Namma Metro Fare: ಬೆಂಗಳೂರು ಮೆಟ್ರೋ ದೆಹಲಿಗಿಂತ ಎಷ್ಟು ದುಬಾರಿ? ದರ ವಿವರಣೆ ನೀಡಿದ ತೇಜಸ್ವಿ ಸೂರ್ಯ
ಇತ್ತೀಚೆಗಷ್ಟೇ ಬೆಂಗಳೂರಿಗರ ಒಡನಾಡಿಯಾಗಿದ್ದ ನಮ್ಮ ಮೆಟ್ರೋ ಪ್ರಯಾಣ ದರ ಏರಿಸುವ ಮೂಲಕ ಮೆಟ್ರೋ ಬಳಕೆದಾರರಿಗೆ ಬಿಗ್ ಶಾಕ್ ನೀಡಲಾಗಿತ್ತು. ಏಕಾಏಕಿ ದುಬಾರಿ ದರ ಏರಿಕೆ ಮಾಡಿದ್ದರಿಂದ ಪ್ರಯಾಣಿಕರಿಂದ ವಿರೋಧವೂ ವ್ಯಕ್ತವಾಗಿತ್ತು. ಇದರಿಂದ ಮೆಟ್ರೋ ಬಳಕೆದಾರರ ಸಂಖ್ಯೆ ಕೂಡ ಕಡಿಮೆ ಆಯ್ತು. ದೆಹಲಿಗೆ ಹೋಲಿಸಿದರೆ ನಮ್ಮ ಬೆಂಗಳೂರು ಮೆಟ್ರೋ ಪ್ರಯಾಣ ದರ ದುಬಾರಿಯಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಅಂಕಿಅಂಶ ಸಹಿತ ಆರೋಪ ಮಾಡಿದ್ದಾರೆ. ರಾಷ್ಟ್ರರಾಜಧಾನಿಗಿಂತಲೂ ದುಬಾರಿಯಾದ ದರ ಬೆಂಗಳೂರಿನಲ್ಲೇಕೆ? ಎಂದು ಬಿಎಂಆರ್ಸಿಎಲ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು ಮೆಟ್ರೋದ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 10 ಲಕ್ಷ. ಮುಖ್ಯವಾಗಿ ಸಾಮಾನ್ಯ ಜನರು, ವಿದ್ಯಾರ್ಥಿಗಳು ಮತ್ತು ಐಟಿ ಮತ್ತು ಬಿಟಿ ವಲಯದ ಉದ್ಯೋಗಿಗಳು ಮೆಟ್ರೋ ಬಳಸುತ್ತಾರೆ. ಹೀಗಿರುವಾಗ ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್ಸಿಎಲ್) ಮೆಟ್ರೋ ದರಗಳನ್ನು ಹೆಚ್ಚಿಸಿದಾಗ, ಅದು ಬೆಂಗಳೂರು ಮೆಟ್ರೋ ದೇಶದ ಅತ್ಯಂತ ದುಬಾರಿ ಮೆಟ್ರೋವನ್ನಾಗಿ ಮಾಡಿದೆ. ಇದಕ್ಕೆ ವಿರುದ್ಧವಾಗಿ ದೆಹಲಿ ಮೆಟ್ರೋ ದರ ಹೆಚ್ಚಳವು ಸಮಂಜಸ ಮತ್ತು ಕೈಗೆಟುಕುವಂತಿದ್ದು, ಗರಿಷ್ಠ ₹4 ಮಾತ್ರ ಹೆಚ್ಚಳವಾಗಿದೆ ಎಂದು ತೇಜಸ್ವಿ ಸೂರ್ಯ ವಿವರಿಸಿದ್ದಾರೆ.

