3ನೇ ಹಂತದ ಮೆಟ್ರೋ ಮಾರ್ಗ ಮತ್ತೆ ಬದಲು, ಕೈಬಿಟ್ಟ ಮಾರ್ಗಗಳು?
ಬೆಂಗಳೂರು, ಏ.12: ನಮ್ಮ ಮೆಟ್ರೋ 3ನೇ ಹಂತದ ಮಾರ್ಗಗಳನ್ನು ಮತ್ತೆ ಬದಲಾಯಿಸಲು ಬಿಎಂಆರ್ಸಿಎಲ್ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮೂರನೇ ಹಂತದ ಮಾರ್ಗಗಳನ್ನು ಬಜೆಟ್ನಲ್ಲಿ ಘೋಷಿಸಿದ್ದರು.
ಅದು ಜೆಪಿನಗರದಿಂದ ಹೊರವರ್ತುಲ ರಸ್ತೆಯಲ್ಲಿ ಹೆಬ್ಬಾಳ-ಕೆಆರ್ ಪುರ, ಟೋಲ್ಗೇಟ್-ಕಡಬಗೆರೆ, ಗೊಟ್ಟಿಗೆರೆ-ಬಸವಪುರ, ಆರ್ಕೆ ಹೆಗಡೆನಗರ-ಏರೋ ಸ್ಪೇಸ್ ಪಾರ್ಕ್, ಕೋಗಿಲು ಕ್ರಾಸ್ ರಾಜಾನುಕುಂಟೆ, ಇಬ್ಬಲೂರು- ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ಸೇರಿ ಒಟ್ಟು 105 ಕಿ.ಮೀ ಮಾರ್ಗ ನಿರ್ಮಾಣವಾಗಲಿದೆ ಎಂದು ಹೇಳಲಾಗಿತ್ತು.

ಈ ಮಾರ್ಗಕ್ಕೆ ಎಲಿವೇಟೆಡ್ ಕಾರಿಡಾರ್ ತೊಂದರೆ
2013ರಲ್ಲಿ ಮೆಟ್ರೋ ಮೂರನೇ ಹಂತದ ಕಾರ್ಯಸಾಧ್ಯತಾ ವರದಿ ತಯಾರಿ ಸಂದರ್ಭದಲ್ಲಿ ಹೊಸಕೆರೆಹಳ್ಳಿ ಮಾರತ್ಹಳ್ಳಿ ಹಾಗೂ ಇಬ್ಬಲೂರು-ಹೆಬ್ಬಾಳ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಬಿಎಂಆರ್ಸಿಎಲ್ ಚಿಂತನೆ ನಡೆಸಿತ್ತು. ಇದೀಗ ಸರ್ಕಾರ 102ಕಿ.ಮೀ ಎಲಿವೇಟೆಡ್ ಕಾರಿಡಾರ್ ಹಾಗೂ ಪಾಡ್ ಟ್ಯಾಕ್ಸಿ ಯೋಜನೆ ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಎರಡೂ ಮಾರ್ಗಗಳನ್ನು ಮೂರನೇ ಹಂತದಲ್ಲಿ ಕೈಬಿಡಲಾಗಿದೆ.

ಯಾವ ಮಾರ್ಗ ಮತ್ತೆ ಸೇರ್ಪಡೆ
ನಿಗಮ ಇತ್ತೀಚೆಗೆ ಸಿದ್ಧಪಡಿಸಿರುವ ಮೂರನೇ ಹಂತದ ಮೆಟ್ರೋ ವಿನ್ಯಾಸದಲ್ಲಿ ಬೊಮ್ಮಸಂದ್ರ-ಅತ್ತಿಬೆಲೆ ಮಾರ್ಗ ಮತ್ತೆ ಸೇರ್ಪಡೆಯಾಗಿದೆ. ಜೊತೆಗೆ ಮಾಗಡಿ ಟೋಲ್ಗೇಟ್-ಕಡಬಗೆರೆ ಮಾರ್ಗದ ಬದಲು ಮಾಗಡಿ ರಸ್ತೆ ಮೆಟ್ರೋ ನಿಲ್ದಾಣ-ಸೀಗೆಹಳ್ಳಿ ಮಾರ್ಗ ನಿರ್ಮಾಣಕ್ಕೆ ನಿಗಮ ಆಲೋಚನೆ ನಡೆಸಿದೆ.

ಎರಡನೇ ಹಂತದಲ್ಲೇ ಒಆರ್ಆರ್
ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಕೆಆರ್ಪುರದಿಂದ ಹೆಬ್ಬಾಳ ಮೂಲಕ ಕೆಐಎವರೆಗೆ ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿದೆ. ಈ ಮಾರ್ಗಕ್ಕೆ 2ಬಿ ಎಂದು ಹೆಸರಿಡಲಾಗಿದೆ. ಹೀಗಾಗಿ ಮೆಟ್ರೋ ಮೂರನೇ ಹಂತದಲ್ಲಿ ಹೊರವರ್ತುಲ ರಸ್ತೆಯಲ್ಲಿ ಒಆರ್ಆರ್ ನಿರ್ಮಾಣವಾಗಬೇಕಿದ್ದ ಹೆಬ್ಬಾಳ-ಕೆಆರ್ ಪುರ ಮೆಟ್ರೋ ಮಾರ್ಗ ಎರಡನೇ ಹಂತದಲ್ಲೇ ನಿರ್ಮಾಣವಾಗಲಿದೆ.

