ಬೆಂಗಳೂರಿನಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಗೆ ಟಿಡಿಪಿ ಬೆಂಬಲಿಗರಿಂದ ಬೆದರಿಕೆ, ಆಂಧ್ರ ರಾಜಕಾರಣಿಗಳ ವಿಚಾರಕ್ಕೆ ದಾಂಧಲೆ
ಆಂಧ್ರಪ್ರದೇಶದ ರಾಜಕೀಯ ನಾಯಕರ ಕುರಿತು ಹಾಸ್ಯ ಮಾಡಿದ ಆರೋಪದ ಮೇಲೆ ಸ್ಟ್ಯಾಂಡಪ್ ಕಾಮಿಡಿಯನ್ ಶರತ್ ಉದಯ್ ಅವರಿಗೆ ಬೆಂಗಳೂರಿನಲ್ಲಿ ಟಿಡಿಪಿ ಬೆಂಬಲಿಗರು ಸಾರ್ವಜನಿಕವಾಗಿ ಅವಮಾನಿಸಿ, ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಶನಿವಾರ ಸಂಜೆ 7 ಗಂಟೆಗೆ ಕೋರಮಂಗಲದಲ್ಲಿ ನಡೆಯುತ್ತಿದ್ದ ಪ್ರದರ್ಶನದ ವೇಳೆ ಈ ರಾದ್ಧಾಂತ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.
ಶರತ್ ಉದಯ್ ತಮ್ಮ ಪ್ರದರ್ಶನ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ, ಪ್ರೇಕ್ಷಕರ ಸಾಲಿನಲ್ಲಿದ್ದ ವ್ಯಕ್ತಿಯೊಬ್ಬ ವೇದಿಕೆ ಹತ್ತಿರ ಬಂದು, "ನಾನು ನಿಮ್ಮ ಅಭಿಮಾನಿ, ನಿಮ್ಮ ಕಾಮಿಡಿ ಇಷ್ಟಪಡುತ್ತೇನೆ. ಆದರೆ ಒಂದು ಕಾರ್ಯಕ್ರಮದಲ್ಲಿ ನೀವು ನಮ್ಮ ನಾಯಕನನ್ನು ಅವಮಾನಿಸಿದ್ದೀರಿ" ಎಂದು ಗಲಾಟೆ ಆರಂಭಿಸಿದ್ದಾನೆ. ಕೂಡಲೇ ಆತನ ಜೊತೆಗೆ ಇನ್ನೂ ಐದಾರು ಜನ ಸೇರಿಕೊಂಡು ಶರತ್ ಅವರನ್ನು ಸುತ್ತುವರೆದು ಏಕವಚನದಲ್ಲಿ ನಿಂದಿಸಲು ಶುರು ಮಾಡಿದ್ದಾರೆ.

ಹಳೆಯ ಜೋಕ್ಗೆ ಕ್ಷಮೆ
ಸುಮಾರು ಎರಡು ವರ್ಷಗಳ ಹಿಂದೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಗ್ಗೆ ಮಾಡಿದ್ದ ಹಾಸ್ಯದ ವಿಚಾರವಾಗಿ ಈ ಗಲಾಟೆ ನಡೆದಿದೆ. ಈ ಕುರಿತು ಶರತ್ ಈ ಹಿಂದೆಯೇ ಕ್ಷಮೆಯಾಚಿಸಿದ್ದರೂ ಸಹ, ಕಿಡಿಗೇಡಿಗಳು ಬಿಡದೆ ಪ್ರೇಕ್ಷಕರ ಮುಂದೆಯೇ ಚಂದ್ರಬಾಬು ನಾಯ್ಡು ಮತ್ತು ಸಚಿವ ನಾರಾ ಲೋಕೇಶ್ ಅವರ ಹೆಸರನ್ನು ಹೇಳಿ ಮತ್ತೊಮ್ಮೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. "ಚಂದ್ರಬಾಬು ನಾಯ್ಡು ಅವರ ಮೇಲಿನ ನಕ್ಸಲೈಟ್ ದಾಳಿಯ ಬಗ್ಗೆ ಹಾಸ್ಯ ಮಾಡಲು ನಿಮಗೆ ಎಷ್ಟು ಧೈರ್ಯ?" ಎಂದು ಕಿಡಿಗೇಡಿಗಳು ಕಲಾವಿದನನ್ನು ದಬಾಯಿಸಿದ್ದಾರೆ.
ಜೈ ಟಿಡಿಪಿ ಘೋಷಣೆಗೆ ನಿರಾಕರಣೆ
ದೌರ್ಜನ್ಯವೆಸಗಿದ ಗುಂಪು ಶರತ್ ಅವರಿಗೆ "ಜೈ ಟಿಡಿಪಿ, ಜೈ ಲೋಕೇಶ್ ಅಣ್ಣ" ಎಂದು ಘೋಷಣೆ ಕೂಗುವಂತೆ ಬಲವಂತಪಡಿಸಿದೆ. ಆದರೆ ಶರತ್ ಇದಕ್ಕೆ ನಿರಾಕರಿಸಿದ್ದು, ತಾವು ಕೇವಲ ಒಬ್ಬರ ಬಗ್ಗೆ ಅಲ್ಲ, ವಿರೋಧ ಪಕ್ಷವಾದ ವೈಎಸ್ಆರ್ ಕಾಂಗ್ರೆಸ್ ಬಗ್ಗೆಯೂ ಹಾಸ್ಯ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಕೊನೆಗೆ "ಇದು ನಿನಗೆ ಕೊನೆಯ ಎಚ್ಚರಿಕೆ" ಎಂದು ಗುಂಪು ಬೆದರಿಕೆ ಹಾಕಿ ಅಲ್ಲಿಂದ ನಿರ್ಗಮಿಸಿದೆ.
TDP supporters disrupted comedian Sarat Uday’s stand-up show in Bengaluru’s Koramangala on April 25, 2026.
— Ghar Ke Kalesh (@gharkekalesh) April 27, 2026
They stormed the stage and demanded a fresh on-stage apology for jokes about Andhra Pradesh CM Chandrababu Naidu made over two years ago, despite Uday having publicly… pic.twitter.com/NlqsJrTeVx
ಆಂಧ್ರಪ್ರದೇಶದ ಆಡಳಿತಾರೂಢ ನಾಯಕರ ಬಗ್ಗೆ ಹಾಸ್ಯ ಮಾಡಿದ ಕಾರಣಕ್ಕೆ ಕಲಾವಿದರು ಬೆದರಿಕೆ ಎದುರಿಸುತ್ತಿರುವ ಮೂರನೇ ಘಟನೆ ಇದಾಗಿದೆ. ಇದಕ್ಕೂ ಮೊದಲು ಕಾಮಿಡಿಯನ್ಗಳಾದ ಅನುದೀಪ್ ಕಾಟಿಕಲ ಮತ್ತು ರಫೀಕ್ ಮೊಹಮ್ಮದ್ ಅವರನ್ನು ಇದೇ ರೀತಿಯ ಕಾರಣಕ್ಕೆ ಆಂಧ್ರ ಪೊಲೀಸರು ಬಂಧಿಸಿದ್ದರು.
ಬೆಂಗಳೂರಿನ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಶರತ್, ಈ ವಿಷಯ ಈಗಾಗಲೇ ಕ್ಷಮೆಯಾಚನೆಯೊಂದಿಗೆ ಇತ್ಯರ್ಥವಾಗಿತ್ತು ಎಂದು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದರು. ಈ ಇಡೀ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಚರ್ಚೆ ಆರಂಭವಾಗಿದೆ.












Click it and Unblock the Notifications