ವಿಭೂತಿ ಹಚ್ಕೋಬೇಡಿ, ದಾರ ಕಟ್ಕೋಬೇಡಿ: ಪೊಲೀಸ್ ಇಲಾಖೆ ಫರ್ಮಾನು
ಪೊಲೀಸ್ ಕೈಪಿಡಿಯಲ್ಲಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ಬೆಂಗಳೂರು ನಗರ ವ್ಯಾಪ್ತಿಯ ಎಂಟು ವಲಯಗಳ ಡಿಸಿಪಿಗಳಿಗೆ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಮೆಮೋ ಕಳುಹಿಸಿದ್ದಾರೆ.
ಬೆಂಗಳೂರು, ಏ 11: ಹಣೆಗೆ ಕುಂಕುಮ, ವಿಭೂತಿ ಹಚ್ಕೋಬೇಡಿ, ಕೈಗೆ ದಾರ ಕಟ್ಕೋಬೇಡಿ ಎಂದು ತಮ್ಮ ಸಿಬ್ಬಂದಿಗಳಿಗೆ ಪೊಲೀಸ್ ಆಯುಕ್ತರು ಫರ್ಮಾನು ಹೊರಡಿಸಿದ್ದಾರೆ.
ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿನ ಕೆಲವು ಪೊಲೀಸ್ ಸಿಬ್ಬಂದಿಗಳು ಅಶಿಸ್ತು ತೋರುತ್ತಿದ್ದಾರೆ ಎನ್ನುವ ದೂರಿನ ಹಿನ್ನಲೆಯಲ್ಲಿ, ತಮ್ಮ ಸಿಬ್ಬಂದಿಗಳು ಕರ್ತವ್ಯದ ವೇಳೆ, ಕುಂಕುಮ, ವಿಭೂತಿ ಹಚ್ಚದಂತೆ, ಕೈಗೆ ಕುತ್ತಿಗೆಗೆ ದಾರ ಕಟ್ಟಿಕೊಳ್ಳದಂತೆ ಮತ್ತು ಕಿವಿಗೆ ಓಲೆಯೂ ಧರಿಸದಂತೆ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ಇದರ ಜೊತೆಗೆ ಶೂ ಪಾಲಿಷ್ ಆಗಿರಬೇಕು, ಕೂದಲು ಕತ್ತರಿಸಿಕೊಂಡಿರಬೇಕು ಮತ್ತು ಕರ್ತವ್ಯದಲ್ಲಿದ್ದಾಗ ಕಡ್ಡಾಯವಾಗಿ ಸಮವಸ್ತ್ರ ಧರಿಸಿರಬೇಕು ಎಂದು ಆಯುಕ್ತರು ಆದೇಶಿಸಿದ್ದಾರೆ.
ಪೊಲೀಸ್ ಕೈಪಿಡಿಯಲ್ಲಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ನಗರದ ಎಂಟು ವಲಯಗಳ ಡಿಸಿಪಿಗಳಿಗೆ ಪೊಲೀಸ್ ಆಯುಕ್ತರು ಮೆಮೋ ಕಳುಹಿಸಿದ್ದಾರೆ.
ಕಮಿಷನರ್ ಅವರ ಮೆಮೋ ಪ್ರತಿಯನ್ನು ನಗರದ ಎಲ್ಲಾ ಠಾಣೆಗಳಿಗೆ ಡಿಸಿಪಿ ಮುಖಾಂತರ ರವಾನಿಸಲಾಗಿದೆ.
ಪೊಲೀಸ್ ಇಲಾಖೆ ಯಾವುದೇ ಜಾತಿಗೆ ಸೀಮಿತವಾಗಿಲ್ಲ, ಎಲ್ಲಾ ಧರ್ಮದವರು ಸಮಸ್ಯೆ ಹೇಳಿಕೊಂಡು ಪೊಲೀಸರ ಬಳಿ ಬರುತ್ತಾರೆ. ಹಾಗಾಗಿ ಈ ನಿಯಮವನ್ನು ರೂಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಪೊಲೀಸ್ ಆಯುಕ್ತರ ಹೊಸ ನಿಯಮಕ್ಕೆ ಇಲಾಖೆಯಲ್ಲಿ ಅಲ್ಲಲ್ಲಿ ಅಪಸ್ವರವೂ ಕೇಳಿಬರುತ್ತಿದೆ. ಪೊಲೀಸ್ ಕೈಪಿಡಿಯಲ್ಲಿರುವ ಕೆಲವೊಂದು ನಿಯಮಗಳನ್ನು ಬದಲಿಸಬೇಕು ಎನ್ನುವ ಮಾತೂ ಕೇಳಿಬರುತ್ತಿದೆ.
ಹಣೆಗೆ ಕುಂಕುಮ ಹಚ್ಚಿಕೊಳ್ಳುವಂತಿಲ್ಲ ಎನ್ನುವ ಹೊಸ ಕಾನೂನಿನಿಂದ ಮಹಿಳಾ ಸಿಬ್ಬಂದಿಗಳು ಇದನ್ನು ಪಾಲಿಸಲೇಬೇಕಾದ ಅನಿವಾರ್ಯತೆಗೆ ಬಿದ್ದಿದ್ದಾರೆ.