ ತಿಳಿಸಿದ್ದಾರೆ.












Click it and Unblock the Notifications