ಉಪ ಸಮರ: ಮತ ಎಣಿಕೆ ದಿನ ಆರ್ ಆರ್ ನಗರದಲ್ಲಿ ನಿಷೇಧಾಜ್ಞೆ!
ಬೆಂಗಳೂರು, ನ. 07: ಜಿದ್ದಾಜಿದ್ದಿಯ ಉಪ ಚುನಾವಣೆ ನಡೆದಿರುವ ಆರ್ ಆರ್ ನಗರದಲ್ಲಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಮಾಡಿದ್ದಾರೆ. ಇದೇ ನವೆಂಬರ್ 10 ರಂದು ಆರ್ ಆರ್ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಹೀಗಾಗಿ ನವೆಂಬರ್ 10ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸ್ ಆಯುಕ್ತರು ಆದೇಶ ಮಾಡಿದ್ದಾರೆ.
ಆರ್ ಆರ್ ನಗರದ ಹಲಗೇವಡೇರಹಳ್ಳಿಯ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಗೆದ್ದ ಅಥವಾ ಸೋತ ವ್ಯಕ್ತಿಗಳ ಪರ-ವಿರೋಧವಾಗಿ ಯಾವುದೇ ಮೆರವಣಿಗೆ ಅಥವಾ ಪ್ರತಿಭಟನೆ ಮಾಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಕಮಲ್ ಪಂತ್ ತಿಳಿಸಿದ್ದಾರೆ. ಹೀಗಾಗಿ 5ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ, ಜೊತೆಗೆ ಯಾವುದೇ ಮಾರಕಾಸ್ತ್ರಗಳನ್ನು ಸಾಗಣೆ ಮಾಡುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ರಾಜಕೀಯ ಮೆರವಣಿಗೆಗಳನ್ನು ನಡೆಸುವಂತಿಲ್ಲ, ಘೋಷಣೆ ಹಾಕುವಂತಿಲ್ಲ ಎಂದು ಸೂಚಿಸಲಾಗಿದೆ.

ಆದರೆ ಶವಸಂಸ್ಕಾರ, ಮದುವೆ, ದೇವಸ್ಥಾನ, ಮಸೀದಿ, ಚರ್ಚ್ಗಳಿಗೆ ಪ್ರಾರ್ಥನೆಗೆ ತೆರಳುವವರಿಗೆ ಅನುಮತಿ ಕೊಡಲಾಗಿದೆ. ಇದೇ ನವೆಂಬರ್ 3 ರಂದು ಆರ್ ಆರ್ ನಗರ ಉಪ ಚುನಾವಣೆ ನಡೆದಿತ್ತು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕುಸುಮಾ ಎಚ್., ಬಿಜೆಪಿಯಿಂದ ಮುನಿರತ್ನ ಹಾಗೂ ಜೆಡಿಎಸ್ ಪಕ್ಷದಿಂದ ವಿ. ಕೃಷ್ಣಮೂರ್ತಿ ಸ್ಪರ್ಧೆ ಮಾಡಿದ್ದಾರೆ.












Click it and Unblock the Notifications