ಎಲ್ಲಾ ಮೆಟ್ರೋ ರೈಲನ್ನು ಆರು ಬೋಗಿಗಳಾಗಿ ಪರಿವರ್ತಿಸಿ: ಪ್ರಯಾಣಿಕರ ಒತ್ತಾಯ
ಎಲ್ಲಾ ಮೆಟ್ರೋ ರೈಲುಗಳನ್ನು ಆರು ಬೋಗಿಗಳಾಗಿ ಪರಿವರ್ತನೆ ಮಾಡಿ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಈಗಾಗಲೇ ಎರಡನೇ ಹಂತದ ಮೆಟ್ರೋಗೆ ಆರು ಬೋಗಿಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ. ಆದರೆ ಮೊದಲ ಹಂತದಲ್ಲಿಯೇ ಎರಡೂ ಮಾರ್ಗಗಳು ಸಂಪೂರ್ಣವಾಗಿ ಆರು ಬೋಗಿಗಳಾಗಿ ಪರಿತರ್ವನೆಯಾಗಿಲ್ಲ. ಇದುವರೆಗೆ ಒಟ್ಟು 10 ಆರು ಬೋಗಿಗಳ ಮೆಟ್ರೋ ಸಂಚಾರ ಆರಂಭಗೊಂಡಿದೆ. ನೇರಳೆ ಮಾರ್ಗದಲ್ಲಿ 9 ಹಾಗೂ ಹಸಿರು ಮಾರ್ಗದಲ್ಲಿ ಕೇವಲ ಒಂದು ಆರು ಬೋಗಿಯ ಮೆಟ್ರೋ ಸಂಚರಿಸುತ್ತಿದೆ.
ಮಾರ್ಚ್ ಅಂತ್ಯದೊಳಗೆ ಒಟ್ಟು 25 ರೈಲುಗಳನ್ನು ಆರು ಬೋಗಿಯ ರೈಲುಗಳನ್ನಾಗಿ ಪರಿವರ್ತಿಸುತ್ತೇವೆ ಎಂದು ಬಿಎಂಆರ್ಸಿಎಲ್ ಭರವಸೆ ನೀಡಿತ್ತು. ಆಗಸ್ಟ್ ಒಳಗೆ 50 ರೈಲುಗಳನ್ನು ಪರಿವರ್ತಿಸಲಾಗುತ್ತದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಬೆಂಗಳೂರು ಮೆಟ್ರೋ ನಿಗಮವು ಕೆಂಪೇಗೌಡ ಏರ್ಪೋರ್ಟ್ಗೆ ನಿರ್ಮಿಸುತ್ತಿರುವ ಎರಡನೇ ಹಂತದ ಮೆಟ್ರೋ ಮಾರ್ಗದಿಂದ ಕಸ್ತೂರಿನಗರ ನಿಲ್ದಾಣವನ್ನು ಕೈಬಿಟ್ಟಿದೆ. ಬಿಎಂಆರ್ಸಿಎಲ್ ಮೂಲಗಳ ಪ್ರಕಾರ ಏರ್ಪೋರ್ಟ್ ಮಾರ್ಗದಲ್ಲಿ 17 ನಿಲ್ದಾಣವನ್ನು ಗುರುತಿಸಲಾಗಿದೆ.
ಒಟ್ಟು 33.4 ಕಿ.ಮೀ ವ್ಯಾಪ್ತಿಯಲ್ಲಿ 17 ನಿಲ್ದಾಣಗಳು ಬರಲಿವೆ. ಕೆಆರ್ ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಧ್ಯೆ ಕೆಆರ್ ಪುರಂ, ಚನ್ನಸಂದ್ರ, ಹೊರಮಾವು, ಕಲ್ಯಾಣನಗರ, ಎಚ್ಆರ್ಬಿಆರ್ ಲೇಔಟ್, ಎಚ್ಬಿಆರ್ ಲೇಔಟ್, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ ಕ್ರಾಸ್, ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು, ಕೋಗಿಲು ಕ್ರಾಸ್, ಪೆರಿಫೆರಲ್ ರಿಂಗ್ ರಸ್ತೆ, ಟ್ರಂಪೆಟ್ ಇಂಟರ್ ಸೆಕ್ಷನ್ ಹಾಗೂ ಕೆಐಎದಲ್ಲಿ ಎರಡು ನಿಲ್ದಾಣಗಳು ಬರಲಿವೆ.
ಏರ್ಪೋರ್ಟ್ನಲ್ಲಿ ಬರುವ ಎರಡು ನಿಲ್ದಾಣಗಳು ಸುರಂಗ ಮಾರ್ಗಗಳಾಗಿರುತ್ತವೆ. ಬಿಎಂಆರ್ಸಿಎಲ್ ಮೂಲಗಳ ಪ್ರಕಾರ ಕಸ್ತೂರಿನಗರ ನಿಲ್ದಾಣವನ್ನು ಕೈಬಿಟ್ಟಿದೆ.
ಮೆಟ್ರೋ ನಿಲ್ದಾಣ ನಿರ್ಮಿಸಲು ಜಾಗದ ಕೊರತೆ ಇರುವ ಕಾರಣ ನಿರ್ಮಾಣ ಯೋಜನೆ ಕೈಬಿಡಲಾಗಿದೆ. ಚನ್ನಸಂದ್ರ, ಹೊರಮಾವು, ಕಲ್ಯಾಣನಗರದಲ್ಲಿ ಇನ್ನೂ ಭೂಮಿ ಖರೀದಿಸಬೇಕಿದೆ.












Click it and Unblock the Notifications