Bengaluru Rains : ಬೆಂಗಳೂರು: ಕೆಲಸ ಮುಗಿಸಿ ಮನೆಗೆ ಹೊರಟವರನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿದ ವರುಣ
ಬೆಂಗಳೂರು, ಏಪ್ರಿಲ್. 03: ತಮ್ಮ ತಮ್ಮ ಕೆಲಸ ಮುಗಿಸಿ ಮನೆಗೆ ಆತುರದಿಂದ ಹೊರಟ್ಟಿದ್ದ ಜನರನ್ನು ವರುಣ ಅಲ್ಲಲ್ಲೇ ಸ್ಟಾಪ್ ಕೊಡುವಂತೆ ಮಾಡಿಬಿಟ್ಟಿದ್ದಾನೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ಶುರುವಾದ ಮಳೆಗೆ ಸಿಲಿಕಾನ್ ಸಿಟಿಯ ಮಂದಿ ಒಂದು ಕ್ಷಣ ಆತಂಕಕ್ಕೆ ಒಳಗಾಗಿದ್ದಂತು ಸತ್ಯ.
ಹೌದು, ಸಂಜೆಯಿಂದ ಕೊಂಚ ಮಟ್ಟಿಗೆ ಮೋಡ ಆವರಿಸಿದ್ದರೂ ಈ ಪಾಟಿ ಏಕಾಏಕಿ ಮಳೆ ಸುರಿಯುತ್ತದೆ ಎಂಬ ಅಂದಾಜು ಯಾರಿಗೂ ಇರಲಿಲ್ಲ ಬಿಡಿ. ಒಮ್ಮೇಲೆ ಬಿರುಗಾಲಿ ಸಹಿತಿ ಧೋ ಎಂದು ಸುರಿದ ಮಳೆಯಿಂದಾಗಿ ಜನರು ಎಲ್ಲಿದ್ದರೂ ಅಲ್ಲೇ ನಿಲ್ಲುವಂತಾಗಿದೆ. ಬಸ್ ಸ್ಟಾಪ್ಗಳು, ಮೆಟ್ರೋ ನಿಲ್ದಾಣಗಳು, ರೈಲ್ವೇ ಸ್ಟೇಷನ್ಗಳಲ್ಲಿ ಇಂದು ಜನವೋ ಜನ.

ಕೋರಮಂಗಲ, ಲಾಲ್ ಬಾಗ್, ಸರ್ಜಾಪುರ ರಸ್ತೆ, ಮಡಿವಾಳ ಕ್ರಾಸ್, ಹೊಸೂರು ರಸ್ತೆ, ಜಯನಗರ, ನಿಮ್ಹಾನ್, ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ವಿಧಾನಸೌಧ ಸುತ್ತಾಮುತ್ತಾ ಒಂದೇ ಸಮನೇ ಒಂದು ಗಂಟೆಗೂ ಹೆಚ್ಚು ಕಾಲ ವರುಣ ಅಬ್ಬರಿಸಿದ್ದಾನೆ. ಜನರು ಮನೆಗಳಿಗೆ ತೆರಳಲೂ ಆಗದೇ ಅಲ್ಲಲ್ಲೇ ಆಶ್ರಯ ಪಡೆದಿದ್ದಾರೆ.
ಈ ಜೋರು ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರು ಬೈಕ್ ಓಡಿಸಲು ಆಗದೇ ರಸ್ತೆ ಬದಿಯ ಅಂಗಡಿಗಳ ಮುಂದೆ ಆಶ್ರಯ ಪಡೆದಿದ್ದರು. ಇನ್ನು, ಮಳೆಯ ಕಾರಣದಿಂದ ಪ್ರತಿ ಬಾರಿ ಉಂಟಾಗುವಂತೆಯೇ ಟ್ರಾಫಿಕ್ ಜಾಮ್ ವಾಹನ ಸವಾರರನ್ನು ಮಳೆಯಲ್ಲಿ ಮತ್ತಷ್ಟು ಹೊತ್ತು ನಿಲ್ಲುವಂತೆ ಮಾಡಿತ್ತು. ಮೆಟ್ರಫ ನಿಲ್ದಾಣಗಳಿಂದ ಜನ ಹೊರಗೆ ಹೋಗಲು ಆಗದೇ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದರು.
ಇನ್ನು, ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕರ್ನಾಟಕದ ಉತ್ತರ ಒಳನಾಡು ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ಏಪ್ರಿಲ್ 4ರ ಮಂಗಳವಾರದಿಂದ ಐದು ದಿನ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗಿದೆ.

ರಾಜ್ಯದ ಉತ್ತರ ಒಳನಾಡು ಸೇರಿದಂತೆ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಆಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಾಮರಾಜನಗರ, ರಾಮನಗರ ಮತ್ತು ಕೋಲಾರ, ಕೊಡಗು, ಮೈಸೂರು ಜಿಲ್ಲೆಗಳ ಹಲವೆಡೆ ದಿನ ಬಿಟ್ಟು ದಿನ ಮುಂದಿನ ಏಪ್ರಿಲ್ 8ರವರೆಗೆ ಮಳೆ ಬರಲಿದೆ. ಬೆಳ್ಳಗೆ ಬಿಸಿಲಿದ್ದರೂ ಸಂಜೆ ವೇಳೆಗೆ ಬಿಸಿಲು ಮರೆಯಾಗಿ ಗುಡುಗು ಮಿಂಚು ಸಹಿತ ಜೋರು ಮಳೆ ಅಬ್ಬರಿಸಲಿದೆ.
ಏಪ್ರಿಲ್ 5 ರವರೆಗೆ ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ. ಆದರೆ ದಕ್ಷಿಣ ಒಳನಾಡಿಗೆ ಐದು ದಿನವೂ ಬಿರುಸಿನ ಮಳೆ ಬರಲಿದೆ. ಗಾಳಿಯು ಸಹ ಈ ಅವಧಿಯಲ್ಲಿ ವೇಗವಾಗಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಕೇಂದ್ರ ಮಾಹಿತಿ ನೀಡಿದೆ.
ಏಪ್ರಿಲ್ 6 ರಿಂದ ಮೂರು ದಿನ ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ, ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹಗುರ ಇಲ್ಲವೇ ಸಾಧಾರಣವಾಗಿ ಮಳೆ ಸುರಿಯಲಿದೆ. ಇನ್ನೂ ಕರಾವಳಿ ಭಾಗದಲ್ಲಿ ಏಪ್ರಿಲ್ 7ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಮಳೆ ಬಂದರೆ, ಮರುದಿನ ಏಪ್ರಿಲ್ 8 ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಮಳೆಯಾಗಲಿದೆ.












Click it and Unblock the Notifications