ಸಾಮಾನ್ಯ ಮೆಟ್ರೋ ಬಳಕೆದಾರರು ಈಗ ತಮ್ಮ ನಿವಾಸದಿಂದ ಕೆಲಸಕ್ಕೆ 25 ಕಿ.ಮೀ.ಗಿಂತ ಹೆಚ್ಚು ಪ್ರಯಾಣಿಸುವವರು ಪ್ರತಿ ಪ್ರಯಾಣಕ್ಕೆ ಸುಮಾರು ₹90ವರೆಗೆ ಪಾವತಿಸಬೇಕಾಗುತ್ತದೆ. ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕಕ್ಕಾಗಿ ಹೆಚ್ಚುವರಿ ವೆಚ್ಚಗಳನ್ನು ಹೊರತುಪಡಿಸಿ ಈ ದುಬಾರಿ ಪ್ರಯಾಣ ದರವಿದೆ. ಈ ದುರದೃಷ್ಟಕರ ಪರಿಸ್ಥಿತಿಯು ಸಾರ್ವಜನಿಕ ಸಾರಿಗೆಯನ್ನು ಅಳವಡಿಸಿಕೊಳ್ಳುವುದನ್ನು ಮತ್ತು ಖಾಸಗಿ ವಾಹನಗಳನ್ನು ಪ್ರೋತ್ಸಾಹಿಸುವುದಕ್ಕೆ ಮಾರಕವಾಗಿದೆ.
ಆದರೆ ಈ ಹೆಚ್ಚಳವನ್ನು ಯಾವ ಆಧಾರದ ಮೇಲೆ ಜಾರಿಗೆ ತರಲಾಯಿತು? ಶುಲ್ಕ ನಿಗದಿ ಸಮಿತಿ (ಎಫ್ಎಫ್ಸಿ) ವರದಿಯನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಗೌರವಾನ್ವಿತ ಹೈಕೋರ್ಟ್ ಮುಂದೆ ನಿಲುವು ತೆಗೆದುಕೊಂಡಿದ್ದರೂ ಬಿಎಂಆರ್ಸಿಎಲ್ ಹಾಗೆ ಮಾಡಲು ವಿಫಲವಾಗಿದೆ. ರಾಜ್ಯ ಸರ್ಕಾರ ಮತ್ತು ನಮ್ಮ ಮೆಟ್ರೋ ಕೂಡಲೇ ಎಫ್ಎಫ್ಸಿ ವರದಿಯನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ನಾನು ಮತ್ತೊಮ್ಮೆ ಒತ್ತಾಯಿಸುತ್ತೇನೆ. ಏಕೆಂದರೆ ಸಾರ್ವಜನಿಕ ಹಿತಾಸಕ್ತಿ ಅತ್ಯಂತ ಮುಖ್ಯ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಮ್ಮ ಸರ್ಕಾರದಿಂದ ತೆರಿಗೆ ಕಡಿತ
ಕಪಟಿ ರಾಜ್ಯ ಸರ್ಕಾರ ನಿಜವಾಗಿಯೂ ಬಡವರ ಪರವಾಗಿದೆಯೇ? ಎಂದು ಒಂದು ಸರಳ ಪ್ರಶ್ನೆ ಕೇಳಲು ಬಯಸುತ್ತೇನೆ. ಹಾಲು, ಸ್ಟಾಂಪ್ ಡ್ಯೂಟಿ ಮತ್ತು ಮೆಟ್ರೋ ದರಗಳ ಹೆಚ್ಚಳದಿಂದ ಹಿಡಿದು 41ಕ್ಕೂ ಹೆಚ್ಚು ವಿವಿಧ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಶ್ರೀಮಂತರ ಪರವಾಗಿದೆ ಎಂದು ಅವರು ಕಾಂಗ್ರೆಸ್ನವರು ಆರೋಪಿಸುತ್ತಾರೆ. ನಿಜವಾಗಿ ನಮ್ಮ ಸರ್ಕಾರ ರೈತರಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಎಲ್ಲ ವಲಯಗಳಲ್ಲಿ ತೆರಿಗೆ ಕಡಿತ ಮಾಡಿದೆ. ಕಾಂಗ್ರೆಸ್ ಸರ್ಕಾರವು ಈ ಬೂಟಾಟಿಕೆಯನ್ನು ನಿಲ್ಲಿಸಿ, ನಾಗರಿಕ-ಕೇಂದ್ರಿತ ವಿಧಾನದೊಂದಿಗೆ ತಳಮಟ್ಟದಿಂದ ಆಡಳಿತದ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸುವ ಸಮಯ ಇದು ಎಂದಿದ್ದಾರೆ.












Click it and Unblock the Notifications