ಪೆರೋಲ್ ಮೇಲೆ ತೆರಳಿ ಹದಿನಾಲ್ಕು ವರ್ಷ ತಲೆಮರೆಸಿಕೊಂಡದ್ದ ಕೈದಿ ಪತ್ತೆ !
ಬೆಂಗಳೂರು, ಜ. 29: ನಮ್ಮ ತಾಯಿಗೆ ಮೈಯಲ್ಲಿ ಹುಷಾರಿಲ್ಲ ಎಂದು ಹೇಳಿ ಪೆರೋಲ್ ಮೇಲೆ ತೆರಳಿ ಹದಿನಾಲ್ಕು ವರ್ಷದಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಸಜಾ ಬಂಧಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.
ಕರುಣಾಕರನ್ ಬಂಧಿತ ಅರೋಪಿ. ಕುಂದಾಪುರ ಮೂಲದ ಕರುಣಾಕರನ್ 1998 ರಲ್ಲಿ ನಡೆದಿದ್ದ ಸಂಜೀವ್ ಎಂಬಾತನ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಅಂದಿನಿಂದ ಜೈಲಿನಲ್ಲಿದ್ದ ಕರುಣಾಕರನ್ 2008 ರಲ್ಲಿ ತನ್ನ ತಾಯಿಗೆ ಮೈಯಲ್ಲಿ ಹುಷಾರಿಲ್ಲ, ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಮನವಿ ಸಲ್ಲಿಸಿದ್ದ.
ಈತನನ್ನು ಪೆರೋಲ್ ಮೇಲೆ ಬಿಡಬಾರದು ಎಂದು ಮಡಿವಾಳ ಪೊಲೀಸರು ವರದಿ ನೀಡಿದ್ದರು. ಇಷ್ಟಾಗಿಯೂ ಜೈಲಿನ ಅಧಿಕಾರಿಗಳು ಪೆರೋಲ್ ಮೇಲೆ ಬಿಡುಗಡೆ ಮಾಡಿದ್ದರು.
2008ರಲ್ಲಿ ಪೆರೋಲ್ ಮೇಲೆ ತೆರಳಿದ ಕರುಣಾಕನರ್ ಮನೆಗೆ ಹೋಗಿಲ್ಲ. ಬದಲಿಗೆ ಹಾವೇರಿ ಜಿಲ್ಲೆಯ ಹಾನಗಲ್ಗೆ ತೆರಳಿದ್ದ. ಅಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡು ಬರೋಬ್ಬರಿ ಹದಿನಾಲ್ಕು ವರ್ಷ ಹೆಸರು ಬದಲಿಸಿಕೊಂಡು ಜೀವನ ಮಾಡಿದ್ದಾನೆ. ಇದರ ನಡುವೆ ತನ್ನ ಸಹೋದರಿಯ ಮದುವೆಯನ್ನು ಮಾಡಿ ಮುಗಿಸಿದ್ದಾನೆ. ಬಳಿಕ ಹಾನಗಲ್ನಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ. ಈತ ಪೆರೋಲ್ ಮೇಲೆ ತೆರಳಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು.
ಹಳೇ ಪ್ರಕರಣದ ಜಾಡು ಹಿಡಿದು ನಿರಂತರ ತನಿಖೆ ನಡೆಸುತ್ತಿದ್ದ ಮಡಿವಾಳ ಪೊಲೀಸರಿಗೆ ಕರುಣಾಕರನ್ ಎಂಬಾತ ಹಾನಗಲ್ನಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅಲ್ಲಿಗೆ ಸಿಬ್ಬಂದಿ ಹೋಗಿ ನೋಡಿದಾಗ ಪೆರೋಲ್ ಮೇಲೆ ಹೋಗಿದ್ದ ಕರುಣಾಕರನ್ ಈತನೇ ಎಂಬುದು ಗೊತ್ತಾಗಿದೆ. ಕೂಡಲೇ ಆತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಒಪ್ಪಿಸಲಾಗಿದೆ.
ಹಳೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ದಾಖಲೆಗಳು ಕೂಡ ಇರಲಿಲ್ಲ. ಪೆರೋಲ್ ಮೇಲೆ ಹೋಗಿ ತಪ್ಪಿಸಿಕೊಂಡಿದ್ದ ಕರುಣಾಕರನ್ ಸ್ವಂತ ಊರಿನಲ್ಲಿ ಹುಡುಕಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಬಾತ್ಮಿದಾರರು ನೀಡಿದ ಮಾಹಿತಿ ಮೇರೆಗೆ ಹಾನಗಲ್ನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಕರುಣಾಕರನ್ ಬಗ್ಗೆ ಮಾಹಿತಿ ಪಡೆದು ವಶಕ್ಕೆ ಪಡೆದು ವಿಚಾರಣೆ ನೆಡೆಸಿದಾಗ ಪೆರೋಲ್ ಮೇಲೆ ಬಂದು ತಪ್ಪಿಸಿಕೊಂಡಿದ್ದ ವಿಷಯ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Recommended Video