1 ದಶಕದಲ್ಲಿ ಬೆಂಗಳೂರು ಜನಸಂಖ್ಯೆ 2.5 ಕೋಟಿಗೆ ಏರಿಕೆ: ಬಿಬಿಎಂಪಿ
ಬೆಂಗಳೂರು, ನವೆಂಬರ್ 18: ಬೆಂಗಳೂರಿನ ಜನಸಂಖ್ಯೆ ಮುಂದಿನ ಒಂದು ದಶಕದಲ್ಲಿ ದುಪಟ್ಟಾಗಿ ಹೆಚ್ಚಳವಾಗುವುದರಿಂದ ರಾಜ್ಯ ರಾಜಧಾನಿಗೆ ಮೂಲಸೌಕರ್ಯ ಸಮಸ್ಯೆಗೆ ಆತಂಕ ಎದುರಾಗಿದೆ.
ಹೌದು, ಬೆಂಗಳೂರಿನ ಜನಸಂಖ್ಯೆ ಈಗ 1.3ಕೋಟಿ ಎನ್ನಲಾಗುತ್ತಿದೆ. ಇದು ಮುಂದಿನ ಹತ್ತು ವರ್ಷಗಳಲ್ಲಿ ದುಪ್ಪಟ್ಟಾಗಲಿದೆ. ಅಂದರೆ ಸುಮಾರು 2.5 ಕೋಟಿಯಷ್ಟು ಜನಸಂಖ್ಯೆ ಹೆಚ್ಚಾಗಲಿದೆ.
ಈಗಿದ್ದಷ್ಟೇ ಭೌಗೋಳಿಕ ವ್ಯಾಪ್ತಿ ಇರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಅಷ್ಟೂ ಜನರಿಗೆ ಮೂಲಸೌಕರ್ಯ ಒದಗಿಸುವುದು ಕಷ್ಟವಾಗಬಹುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆತಂಕ ವ್ಯಕ್ತಪಡಿಸಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಎರಡನೇ ದಿನದ ಬೆಂಗಳೂರು ಟೆಕ್ ಶೃಂಗಸಭೆ (ಬಿಟಿಎಸ್22) 2022ರಲ್ಲಿ ಬಿಬಿಂಪಿ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ ಮಾತನಾಡಿದರು. ಬೆಂಗಳೂರಿನಲ್ಲಿ ಅವೈಜ್ಞಾನಿಕ ನಗರೀಕರಣದಿಂದಾಗಿ ಭವಿಷ್ಯದಲ್ಲಿ ನಗರ ನಿವಾಸಿಗಳ ಆರೋಗ್ಯ ಮೇಲೂ ದುಷ್ಪರಿಣಾಮ ಭೀರುವ ಸಾಧ್ಯತೆ ಇದೆ. ಆರೋಗ್ಯ ನಿರ್ವಹಣೆ ಸವಾಲಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರು ನಿವಾಸಿಗಳು ಆರೋಗ್ಯ ಸದಾ ಉತ್ತಮವಾರಬೇಕಾದರೆ ಉತ್ತಮ ನಿರ್ವಹಣೆ, ಪೂರಕ ನಿಯಮಗಳು ಹಾಗೂ ಆಡಳಿತ ಇರುವುದು ಅತ್ಯಗತ್ಯ. ಆರೋಗ್ಯ ಎಂಬುದು ಮನುಷ್ಯ ಜೀವಿಗೆ ಮಾತ್ರ ಸೀಮಿತವಾಗಿಲ್ಲ. ಮನುಷ್ಯ ವಾಸಿಸುವ ಸ್ಥಳಗಳಲ್ಲೇ ವಾಸಿಸುವ ಅನೇಕ ಪ್ರಾಣಿಗಳ ಆರೋಗ್ಯವು ಸರಿಯಾಗಿರಬೇಕು ಎಂದರು.
ಶೇ.75ರಷ್ಟು ರೋಗ ಪ್ರಾಣಿಗಳಿಂದ ಹರಡುತ್ತವೆ
ಇತ್ತೀಚಿನ ವರ್ಷಗಳಲ್ಲಿ ಮನುಷ್ಯರಿಗೆ ಚಿಕೂನ್ಗುನ್ಯಾ ಮತ್ತು ಡೆಂಗ್ಯೂ ನಂತಹ ಅನೇಕ ಕಾಯಿಲೆಗಳು ಪ್ರಾಣಿಗಳಿಂದ ಹರಡುತ್ತಿವೆ. ಇಂತಹ ಕಾಯಿಲೆಗಳಿಂದ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿದ್ದಾನೆ. ಮುಖ್ಯವಾಗಿ ಕಾಯಿಲೆ ತರುವ ಸೋಂಕುಗಳು ಶೇ. 75ರಷ್ಟು ಅಪಾಯಕಾರಿ ಪ್ರಾಣಿಗಳಿಂದ ಹರಡುತ್ತದೆ ಎಂದು ಅವರು ತಿಳಿಸಿದರು.
ನಗರದಲ್ಲಿ ಸುವ್ಯವಸ್ಥಿತವಾಗಿರಬೇಕಾದ ಘನತ್ಯಾಜ್ಯ, ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯಗಳ ಮಿತಿ ಮೀರಿದೆ. ಭವಿಷ್ಯದ ದೃಷ್ಟಿಯಿಂದ ಮಾಲಿನ್ಯ ಮಟ್ಟ ತಗ್ಗಿಸುವ ಪ್ರಯತ್ನ ಸಫಲವಾಗಿಲ್ಲ. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ವಾರ್ಡ್ ಮತ್ತು ಸಮುದಾಯ ಮಟ್ಟದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಡಾ. ತ್ರಿಲೋಕ್ ಚಂದ್ರ ಹೇಳಿದರು.
ಟಾಟಾ ಇನ್ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ ಸೊಸೈಟಿ ಪ್ರಧಾನ ವಿಜ್ಞಾನಿ ಡಾ. ಫರಾಹ್ ಇಶ್ತಿಯಾಕ್ ಮಾತನಾಡಿ, "ವೇಗವಾದ ನಗರೀಕರಣದ ಪರಿಣಾಮ ಮನಷ್ಯನಿಗೆ ಮೇಲೆ ಉಂಟಾಗುತ್ತಿದೆ. ಇದರಿಂದ ಅನೇಕ ಸಮಸ್ಯೆಗಳು ಸಷ್ಟಿಯಾಗುತ್ತವೆ. ನಗರ ಪರಿಸರವನ್ನು ಬದಲಾಯಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ತುರ್ತು ಅಗತ್ಯವಿದೆ. ಮುಖ್ಯವಾಗಿ ನಗರದ ಕೆರೆಗಳು, ಜಲಮೂಲಗಳು ಮತ್ತು ಇತರ ನೀರಿನ ಮೂಲಗಳನ್ನು ಸಂರಕ್ಷಿಸಬೇಕು. ಅಲ್ಲದೇ ಸಂರಕ್ಷಿಸುವ ಜೊತೆಗೆ ಆಗಾಗ ಸ್ವಚ್ಛಗೊಳಿಸುತ್ತಿರಬೇಕು" ಎಂದು ವಿವರಿಸಿದರು.