Bengaluru Suburban Rail: ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣ ಏನು?
ಬೆಂಗಳೂರು, ಏಪ್ರಿಲ್, 02: ಬಹುನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿ ಕುಂಟುತ್ತಾ ಸಾಗಿದೆ. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನು ಹಾಗೂ ಕಾಮಾಗಾರಿ ಎಲ್ಲಿಗೆ ಬಂದು ನಿಂತಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕೇಂದ್ರ, ರಾಜ್ಯ ಸರ್ಕಾರಗಳ ತಿಕ್ಕಾಟದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಕುಂಟುತ್ತಾ ಸಾಗಿದೆ. ಜನಪ್ರತಿಧಿಗಳ ನಿರ್ಲಕ್ಷ್ಯದಿಂದ ಯೋಜನೆ ನಲುಗುತ್ತಿದೆ. ಇನ್ನು ಇತ್ತೀಗೆಷ್ಟೇ ಕೇಂದ್ರ ರೈಲ್ವೆ ಸಚಿವರು ರಾಜ್ಯ ಸರ್ಕಾರಕ್ಕೆ ಅತೀ ಬೇಗ ಕಾಮಗಾರಿಯನ್ನು ಮುಗಿಸಲು ಸೂಚನೆ ನೀಡಿದ್ದರು. ಆದರೆ ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅದೇ ಆಡಿದ್ದ ಆಟ ಎಂಬಂತೆ ತಮ್ಮ ನಿರ್ಲಕ್ಷತನವನ್ನು ಪ್ರದರ್ಶಿಸುತ್ತಿದ್ದಾರೆ.

ಕೆಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ನಿರ್ಮಾಣ ಆಗುತ್ತಿರುವ ಉಪನಗರ ರೈಲು ಯೋಜನೆಯ ನಾಲ್ಕು ಕಾರಿಡಾರ್ಗಳಿಗೆ ಸಂಪಿಗೆ, ಮಲ್ಲಿಗೆ, ಪಾರಿಜಾತ, ಕನಕ ಎಂದು ಪುಷ್ಟಗಳ ಹೆಸರನ್ನು ಇಡಲಾಗಿದೆ. ಆದರೆ ಕಾಮಗಾರಿ ಮಾತ್ರ ಹೂವಿನ ಹೆಸರಿಷ್ಟಷ್ಟೂ ಸುಲಭವಾಗಿ ಸಾಗುತ್ತಿಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ.
* ಯೋಜನೆಯ ವೆಚ್ಚದ ವಿವರ ಹೀಗಿದೆ
1. ಕೇಂದ್ರ ಸರ್ಕಾರದ ಪಾಲು - 2,479 ಕೋಟಿ ರೂಪಾಯಿ.
2. ರಾಜ್ಯ ಸರ್ಕಾರದ ಪಾಲು - 2,479 ಕೋಟಿ ರೂಪಾಯಿ
3. ಬಾಹ್ಯನಿಧಿ - 7,438 ಕೋಟಿ ರೂಪಾಯಿ
4. ಕೇಂದ್ರ ಜಿಎಸ್ಟಿ, ಕಸ್ಟಮ್ಸ್ ಡ್ಯೂಟಿ - 763 ಕೋಟಿ ರೂಪಾಯಿ
5. ರಾಜ್ಯ ಜಿಎಸ್ಟಿ, ಭೂಮಿ, ವಿವಿಧ ಸುಂಕ - 2,608 ಕೋಟಿ ರೂಪಾಯಿ
6. ಯೋಜನೆಯ ಒಟ್ಟು ವೆಚ್ಚ - 15,767 ಕೋಟಿ ರೂಪಾಯಿ
ಎಲ್ಲಿಗೆ ಬಂತು ಕಾಮಗಾರಿ?: 2018ರಲ್ಲಿ ಬಿಎಸ್ಆರ್ಪಿ ಘೋಷಣೆ ಮಾಡಲಾಗಿದ್ದು, 2020ಕ್ಕೆ ಮಂಜೂರು ಮಾಡಲಾಯಿತು. ಕೋವಿಡ್ ಮತ್ತಿತರ ಕಾರಣಗಳಿಂದ ಎರಡು ವರ್ಷ ಕಾಮಗಾರಿ ನಡೆಯಲಿಲ್ಲ. 2022ರಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದ ಪ್ರಧಾನಿ ಮೋದಿ 2025ಕ್ಕೆ ಪೂರ್ಣಗೊಳಿಸಲು ಗಡುವು ನೀಡಿದ್ದರು.
