Bengaluru Weather: ಭಾನುವಾರ ಬೆಳ್ಳಂಬೆಳಗ್ಗೆ ನಗರದಲ್ಲಿ ತುಂತುರು ಮಳೆ, ಹವಾಮಾನ ಮುನ್ಸೂಚನೆ ವರದಿ
ಬೆಂಗಳೂರು, ಜನವರಿ 19: ರಾಜ್ಯ ರಾಜ್ಯಧಾನಿ, ಉದ್ಯಾನನಗರಿ ಬೆಂಗಳೂರು ಇಂದು ಭಾನುವಾರ (ಜ.19) ಬೆಳ್ಳಂಬೆಳಗ್ಗೆಯೇ ತುಂತುರು ಮಳೆಗೆ ಸಾಕ್ಷಿಯಾಗಿದೆ. ಒಣಹವೆಯ ವಾತಾವರಣ ಎರಡು ದಿನಗಳಿಂದ ಮರೆಯಾಗಿದ್ದು, ಚಳಿ ಆವರಿಸಿಕೊಂಡಿದೆ. ನಗರದ ಅನೇಕ ಕಡೆಗಳಲ್ಲಿ ಸೋನೆ ಮಳೆ ಆಗಿದ್ದು, ಈ ಮಳೆ ಸೋಮವಾರವು ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಥಂಡಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥರು ಮುನ್ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಕನಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್ನಷ್ಟು ಕುಸಿದಿದೆ. ಕೋರಮಂಗಲ, ಎಚ್ಎಸ್ಆರ್ ಬಡಾವಣೆ, ದೊಮ್ಮಲೂರು, ಹನೂರು, ಹೊರಮಾವು, ಕಿತ್ತಗಾನಹಳ್ಳಿ, ಚನ್ನಸಂದ್ರ, ಶ್ರೀನಗರ, ವಿವಿಪುರಂ, ಎಚ್ಎಎಲ್ ವಿಮಾನ ನಿಲ್ದಾಣ ಸೇರಿದಂತೆ ನಗರ ಅನೇಕ ಬಡಾವಣೆಗಳಲ್ಲಿ ಹಗುರ ಮಳೆ ದಾಖಲಾಗಿದೆ.

ಒಣಹವೆಗೆ ತುತ್ತಾಗಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಇಂದು ಭಾನುವಾರ ಸಂಜೆವರೆಗೂ ಅಲ್ಲಲಿ ಮಳೆ ಬರುವ ಸಾಧ್ಯತೆಗಳು ಇವೆ. ಬೆಳಗ್ಗೆ 5 ಗಂಟೆಗೆ ಶುರುವಾದ ಮಳೆಯು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕೆಲವು ಬಡಾವಣೆಗಳಲ್ಲಿ ಸುರಿದಿದೆ. ಸಾಮಾಜಿಕ ಜಾಲತಾಣದಲ್ಲಿ #BengaluruRains ಪೋಟೋಗಳು ಹರಿದಾಡುತ್ತಿವೆ.
ಜನವರಿ 20 ರಂದು ಸೋಮವಾರವು ಬೆಂಗಳೂರು ನಗರಕ್ಕೆ ವ್ಯಾಪಕ ಮಳೆ ಎಚ್ಚರಿಕೆ ನೀಡಲಾಗಿದೆ. ಮಬ್ಬು ವಾತಾವರಣ ಕವಿಯಲಿದ್ದು, ತಾಪಮಾನ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 27-28 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ.
ತಮಿಳುನಾಡು ಕರಾವಳಿಗೆ ಕೊಂಚ ದೂರದಲ್ಲಿ ಬಂಗಾಳ ಉಪಸಾಗರದ ಮೇಲ್ಮೈನಲ್ಲಿ 0.9 ಕಿಲೋ ಮೀಟರ್ ಎತ್ತದಲ್ಲಿ ಸುಳಿಗಾಳಿ ನಿರ್ಮಾನವಾಗಿದೆ. ಇದರ ಪ್ರಭಾವದಿಂದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಮಳೆ ಎಚ್ಚರಿಕೆ ಕೊಡಲಾಗಿದೆ. ಸೋಮವಾರದ ನಂತರ ವಾತಾವರಣದಲ್ಲಿ ಯಥಾ ಸ್ಥಿತಿ ಮುಂದುವರಿಯುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ಹನ್ನೊಂದು ಜಿಲ್ಲೆಗಳಿಗೆ ಮಳೆ, ಚಳಿ ಎಚ್ಚರಿಕೆ
ಇನ್ನೂ ಕರ್ನಾಟಕದ ಹತ್ತೊಂದು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ವ್ಯಾಪಕ ಮಳೆ ಆಗುವ ಮುನ್ಸೂಚನೆ ಇದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಮಾತ್ರವಲ್ಲದೇ ಮಲೆನಾಡಿನ ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಭಾಗಗಳಲ್ಲಿ ದಟ್ಟ ಮಂಜು ಆವರಿಸಲಿದ್ದು, ಚಳಿ ಪ್ರಮಾಣ ಏರಿಕೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.












Click it and Unblock the Notifications