ಬೆಂಗಳೂರಿನಲ್ಲಿ ಸರಗಳ್ಳನಿಗೆ ಪೊಲೀಸರಿಂದ ಗುಂಡೇಟು
ಬೆಂಗಳೂರು, ಜ.7 : ಮಹಿಳೆಯ ಸರ ದೋಚಿ ಪರಾರಿಯಾಗುತ್ತಿದ್ದವನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ಸುಮನಹಳ್ಳಿ ಬಳಿ ಬುಧವಾರ ಬೆಳಗ್ಗೆ ನಡೆದಿದೆ. ಗಾಯಗೊಂಡವನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ಗುಂಡಿನಿಂದ ಗಾಯಗೊಂಡವರನ್ನು ಸಂಪತ್ ಎಂದು ಗುರುತಿಸಲಾಗಿದೆ. ಈತನ ಜೊತೆ ಇದ್ದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಕಾಮಾಕ್ಷಿ ಪಾಳ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಗಾಯಗೊಂಡಿರುವ ಸಂಪತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. [ಟೆಕ್ಕಿಗೆ ಚಾಕುವಿನಿಂದ ಇರಿದು ಸರ ದರೋಡೆ]

ಬುಧವಾರ ಬೆಳಗ್ಗೆ 9.30ರ ಸುಮಾರಿಗೆ ಶ್ರೀಗಂಧಕಾವಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ಶಾಂತಮ್ಮ ಎಂಬುವವರ ಸರವನ್ನು ಕದ್ದು ಸಂಪತ್ ಮತ್ತು ಇತರ ಇಬ್ಬರು ಬೈಕ್ನಲ್ಲಿ ಪರಾರಿಯಾಗಲು ಯತ್ನಿಸುದ್ದರು. ಕಳ್ಳರು ಸರಕ್ಕೆ ಕೈಹಾಕಿದ ತಕ್ಷಣದ ಶಾಂತಮ್ಮ ಅವರು ಕಿರುಚಿಕೊಂಡಿದ್ದಾರೆ.
ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಕಳ್ಳರನ್ನು ಬೆನ್ನಟ್ಟಿದ್ದಾರೆ. ಆಗ ಕಳ್ಳರು ಖಾರದ ಪುಡಿ ಎರಚಿ, ಡ್ರಾಗರ್ ತೋರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಪೊಲೀಸರು ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಸುಮನಹಳ್ಳಿ ಬಳಿ ಸರಗಳ್ಳರನ್ನು ಪೊಲೀಸರು ಸುತ್ತವರೆದಿದ್ದಾರೆ.
ಆಗ ಕಳ್ಳರು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದಾಗ, ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಆಗ ಸಂಪತ್ ಕಾಲಿಗೆ ಗುಂಡು ಬಿದಿದ್ದರೆ, ಉಳಿದ ಇಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಸಂಪತ್ನನ್ನು ವಶಕ್ಕೆ ಪಡೆದಿರುವ ಕಾಮಾಕ್ಷಿಪಾಳ್ಯ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಸರಗಳ್ಳರ ಕಾಟ ಹೆಚ್ಚಾಗಿತ್ತು. ಸೋಮವಾರ ಮುಂಜಾನೆ ಎರಡು ಕಡೆ ಸರಗಳ್ಳರು ಕೈ ಚಳಕ ತೋರಿಸಿದ್ದರು. ಮಹಾಲಕ್ಷ್ಮೀ ಲೇಔಟ್ ಮತ್ತು ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರನ್ನು ದೋಚಿ ಪರಾರಿಯಾಗಿದ್ದರು.












Click it and Unblock the Notifications