ನಂತರ ಮಂಜೂರು ಪತ್ರದಲ್ಲಿ 2026ಕ್ಕೆ ಗಡುವು ವಿಸ್ತರಣೆ ಮಾಡಲಾಯಿತು. ಇನ್ನು ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ 2027ಕ್ಕೆ ಕಾಮಗಾರಿಗಳು ಮುಕ್ತಾಯವಾಗುತ್ತದೆ ಎಂದು ಮಾಹಿತಿ ನೀಡಿದ್ದರು. ಹೀಗೆ ಗಡುವುಗಳು ಮುಂದಕ್ಕೆ ಹೋಗುತ್ತಿವೆಯೇ ಹೊರತು ಕಾರಿಡಾರ್ಗಳು ಮಾತ್ರ ಇನ್ನೂ ಸಿದ್ಧವಾಗುತ್ತಿಲ್ಲ. ಮತ್ತೊಂದೆಡೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅತೀ ಬೇಗ ಮುಗಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದರು.
ಹೀಲಲಿ-ರಾಜಾನಕುಂಟೆ ಮಾರ್ಗದ (ಕನಕ ಮಾರ್ಗ) ಕಾರಿಡಾರ್-4 ನಿರ್ಮಾಣಕ್ಕಾಗಿ 193 ಹೆಕ್ಟೇರ್ ಜಮೀನನ್ನು ನೈರುತ್ಯ ರೈಲ್ವೆಯು ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿಗೆ (ಕೆ-ರೈಡ್) ಹಸ್ತಾಂತರ ಮಾಡಬೇಕಿತ್ತು. ಉಳಿದ 34 ಹೆಕ್ಟೇರ್ ಅನ್ನು ಖಾಸಗಿಯವರಿಂದ ಸ್ವಾಧೀನ ಪಡಿಸಿಕೊಳ್ಳಬೇಕಿತ್ತು.
ರೈಲ್ವೆಯಿಂದ ಜಮೀನು ಹಸ್ತಾಂತರ ಆಗದ ಹಿನ್ನೆಲೆ ಟೆಂಡರ್ ವಿಳಂಬ ಆಗಿತ್ತು. ಘೋಷಣೆ ಪ್ರಕಾರ 2023ರ ಡಿಸೆಂಬರ್ ಅಂತ್ಯದೊಳಗೆ ಟೆಂಡರ್ ಕರೆಯಬೇಕಿದ್ದು, ಇದಕ್ಕೆ ರೈಲ್ವೆ ಅಧಿಕಾರಿಗಳೂ ಸ್ಪಂದನೆ ನೀಡುತ್ತಿಲ್ಲ. ಸಂಸದರೂ ಒತ್ತಡ ಹಾಕಲಿಲ್ಲ. ಕೊನೆಗೆ ಶೀಘ್ರ ಜಮೀನು ಹಸ್ತಾಂತರಿಸಲಾಗುವುದು ಎಂಬ ಭರವಸೆ ಆಧಾರದಲ್ಲಿ ಡಿಸೆಂಬರ್ ಒಳಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಆದರೆ, ಕಾಮಗಾರಿ ಮಾತ್ರ ಇನ್ನೂ ಆರಂಭ ಆಗಿಲ್ಲ ಎನ್ನವ ಮಾಹಿತಿ ಲಭ್ಯವಾಗಿದೆ.
ಇನ್ನು ರಾಜ್ಯ ಸರ್ಕಾರ ಕಾಮಗಾರಿ ವಿಳಂಬಕ್ಕೆ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಕಾರಣ ಎಂದು ಎಂದು ಆರೋಪಿಸಿ ಗುಮ್ಮನಂತೆ ಸುಮ್ಮನಾಗಿಬಿಟ್ಟಿದೆ. 34 ಹೆಕ್ಟೇರ್ ಜಮೀನನ್ನು ಖಾಸಗಿ ಅವರಿಂದ ಸ್ವಾಧೀನಪಡಿಸಿಕೊಂಡು ಕೆ-ರೈಡ್ ನೀಡಬೇಕಿದ್ದು, ಈ ಬಗ್ಗೆ ಶಾಸಕರಾಗಲಿ, ಸಚಿವರಾಗಲಿ ಏನು ಬಾಯಿ ಬಿಡುತ್ತಿಲ್ಲ.
ಬೆಂಗಳೂರಿನಲ್ಲಿ ಸಂಚಾರ ಕಡಿಮೆ ಮಾಡುವ ಈ ಯೋಜನೆಯು ಪ್ರಮುಖವಾಗಿ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿದೆ. ಈ ಮೂರು ಕ್ಷೇತ್ರಗಳ ಸಂಸದರು, ಶಾಸಕರು ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆಗಾಗಾ ಮಾತ್ರ ಟ್ವೀಟ್ನಲ್ಲಿ ಎರಡು ಸಾಲು ಬರೆದದ್ದು ಬಿಟ್ಟರೆ ಇತ್ತ ಗಮನಹರಿಸಿದ್ದೇ ಕಡಿಮೆಯಾಗಿಬಿಟ್ಟಿದೆ.
ಇನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವಹಿಸಿದಷ್ಟು ಕಾಳಜಿಯನ್ನು ಸ್ಥಳೀಯ ಸಂಸದರು ವಹಿಸಿಲ್ಲ ಎಂಬುದು ರೈಲ್ವೆ ಹೋರಾಟಗಾರರ ಆರೋಪವಾಗಿದೆ. ಉಪನಗರ ರೈಲು ಯೋಜನೆಯಲ್ಲಿರುವ ನಾಲ್ಕು ಕಾರಿಡಾರ್ಗಳಲ್ಲಿ ಚಿಕ್ಕಬಾಣವರ-ಬೆನ್ನಿಗಾನಹಳ್ಳಿ ಮಾರ್ಗದ (ಮಲ್ಲಿಗೆ) 2ನೇ ಕಾರಿಡಾರ್ ಕಾಮಗಾರಿಯನ್ನು ಕೆ-ರೈಡ್ ಮೊದಲು ಕೈಗೆತ್ತಿಕೊಂಡಿದ್ದು, ಇದೀಗ ಇದೊಂದೇ ಕಾಮಗಾರಿ ನಡೆಯುತ್ತಿರುವುದು ಎನ್ನುವ ಅಪ್ಡೇಟ್ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ನಗರ-ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಕಾರಿಡಾರ್-1 (ಸಂಪಿಗೆ ಮಾರ್ಗ), ಕೆಂಗೇರಿ-ವೈಟ್ಫೀಲ್ಡ್ ಸಂಪರ್ಕದ ಕಾರಿಡಾರ್-3 (ಪಾರಿಜಾತ) ಕಾಮಗಾರಿ ಟೆಂಡರ್ ಹಂತಕ್ಕೂ ಬಂದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ಕುರಿತು ರೈಲ್ವೆ ಹರಾಟಗಾರರು ರಾಜ್ಯ ಸಂಸದರು ಹಾಗೂ ಕೇಂದ್ರ ರೈಲ್ವೆ ಇಲಾಖೆ ವಿರುದ್ಧ ಕೆಂಡಕಾರುತ್ತಿದ್ದಾರೆ.












Click it and Unblock the Notifications